ಬೆಂಗಳೂರು, ಫೆ 3 – ನಾಲ್ಕು ಕಂದಾಯ ವಿಭಾಗದಲ್ಲೂ ಎಸ್.ಸಿ.ಪಿ, ಟಿ.ಎಸ್.ಪಿ ಅನುದಾನದಡಿಯಲ್ಲಿ ನಾಲ್ಕು ಸೈನಿಕ ವಸತಿ ಶಾಲೆ ಆರಂಭಿಸುವ ಚಿಂತನೆ ಇದ್ದು,ಇದಕ್ಕಾಗಿ ಬೇಕಾದ ಭೂಮಿ ಮತ್ತು ಅನುದಾನವನ್ನು ಸರ್ಕಾರ ನೀಡಲಿದೆ. ಆದರೆ ಇದರ ಆಡಳಿತ ನಿರ್ವಹಣೆಯನ್ನು ಸೇನೆಯೇ ನಿರ್ವಹಿಸಲಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದ ವೇಳೆ ಬೀದರ್ ಜಿಲ್ಲೆಯಲ್ಲಿ ಎಸ್.ಸಿ.ಪಿ, ಟಿ.ಎಸ್.ಪಿಗಾಗಿ ಬಿಡುಗಡೆಯಾದ ಅನುದಾನ ಮತ್ತು ಅವ್ಯವಹಾರ ಕುರಿತ ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿ ಸದಸ್ಯ ಅರವಿಂದ ಕುಮಾರ ಅರಳಿ ಪ್ರಶ್ನೆಗೆ ಉತ್ತರಿಸಿದ ಕಾರಜೋಳ, ರಾಜ್ಯದ ನಾಲ್ಕು ಕಂದಾಯ ವಿಭಾಗದಲ್ಲಿ ಅನುದಾನದಡಿ ತಲಾ ಒಂದೊಂದು ಸೈನಿಕ ಶಾಲೆ ಆರಂಭಕ್ಕೆ ಸರ್ಕಾರ ಮುಂದಾಗಿದ್ದು, ಶೇ.50 ರಷ್ಟು ಸೀಟು ನಮ್ಮ ರಾಜ್ಯದ ಎಸ್ಸಿ ಎಸ್ಟಿ ವಿದ್ಯಾರ್ಥಿಗಳಿಗೆ ನೀಡುವ ಷರತ್ತಿನೊಂದಿಗೆ ಅಗತ್ಯ, ಭೂಮಿ ಅನುದಾನವನ್ನು ಸರ್ಕಾರವೇ ನೀಡಲಿದೆ ಎಂದರು.
ಎಸ್.ಸಿ ಎಸ್ಟಿ ಜನಾಂಗದ ಅನುದಾನ ದುರುಪಯೋಗವಾಗಬಾರದು. ಎಸ್.ಸಿ ಎಸ್ಟಿ ಮನೆಗಳ ಮುಂದೆ ಮಾತ್ರ ಕಾಂಕ್ರೀಟ್ ರಸ್ತೆ ಮಾಡಿದರೆ ಸಾಲದು, ಅವರು ಸಂಚರಿಸುವ ಎಲ್ಲಾ ಕಡೆ ರಸ್ತೆ ನಿರ್ಮಿಸಬೇಕು ಹಾಗಾಗಿ ಅವರುಗಳ ಮನೆಯಿಂದ ಶಾಲೆವರೆಗೂ ರಸ್ತೆ ಮಾಡಿದರೆ, ಮನೆಯಿಂದ ಮಾರುಕಟ್ಟೆವರೆಗೆ ರಸ್ತೆ ಮಾಡಿದರೆ ದುರುಪಯೋಗ ಅಲ್ಲ ಎಂದರು.
ನನ್ನ ಅವಧಿಯಲ್ಲಿ ರಸ್ತೆಗೆ ಹಣ ಕಡಿಮೆ ಮಾಡಿ ಎಸ್ಸಿ ಎಸ್ಟಿ ವಿದ್ಯಾರ್ಥಿಗಳಿಗೆ ವಸತಿ ಶಾಲೆಗಳ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ನೀಡಿದ್ದೇನೆ, ಹಣ ದುರುಪಯೋಗ ಆಗಬಾರದು, ಆಸ್ತಿ ನಿರ್ಮಾಣವಾಗಬೇಕು ಹಾಗಾಗಿ ವಸತಿ ಶಾಲೆ ಮಾಡಿದ್ದೇನೆ. ಇದರಲ್ಲಿ ದುರುಪಯೋಗದ ಪ್ರಶ್ನೆಯೇ ಇಲ್ಲ, ಬೋಗಸ್ ಬಿಲ್, ಕೆಲಸ ಮಾಡದೆ ಬಿಲ್ ಪಡೆದಿದ್ದರೆ ತನಿಖೆಗೆ ಆದೇಶಿಸಲಾಗುತ್ತದೆ. ಬೀದರ, ಔರಾದ, ಬಾಲ್ಕಿಯಲ್ಲಿ ಹೆಚ್ಚು ಅವ್ಯವಹಾರವಾಗಿದೆ.ಎನ್ನುವ ಆರೋಪದ ಕುರಿತು ಮಾಹಿತಿ ನೀಡಿದಲ್ಲಿ ತನಿಖೆ ನಡೆಸಲಾಗುತ್ತದೆ ಎಂದರು.
ಈ ವೇಳೆ ಮಧ್ಯೆ ಪ್ರವೇಶಿಸಿದ ಕಾಂಗ್ರೆಸ್ ಸದಸ್ಯ ಸಿಎಂ ಇಬ್ರಾಹಿಂ, ದಲಿತರ ಕೇರಿ, ಇತರರ ಕೇರಿಗಳನ್ನು ಕಾಂಕ್ರೀಟ್ ರಸ್ತೆಗಳೇ ಬೇರೆ ಮಾಡಿದ್ದವು, ಇಂತಹ ರಸ್ತೆಯಿಂದ ಸಾಮರಸ್ಯ ಹಾಳಾಗುತ್ತಿತ್ತು, ಈಗ ರಸ್ತೆ ಎಲ್ಲಾ ಕಡೆ ರಸ್ತೆ ಮಾಡಿ ಒಳ್ಳೆಯ ಕೆಲಸ ಮಾಡಿದ್ದೀರಿ,ಸವರ್ಣೀಯರ ಕೇರಿಗೂ ರಸ್ತೆ ಮಾಡಿದರೆ ಎಲ್ಲರೂ ಒಂದೇ ಎನ್ನುವ ಭಾವನೆ ಬೆಳೆಯಲಿದೆ ಎಂದು ಸಲಹೆ ನೀಡಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಕಾರಜೋಳ, ಈ ತಾರತಮ್ಯ ಹೋಗಲಾಡಿಸಲೆಂದೇ ಎಲ್ಲಾ ಕಡೆ ರಸ್ತೆ ವಿಸ್ತರಣೆ ಮಾಡಿದ್ದೇವೆ, ಇಸ್ಲಾಂ ಧರ್ಮದಲ್ಲಿ ಹುಟ್ಟಿದರೂ ಬಸವ ತತ್ವದಲ್ಲಿ ಬೆಳೆದವರು ನೀವು ಎಂದು ಇಬ್ರಾಹಿಂ ಕಾಳಜಿಗೆ ಶ್ಲಾಘನೆ ವ್ಯಕ್ತಪಡಿಸಿದರು.