ಬೆಂಗಳೂರು: 10- ಸಾರಿಗೆ ಇಲಾಖೆಯ ಖರ್ಚು, ವೆಚ್ಚ ಸರಿದೂಗಿಸಲು ಸರಕಾರ ಬೆಂಗಳೂರಿನ ಶಾಂತಿನಗರ ಬಸ್ ನಿಲ್ದಾಣವನ್ನೇ ಬ್ಯಾಂಕಿಗೆ ಅಡವಿಟ್ಟು ಸಾಲ ಪಡೆದಿರುವ ವಿಷಯ ಬೆಳಕಿಗೆ ಬಂದಿದೆ.
ಮಾಹಿತಿ ಹಕ್ಕು ಕಾಯ್ದೆಯಡಿ ಆನಂದ ಎಂಬುವವರು ಪಡೆದ ಮಾಹಿತಿಯಲ್ಲಿ ಈ ವಿಷಯ ಬಹಿರಂಗವಾಗಿದ್ದು, ಶಾಂತಿನಗರ ಬಸ್ ನಿಲ್ದಾಣವನ್ನು ಕೆನರಾ ಬ್ಯಾಂಕ್ ಗೆ ಅಡವಿಟ್ಟು 160 ಕೋಟಿ ರೂಪಾಯಿ ಸಾಲ ಪಡೆದುಕೊಂಡಿದೆ. ಇದಕ್ಕಾಗಿ ಪ್ರತಿ ತಿಂಗಳು 1.04 ಕೋಟಿ ರೂಪಾಯಿ ಬಡ್ಡಿ ಕಟ್ಟುತ್ತಿದೆ!.
ಆನಂದ ಎಂಬುವವರು 2019ರ ಅಕ್ಟೋಬರ್ ನಿಂದ 2021ರ ಜನವರಿವರೆಗೆ ಬಿಎಂಟಿಸಿ ಸಂಸ್ಥೆ ಎಷ್ಟು ಸಾಲ ಮಾಡಿದೆ ? ಅದಕ್ಕೆ ಎಷ್ಟು ಬಡ್ಡಿ ಕಟ್ಟುತ್ತಿದೆ ? ಸಾಲಕ್ಕೆ ಅಡಮಾನ ಇಟ್ಟಿರುವ ಆಸ್ತಿ ಯಾವುದು ಎಂಬ ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಸಾರಿಗೆ ಇಲಾಖೆ ಅಕೌಂಟ್ ವಿಭಾಗದಿಂದ ಮಾಹಿತಿ ನೀಡಲಾಗಿದ್ದು, ಈ ಅವಧಿಯಲ್ಲಿ 160 ಕೋಟಿ ಸಾಲವನ್ನು ಕೆನರಾ ಬ್ಯಾಂಕ್ ನಿಂದ ಪಡೆಯಲಾಗಿದೆ. ಪಡೆದ ಸಾಲವನ್ನು ಇಲಾಖೆಯ ಖರ್ಚು ವೆಚ್ಚ, ಸಿಬ್ಬಂದಿ ಸಂಬಳಕ್ಕೆ ಬಳಸಲಾಗಿದೆಯೆಂದು ತಿಳಿದುಬಂದಿದೆ.