ಬೆಂಗಳೂರು, ಜ 10 – ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಗೃಹರಕ್ಷಕ ದಳ ಹಾಗೂ ಪೌರರಕ್ಷಣಾ ಅಕಾಡೆಮಿ ಇವರ ಸಹಯೋಗದಲ್ಲಿ ಜನರಿ 11 ಮತ್ತು 12 ರಂದು “ಚಿತ್ರಗ್ರಹಣ ಮತ್ತು ಕಿರುಚಿತ್ರ” ಕಾರ್ಯಾಗಾರವನ್ನು ಗ್ರಹರಕ್ಷಕ ದಳ ಹಾಗೂ ಪೌರರಕ್ಷಣಾ ಅಕಾಡೆಮಿ, ಅಣ್ಣಾಸ್ವಾಮಿ ಮೊದಲಿಯಾರ್ ರಸ್ತೆ, ಬೆಂಗಳೂರು ಇಲ್ಲಿ ಹಮ್ಮಿಕೊಳ್ಳಲಾಗಿದೆ.
ಕಾರ್ಯಾಗಾರದ ಉದ್ಘಾಟನೆಯನ್ನು ಜನವರಿ 11 ರಂದು ಬೆಳಿಗ್ಗೆ 11.30 ಗಂಟೆಗೆ ಆರಕ್ಷಕ ಮಹಾ ನಿರ್ದೇಶಕರು, ಗೃಹರಕ್ಷಕ ದಳದ ಮಹಾ ಸಮಾದೇಷ್ಟರು, ಪೌರರಕ್ಷಣಾ ನಿರ್ದೇಶಕರು, ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಮಹಾ ನಿರ್ದೇಶಕರು ಹಾಗೂ ರಾಜ್ಯ ವಿಪತ್ತು ಸ್ಪಂದನ ಪಡೆ ಮಹಾ ನಿರ್ದೇಶಕರಾದ ಡಾ. ಅಮರ ಕುಮಾರ ಪಾಂಡೆ ಅವರು ನೆರವೇರಿಸುವರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಡಾ. ಪಿ.ಎಸ್. ಹರ್ಷ ಅವರು ಪ್ರಾಸ್ತಾವಿಕ ನುಡಿವರು. ವಿಜಯ ಕರ್ನಾಟಕ ಸಂಪಾದಕರಾದ ಹರಿಪ್ರಕಾಶ ಕೋಣೆಮನೆ ಅವರು ಆಶಯ ಭಾಷಣ ಮಾಡುವರು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರಾದ ಸುನೀಲ ಅಗರವಾಲ ಹಾಗೂ ಹಿರಿಯ ಪತ್ರಕರ್ತರಾದ ಕೆ.ಜಿ.ವಾಸುಕಿ ಅವರು ಭಾಗವಹಿಸುವರು.