ಕಲಬುರ್ಗಿ: ಪಿಎಸ್ಐ ನೇಮಕಾತಿ ಅಕ್ರಮ ಸಂಬಂಧ ಸಿಐಡಿ ಅಧಿಕಾರಿಗಳ ಬೇಟೆ ಮುಂದುವರೆದಿದೆ. ಇಂದು ಮತ್ತೋರ್ವ ಆರೋಪಿಯನ್ನು ಬಂಧಿಸಲಾಗಿದೆ.
ಜಿಲ್ಲೆಯ ಅಳಂದ ತಾಲೂಕಿನ ಹಿರೋಳಿ ಗ್ರಾಮದಲ್ಲಿ ಪಿಎಸ್ಐ ನೇಮಕಾತಿ ಅಕ್ರಮ ಸಂಬಂಧ ಆರೋಪಿ ರಚನಾ ಎಂಬಾಕೆಯನ್ನು ಬಂಧಿಸಲಾಗಿದೆ. ಬಂಧಿತ ಆರೋಪಿ ರಚನಾ ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಮಹಿಳಾ ಕೋಟಾದಲ್ಲಿ ಮೊದಲ ರ್ಯಾಂಕ್ ಪಡೆದಿದ್ದರು.
ರಚನಾ ವಿರುದ್ಧ ಹೈಗ್ರೌಂಡ್ ಠಾಣೆಯಲ್ಲಿ ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಳಿಕ ಆರೋಪಿ ರಚನಾ ನಾಪತ್ತೆಯಾಗಿ ಮಹಾರಾಷ್ಟ್ರ ಸೇರಿದಂತೆ ವಿವಿಧ ಸ್ಥಳಗಳಲ್ಲಿ ತಲೆ ಮರೆಸಿಕೊಂಡಿದ್ದರು.
ರಚನಾ ಪತ್ತೆಯಾಗಿ ಬಲೆ ಬೀಸಿದ್ದ ಸಿಐಡಿ ಅಧಿಕಾರಿಗಳು ಇದೀಗ ಕಲಬುರ್ಗಿಯ ಅಳಂದದ ಹಿರೋಳಿ ಗ್ರಾಮದಲ್ಲಿ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಕಲಬುರ್ಗಿಯ 5ನೇ ಜೆಎಂಎಫ್ ಸಿ ಕೋರ್ಟ ಮುಂದೆ ಹಾಜರುಪಡಿಸಲಾಗಿದೆ. ಇಂದು ರಾತ್ರಿ ಬೆಂಗಳೂರಿಗೆ ಸಿಐಡಿ ಪೊಲೀಸರು ಆರೋಪಿ ರಚನಾ ಕರೆತರುವ ಸಾಧ್ಯತೆ ಇದೆ. ರಚನಾ ಮೂಲತಃ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ನಿವಾಸಿಯಾಗಿದ್ದಾರೆ.