ನವದೆಹಲಿ, ಫೆ.1 -ಕೇಂದ್ರ ಬಜೆಟ್ 2021-22 ಮಂಡನೆಯಲ್ಲಿ, ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮೂರು ವಾರಗಳ ಸಂಪೂರ್ಣ ಲಾಕ್ಡೌನ್ ಘೋಷಿಸಿದ 48 ಗಂಟೆಗಳಲ್ಲಿ ಪ್ರಧಾನ ಮಂತ್ರಿಯವರು ಪ್ರಧಾನ ಮಂತ್ರಿ ಗರಿಬ್ ಕಲ್ಯಾಣ ಯೋಜನೆ (ಪಿಎಂಜಿಕೆವೈ) ಘೋಷಿಸಿದ್ದಾರೆ ಹಾಗೂ ರೂ .2.76 ಲಕ್ಷ ಕೋಟಿ ಮೌಲ್ಯದ, ಪಿಎಂಜಿಕೆವೈ ಯೋಜನೆಯು 800 ದಶಲಕ್ಷ ಜನರಿಗೆ ಉಚಿತ ಆಹಾರ ಧಾನ್ಯ, 80 ದಶಲಕ್ಷ ಕುಟುಂಬಗಳಿಗೆ ಉಚಿತ ಅಡುಗೆ ಅನಿಲ, ಮತ್ತು 400 ದಶಲಕ್ಷ ರೈತರು, ಮಹಿಳೆಯರು, ವೃದ್ಧರು, ಬಡವರು ಮತ್ತು ನಿರ್ಗತಿಕರಿಗೆ ನೇರವಾಗಿ ಹಣವನ್ನು ತಲುಪಿಸಲಾಯಿತು ಎಂದು ತಿಳಿಸಿದ್ದಾರೆ.
ದುರ್ಬಲ ವರ್ಗದವರಿಗೆ ಕೈಗೊಂಡ ಕ್ರಮಗಳ ಅನುಸಾರವಾಗಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮತ್ತು ಮಹಿಳೆಯರಿಗಾಗಿ ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆಯಡಿ ಸಾಲದ ಹರಿವನ್ನು ಮತ್ತಷ್ಟು ಸುಗಮಗೊಳಿಸಲು, ನಿರ್ದಿಷ್ಟ ಹಣದ ಅಗತ್ಯವನ್ನು ಶೇ. 25 ರಿಂದ 15 ಕ್ಕೆ ಇಳಿಸಲು ಉದ್ದೇಶಿಸಲಾಗಿದೆ ಮತ್ತು ಕೃಷಿಗೆ ಸಂಬಂಧಿಸಿದ ಚಟುವಟಿಕೆಗಳ ಸಾಲಗಳನ್ನು ಸಹ ಸೇರಿಸಲಾಗುವುದು ಎಂದು ಹಣಕಾಸು ಸಚಿವರು ಹೇಳಿದರು.
ಹಣಕಾಸು ಸಚಿವರು ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ಚಹಾ ಕಾರ್ಮಿಕರ ವಿಶೇಷವಾಗಿ ಮಹಿಳೆಯರು ಮತ್ತು ಅವರ ಮಕ್ಕಳ ಕಲ್ಯಾಣಕ್ಕಾಗಿ 1,000 ಕೋಟಿ ರೂ. ಗಳನ್ನು ಒದಗಿಸಲಾಗುವುದು, ಇದಕ್ಕಾಗಿ ವಿಶೇಷ ಯೋಜನೆ ರೂಪಿಸಲಾಗುವುದು ಎಂದು ಪ್ರಸ್ತಾಪಿಸಿದರು.
ಬುಡಕಟ್ಟು ಪ್ರದೇಶಗಳಲ್ಲಿ 750 ಏಕಲವ್ಯ ಮಾದರಿ ವಸತಿ ಶಾಲೆಗಳನ್ನು ಸ್ಥಾಪಿಸುವ ಗುರಿಯನ್ನು ನಿಗದಿಪಡಿಸಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು. ಅಂತಹ ಪ್ರತಿಯೊಂದು ಶಾಲೆಯ ಘಟಕದ ವೆಚ್ಚವನ್ನು ರೂ.20 ಕೋಟಿಯಿಂದ ರೂ .38 ಕೋಟಿಗೆ ಮತ್ತು ಗುಡ್ಡಗಾಡು ಪ್ರದೇಶಗಳಿಗೆ ರೂ.48 ಕೋಟಿಯಷ್ಟು ಹೆಚ್ಚಿಸಲು ಪ್ರಸ್ತಾಪಿಸಿದರು. ಇದರಿಂದಾಗಿ ಬುಡಕಟ್ಟು ವಿದ್ಯಾರ್ಥಿಗಳಿಗೆ ದೃಢವಾದ ಮೂಲಸೌಕರ್ಯ ಸೌಲಭ್ಯಗಳನ್ನು ರಚಿಸಲು ಇದು ಅನಕೂಲವಾಗುತ್ತದೆ ಎಂದು ವಿತ್ತ ಸಚಿವೆ ತಿಳಿಸಿದರು.
ಪರಿಶಿಷ್ಟ ಜಾತಿಗಳ ಕಲ್ಯಾಣಕ್ಕಾಗಿ ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿವೇತನ ಯೋಜನೆಯನ್ನು ಪರಿಷ್ಕರಿಸಲಾಗಿದ್ದು, ಈ ನಿಟ್ಟಿನಲ್ಲಿ ಕೇಂದ್ರ ನೆರವು ಹೆಚ್ಚಿಸಲಾಗಿದೆ ಎಂದು ಅವರು ಹೇಳಿದರು. ಒಟ್ಟು 35,219 ಕೋಟಿ ರೂಪಾಯಿಗಳನ್ನು 2025-2026ರವರೆಗೆ 6 ವರ್ಷಗಳ ಕಾಲ ನೀಡಲಾಗುವುದು, ಇದರಿಂದಾಗಿ 4 ಕೋಟಿ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಎಂಎಸ್ಎಂಇ ವಲಯವನ್ನು 15,700 ಕೋಟಿ ರೂಪಾಯಿಗಳಿಗೆ ಹೆಚ್ಚಿಸಲಾಗಿದ್ದು ಇದು ಪ್ರಸಕ್ತ ವರ್ಷಕ್ಕಿಂತ ಎರಡು ಪಟ್ಟು ಹೆಚ್ಚಾಗಿದೆ ಎಂದು ಹಣಕಾಸು ಸಚಿವರು ತಿಳಿಸಿದರು.
ಯುವಜನರಿಗೆ ಅಪ್ರೆಂಟಿಸ್ಶಿಪ್ ಅವಕಾಶಗಳನ್ನು ಮತ್ತಷ್ಟು ಹೆಚ್ಚಿಸುವ ಉದ್ದೇಶದಿಂದ ಅಪ್ರೆಂಟಿಸ್ ಶಿಪ್ ಕಾಯ್ದೆಗೆ ತಿದ್ದುಪಡಿ ತರಲು ಸರ್ಕಾರ ಪ್ರಸ್ತಾಪಿಸಿದೆ. ಶಿಕ್ಷಣದ ನಂತರದ ಅಪ್ರೆಂಟಿಸ್ ಶಿಪ್, ಎಂಜಿನಿಯರಿಂಗ್ನಲ್ಲಿ ಪದವೀಧರರು ಮತ್ತು ಡಿಪ್ಲೊಮಾ ಪಡೆದಿರುವವರಿಗೆ ತರಬೇತಿ ನೀಡಲು ಅಸ್ತಿತ್ವದಲ್ಲಿರುವ ರಾಷ್ಟ್ರೀಯ ಅಪ್ರೆಂಟಿಸ್ಶಿಪ್ ತರಬೇತಿ ಯೋಜನೆ (ನ್ಯಾಟ್ಸ್) ಯೋಜನೆಯನ್ನು ರೂ .3,000 ಕೋಟಿಗೂ ಅಧಿಕ ಮೊತ್ತದೊಂದಿಗೆ ಪರಿಷ್ಕರಿಸಲಾಗುವುದು ಎಂದು ಹಣಕಾಸು ಸಚಿವರು ಹೇಳಿದರು.
ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಸಹಭಾಗಿತ್ವದಲ್ಲಿ, ಕೌಶಲ್ಯ ಅರ್ಹತೆಗಳು, ಮೌಲ್ಯಮಾಪನ ಮತ್ತು ಪ್ರಮಾಣೀಕರಣವನ್ನು ಮಾನದಂಡವಾಗಿಟ್ಟುಕೊಳ್ಳುವ ಉಪಕ್ರಮವು ಪ್ರಮಾಣೀಕೃತ ಕಾರ್ಯಪಡೆಯ ನಿಯೋಜನೆಯೊಂದಿಗೆ ನಡೆಯುತ್ತಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
ಜಪಾನಿನ ಕೈಗಾರಿಕಾ ಮತ್ತು ವೃತ್ತಿಪರ ಕೌಶಲ್ಯ, ತಂತ್ರ ಮತ್ತು ಜ್ಞಾನದ ವರ್ಗಾವಣೆಗೆ ಅನುಕೂಲವಾಗುವಂತೆ ಭಾರತ ಮತ್ತು ಜಪಾನ್ ನಡುವೆ ಸಹಕಾರಿ ತರಬೇತಿ ಅಂತರ ತರಬೇತಿ ಕಾರ್ಯಕ್ರಮ (ಟಿಐಟಿಪಿ)ವು ಇದೆ. ಇಂತಹ ಉಪಕ್ರಮಗಳನ್ನು ಇನ್ನೂ ಹಲವು ದೇಶಗಳೊಂದಿಗೆ ಮುಂದುವರಿಸಲಾಗುವುದು ಎಂದು ಹಣಕಾಸು ಸಚಿವರು ತಿಳಿಸಿದರು.