ಬೆಂಗಳೂರು, ಜ.26- ಗಣರಾಜ್ಯೋತ್ಸವ ಸಂದರ್ಭದಲ್ಲಿ ರೈತ ಸಮುದಾಯ ಹಾಗೂ ಸರ್ಕಾರಕ್ಕೆ ಸಂಘರ್ಷ ಏರ್ಪಟ್ಟಿರುವುದು ಪ್ರಜಾಪ್ರಭುತ್ವಕ್ಕೆ ಆಗಿರುವ ಅವಮಾನ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಜೆಡಿಎಸ್ ಪ್ರಧಾನ ಕಚೇರಿ ಜೆ.ಪಿ.ಭವನದಲ್ಲಿ 72 ನೇ ಗಣರಾಜ್ಯೋತ್ಸವ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ರೈತರ ಕಾಯಿದೆ ತಿದ್ದುಪಡಿ ವಿಚಾರದಲ್ಲಿ ಸುಪ್ರೀಮ ಕೋರ್ಟ ಮಧ್ಯ ಪ್ರವೇಶ ಮಾಡಿದ್ದರೂ ಇದನ್ನು ಬಗೆಹರಿಸಲು ಆಗಲಿಲ್ಲ. ಗಣರಾಜ್ಯೋತ್ಸವ ಸಮಾರಂಭ ಮುಗಿದ ಬಳಿಕ ರೈತರು ದೆಹಲಿಯಲ್ಲಿ ಟ್ರಾಕ್ಟರ್ ಜಾಥಾಕ್ಕೆ ಮುಂದಾಗಿದ್ದಾರೆ. ಸರ್ಕಾರವೇ ಇದಕ್ಕೆ ಅವಕಾಶ ಮಾಡಿಕೊಟ್ಟಿದೆ. ರಾಜ್ಯದಲ್ಲಿ ಕೂಡಾ ರೈತರು ಟ್ರಾಕ್ಟರ್ ಜಾಥಾಕ್ಕೆ ಮುಂದಾಗಿದ್ದಾರೆ ಎಂದರು.
ನಾನು ಸಾಮಾನ್ಯವಾಗಿ ಈ ಸಂದರ್ಭದಲ್ಲಿ ದೆಹಲಿಯಲ್ಲಿ ಇರುತ್ತಿದ್ದೆ. ಆದರೆ ಆರೋಗ್ಯದ ಸಮಸ್ಯೆ ಇರುವ ಕಾರಣದಿಂದ ಇಲ್ಲಿಯೇ ಪಕ್ಷದ ಕಚೇರಿಯಲ್ಲಿ ಆಚರಣೆ ಮಾಡುತ್ತಿದ್ದೇನೆ. ಸ್ವಾತಂತ್ರ್ಯ ಅಥವಾ ಗಣರಾಜ್ಯೋತ್ಸವ ದಿನಾಚರಣೆಯ ದಿನ ಏನೇ ಕಷ್ಟಗಳಿದ್ದರೂ ಪಕ್ಷದ ಕಚೇರಿಯಲ್ಲಿ ಆಚರಣೆ ನಡೆಯುತ್ತದೆ ಎಂದರು.
ನಾನು ಸಂದೇಶ ಕೊಡುವುದಕ್ಕೆ ಯಾವುದೇ ಅಧಿಕಾರದಲ್ಲಿ ಇಲ್ಲ ಎಂದು ಮಾರ್ಮಿಕವಾಗಿ ನುಡಿದ ದೇವೇಗೌಡ, ದೇಶದ ಹಲವಾರು ಸಮಸ್ಯೆಗಳನ್ನು ಒಟ್ಟಾಗಿ ಬಗೆಹರಿಸಿಕೊಳ್ಳಬೇಕು. ಆದರೆ ಅಂತಹ ವಾತಾವರಣ ದೇಶದಲ್ಲಿ ಇಲ್ಲ. ಪ್ರತಿಯೊಂದಕ್ಕೂ ಸಂಘರ್ಷದ ಹಾದಿ ಹಿಡಿಯುತ್ತಿದ್ದೇವೆ. ನಾನು ಅಧಿಕಾರದಲ್ಲಿ ಇದ್ದಾಗ ಯಾವುದೇ ಸಂಘರ್ಷಕ್ಕೆ ಅವಕಾಶ ಕೊಡಲಿಲ್ಲ ಎಂದು ತಿಳಿಸಿದರು.
ದೇಶವನ್ನು ಕೊರೋನಾ ಸೋಂಕು ಕಾಡುತ್ತಿದೆ. ಸೋಂಕಿನಿಂದ ಅನೇಕರು ಸಹ ನಮ್ಮ ದೇಶದಲ್ಲಿ ಸಾವನ್ನಪ್ಪಿದ್ದಾರೆ. ಇದಕ್ಕೆ ನಮ್ಮ ವಿಜ್ಞಾನಿಗಳು ಲಸಿಕೆ ಕಂಡು ಹಿಡಿದಿರುವುದು ಹೆಮ್ಮೆಯ ವಿಚಾರ ಎಂದರು.
ಮುಂದಿನ ರಾಜ್ಯಸಭೆ ಲೋಕಸಭಾ ಚುನಾವಣೆಗಳಲ್ಲಿ ಭಾಗವಹಿಸಲು ಸಂಕಲ್ಪ ಮಾಡಿದ್ದೇನೆ.ರೈತರ ಕಾಯಿದೆ ರಾಜ್ಯಸಭೆಯಲ್ಲಿ ಮಂಡನೆ ಮಾಡಿದ ಸಂಧರ್ಭದಲ್ಲಿ ನಾನೂ ಇದ್ದೆ. ಅಂದೇ ನಾನು ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದೆ. ಲೋಕಸಭೆಯಲ್ಲಿ ಬಿಜೆಪಿಗೆ ಬಹುಮತ ಇತ್ತು. ಆದರೆ ರಾಜ್ಯ ಸಭೆಯಲ್ಲಿ ರಾತ್ರಿ ಹತ್ತು ಗಂಟೆ ವೇಳೆಗೆ ಬಿಲ್ ತರಲಾಯಿತು. ಸಂಘರ್ಷದ ಮೂಲಕ ಬಲ್ ಪಾಸ್ ಮಾಡಿಕೊಳ್ಳಲು ಮುಂದಾದರು. ಇದು ಪ್ರಜಾಪ್ರಭುತ್ವಕ್ಕೆ ಅವಮಾನ. ಎರಡು ಅಥವಾ ಮೂರು ತಿಂಗಳು ಮಸೂದೆಯನ್ನು ಮುಂದೂಡಿ ಜಂಟಿ ಸಮಿತಿ ಮಾಡಿ ಆ ನಂತರ ಬಿಲ್ ಪಾಸ್ ಮಾಡಿಕೊಳ್ಳಬಹುದಿತ್ತು. ನಾನೂ ಇದೇ ಸಲಹೆ ಕೊಟ್ಟಿದ್ದೆ.ಆದರೆ ಪ್ರಯೋಜನವಾಗಲಿಲ್ಲ ಎಂದರು.
ಪೆಟ್ರೋಲ್, ದಿನಬಳಕೆಯ ವಸ್ತುಗಳ ಬೆಲೆ ದಿನೇದಿನೇ ಏರುತ್ತಿದೆ.ಇವೆಲ್ಲವುಗಳ ಬಗ್ಗೆ ಸದನದಲ್ಲಿ ಧ್ವನಿ ಎತ್ತುವುದಾಗಿ ಹೆಚ್.ಡಿ.ದೇವೇಗೌಡ ಹೇಳಿದರು.
ಇಂತಹ ಸಂದರ್ಭದಲ್ಲಿ ದೇಶ ಇದೆ. ಹಾಸನ ಜಿಲ್ಲೆಯ ಶಾಸಕರ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು,ಈ ಬಗ್ಗೆ ಸಿಎಂ ಜೊತೆ ನಾನೇ ಮಾತಾಡಿದ್ದೇನೆ. ಕೊರೋನ ಕಾರಣದಿಂದ ಅನುದಾನ ವಿಚಾರದಲ್ಲಿ ವಿಳಂಬ ಆಗಿದೆ.ಹಂತಹಂತವಾಗಿ ಬಿಡುಗಡೆ ಮಾಡುತ್ತೇನೆ ಎಂದು ಸಿಎಂ ಹೇಳಿದ್ದಾರೆ.ಅವರೇ ಮಾತು ಕೊಟ್ಟ ಬಳಿಕ ಪ್ರತಿಭಟನೆ ಸರಿಯಲ್ಲ ಎಂಬ ಕಾರಣಕ್ಕಾಗಿ ಪ್ರತಿಭಟನೆ ವಿಚಾರವನ್ನು ಕೈ ಬಿಡಲಾಗಿದೆ ಎಂದು ಸ್ಪಷ್ಟಪಡಿಸಿದರು.