ಕೊಪ್ಪಳ: 11- ಕಳೆದ ಎರಡು ತಿಂಗಳಿಂದ ಸಂಬಳವಿಲ್ಲದೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಸಾರಿಗೆ ನೌಕರನೊಬ್ಬ ತನ್ನ ಕಿಡ್ನಿ ಮಾರಾಟಕ್ಕೆ ಮುಂದಾಗಿರುವ ವಿಷಯ ಕೊಪ್ಪಳದಲ್ಲಿ ಬೆಳಕಿಗೆ ಬಂದಿದೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ಡಿಪೋ ನಿರ್ವಾಹಕ ಹನುಮಂತ ಕಳಗೇರ ಅವರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಕುಟುಂಬ ನಿರ್ವಹಣೆ, ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ಎದುರಾಗಿದೆ. ಜೀವನ ನಿರ್ವಹಣೆಗೆ ಬೇರೆ ದಾರಿ ಕಾಣದೇ ಇದೀಗ ತಮ್ಮ ಕಿಡ್ನಿ ಮಾರಾಟಕ್ಕಿಟ್ಟಿರುವುದಾಗಿ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
“ಕಳೆದ ಎರಡು ತಿಂಗಳಿಂದ ಸಂಬಳವಿಲ್ಲದೇ ಪರದಾಡುತ್ತಿದ್ದು, ಮನೆ ಬಾಡಿಗೆ ಕಟ್ಟಲು, ರೇಷನ್ ತರಲು ಕೂಡ ಹಣವಿಲ್ಲ. ಹಾಗಾಗಿ ನಾನು ನನ್ನ ಕಿಡ್ನಿ ಮಾರುತ್ತಿದ್ದೇನೆ” ಎಂದು ತಮ್ಮ ಮೊಬೈಲ್ ನಂಬರ್ ಸಮೇತ ಪೋಸ್ಟ್ ಮಾಡಿ ಅವಶ್ಯವಿರುವವರು ಸಂಪರ್ಕಿಸಬೇಕೆಂದು ವಿನಂತಿಸಿಕೊಂಡಿದ್ದಾರೆ.