ಗೋಕಾಕ ಜು 2 : ಹತ್ತು ವರ್ಷಗಳ ನಂತರ ನಡೆಯುತ್ತಿರುವ ಗೋಕಾಕ ಗ್ರಾಮ ದೇವತೆಯರ ಒಂಭತ್ತು ದಿನಗಳ ಮಹಾಜಾತ್ರೆಯ ಸಂದರ್ಭದಲ್ಲಿ ನಡೆಯುವ ಮೂರು ದಿನಗಳ ರಥೋತ್ಸವವು ಬುಧವಾರ ಅದ್ಧೂರಿಯಿಂದ ಆರಂಭಗೊಂಡಿತು. ಲಕ್ಷಾಂತರ ಜನರು ರಥೋತ್ಸವದಲ್ಲಿ ಪಾಲ್ಗೊಂಡು ಭಂಡಾರದಲ್ಲಿ ಮಿಂದೆದ್ದರು.
ನಗರದ ಸೋಮವಾರ ಪೇಟೆಯಲ್ಲಿ ರಥೋತ್ಸವಕ್ಕೆ ಗೋಕಾಕ ಶಾಸಕ ಹಾಗೂ ಜಾತ್ರಾ ಕಮಿಟಿ ಅಧ್ಯಕ್ಷ ರಮೇಶ ಜಾರಕಿಹೊಳಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿ, ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವುದರಿಂದ ದೇವರ ಅನುಗ್ರಹ ಪಡೆದು ಸುಖ-ಶಾಂತಿ, ಸಮೃದ್ಧಿ ದೊರೆಯುತ್ತದೆ ಎಂದು ಹೇಳಿದರು.

ಭಾರತೀಯ ಪರಂಪರೆಯಲ್ಲಿ ಧಾರ್ಮಿಕ ಕಾರ್ಯಗಳಿಗೆ ಹೆಚ್ಚಿನ ಮಹತ್ವವಿದೆ. ದುಷ್ಟ ಶಕ್ತಿಗಳಿಂದ ಗ್ರಾಮಗಳನ್ನು ರಕ್ಷಿಸಿ ಗ್ರಾಮ ದೇವತೆಯರು ನೆಮ್ಮದಿಯ ಜೀವನವನ್ನು ನೀಡುತ್ತಾರೆ. ಈ ದೇವತೆಯರ ಅನುಗ್ರಹಕ್ಕೆ ಪಾತ್ರರಾಗಲು ಅನಾದಿ ಕಾಲದಿಂದಲೂ ಹಿರಿಯರು ಜಾತ್ರೆಗಳನ್ನು ಆಚರಿಸುತ್ತಾ ಬಂದಿದ್ದಾರೆ. ನಾವೆಲ್ಲರೂ ಇಂತಹ ಕಾರ್ಯದಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗೋಣ ಎಂದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ, ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ, ಯುವ ಧುರೀಣರಾದ ಅಮರನಾಥ ಜಾರಕಿಹೊಳಿ, ಸನತ್ ಜಾರಕಿಹೊಳಿ, ಸರ್ವೋತ್ತಮ ಜಾರಕಿಹೊಳಿ, ಆದಿತ್ಯಾ ಜಾರಕಿಹೊಳಿ, ಆರ್ಯ ಜಾರಕಿಹೊಳಿ ಹಾಗೂ ಜಾತ್ರಾ ಕಮಿಟಿಯ ಪ್ರಭಾಕರ ಚವ್ಹಾಣ, ಸಗೀರ ಕೋತವಾಲ ಸೇರಿದಂತೆ ಲಕ್ಷಾಂತರ ಭಕ್ತಾದಿಗಳು ಉಪಸ್ಥಿತರಿದ್ದರು.