ಕೋಟ, ಜ.10 – ಸ್ವಯಂ ಘೋಷಿತ ರೈತರು ನಡೆಸುತ್ತಿರುವ ಪ್ರತಿಭಟನೆ ಸ್ಥಳಗಳಲ್ಲಿ ಕೆಲವು ರೈತರು ಚಿಕನ್ ಬಿರಿಯಾನಿ ಪಾರ್ಟಿ ಮತ್ತು ಪಿಕ್ನಿಕ್ ಮಾಡುತ್ತಾ, ಹಕ್ಕಿ ಜ್ವರ ಹರಡಲು ಪಿತೂರಿ ನಡೆಸುತ್ತಿದ್ದಾರೆ ಎಂದು ಬಿಜೆಪಿ ಶಾಸಕ, ರಾಜಸ್ತಾನ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮದನ್ ದಿಲಾವರ ಮೂರ್ಖತನದ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ರೈತ ಪ್ರತಿಭಟನೆಯ ಹೆಸರಿನಲ್ಲಿ ಪಿಕ್ನಿಕ್ ಮಾಡುತ್ತಿದ್ದಾರೆ. ಇವರಿಗೆ ರೈತರ ಬಗ್ಗೆ ನಿಜವಾಗಿಯೂ ಕಾಳಜಿಯಿಲ್ಲ ಎಂದು ದಿಲಾವರ್ ಇಂದು ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರೈತರು ನಿಜವಾಗಿ ಯಾವುದೇ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿಲ್ಲ, ಬದಲಾಗಿ ಬಿಡುವಿನ ಸಮಯ ಕಳೆಯುವುದಕ್ಕಾಗಿ ಚಿಕನ್ ಬಿರಿಯಾನಿ ಮತ್ತು ಒಣ ಹಣ್ಣುಗಳನ್ನು ತಿಂದು ಆನಂದಿಸುತ್ತಿದ್ದಾರೆ, ಇದು ಹಕ್ಕಿ ಜ್ವರವನ್ನು ಹರಡುವ ಪಿತೂರಿಯಾಗಿದೆ ಎಂಬ ವಿಲಕ್ಷಣ ಆರೋಪ ಮಾಡಿದ್ದಾರೆ.
ಈ ರೈತರನ್ನು ಪ್ರತಿಭಟನೆಯ ಸ್ಥಳಗಳಿಂದ ತೆರವುಗೊಳಿಸದಿದ್ದರೆ ಹಕ್ಕಿ ಜ್ವರ ಇಡೀ ದೇಶಕ್ಕೆ ಹರಡಬಹುದು. ಆದ್ದರಿಂದ ಅವರನ್ನು ತಕ್ಷಣವೇ ಪ್ರತಿಭಟನಾ ಸ್ಥಳಗಳಿಂದ ತೆರವುಗೊಳಿಸಬೇಕು ಎಂದು ದಿಲಾವರ್ ಹೇಳಿದರು.
ಈ ಸ್ವಯಂ ಘೋಷಿತ ರೈತರು ರಸ್ತೆಗಳನ್ನು ಬಂದ್ ಮಾಡುವ ಮೂಲಕ ಸಾರ್ವಜನಿಕರಿಗೆ ತೊಂದರೆಯನ್ನುಂಟು ಮಾಡುತ್ತಿದ್ದಾರೆ. ದೇಶದಲ್ಲಿ ಹಕ್ಕಿ ಜ್ವರ ಹರಡುವುದನ್ನು ನಿಯಂತ್ರಿಸಲು ಈ ರೈತರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಬಿಜೆಪಿ ಶಾಸಕ ಒತ್ತಾಯಿಸಿದ್ದಾರೆ.
ರೈತರ ಪ್ರತಿಭಟನೆಯಲ್ಲಿ ವೇಷ ಬದಲಾಯಿಸಿ ಭಯೋತ್ಪಾದಕರು ಮತ್ತು ದರೋಡೆಕೋರು ಪಾಲ್ಗೊಳ್ಳುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ದಿಲಾವರ್ ಹೇಳಿಕೆಗೆ ರೈತ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.