ಬೆಳಗಾವಿ, ಆ. 1: ಆನ್ಲೈನ್ನಲ್ಲಿ ಖರೀದಿಸಿದ ವಸ್ತುವಿಗೆ ಬದಲಾಗಿ ಬೇರೆ ವಸ್ತು ಬಂದ ಹಿನ್ನೆಲೆಯಲ್ಲಿ ರಿಫಂಡ್ ಪಡೆಯಲು ಮುಂದಾದ ಬೆಳಗಾವಿಯ ವ್ಯಕ್ತಿಯೊಬ್ಬರು ಸೈಬರ್ ವಂಚಕರ ಬಲೆಗೆ ಬಿದ್ದು ₹1 ಲಕ್ಷ ಕಳೆದುಕೊಂಡಿದ್ದು, ತಕ್ಷಣ ಕಾರ್ಯಪ್ರವೃತ್ತರಾದ ಸಿಇಎನ್ ಪೊಲೀಸರು ವಂಚಕರು ವರ್ಗಾಯಿಸಿಕೊಂಡಿದ್ದ ಹಣವನ್ನು ಯಶಸ್ವಿಯಾಗಿ ಫ್ರೀಜ್ ಮಾಡಿದ್ದಾರೆ.
ನಗರದ ಗಣೇಶಪುರ ನಿವಾಸಿಯೊಬ್ಬರು ಆನ್ಲೈನ್ನಲ್ಲಿ ಖರೀದಿಸಿದ್ದ ವಸ್ತುವಿಗೆ ಬದಲಾಗಿ ಬೇರೆ ವಸ್ತು ಬಂದ ಹಿನ್ನೆಲೆಯಲ್ಲಿ ಕಸ್ಟಮರ್ ಕೇರ್ ಸಂಖ್ಯೆಗೆ ಕರೆ ಮಾಡಿದ್ದರು. ಈ ವೇಳೆ ಕಸ್ಟಮರ್ ಕೇರ್ ಸಿಬ್ಬಂದಿ ಎಂದು ನಂಬಿಕೆ ಮೂಡಿಸಿದ ವಂಚಕರು ರಿಫಂಡ್ ನೀಡುವುದಾಗಿ ಹೇಳಿ ಬ್ಯಾಂಕ್ ಹಾಗೂ ಯುಪಿಐ ಸಂಬಂಧಿತ ಮಾಹಿತಿಯನ್ನು ಪಡೆದು ಅವರ ಖಾತೆಯಿಂದ ₹1 ಲಕ್ಷ ವರ್ಗಾಯಿಸಿಕೊಂಡಿದ್ದರು.
ಈ ಕುರಿತು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ನಗರ ಪೊಲೀಸ್ ಆಯುಕ್ತ ಭೂಷಣ ಬೋರಸೆ, ದೂರು ಬಂದ ತಕ್ಷಣವೇ ಸಿಇಎನ್ ಪೊಲೀಸರು ಅಗತ್ಯ ಕ್ರಮ ಕೈಗೊಂಡು ವಂಚಕರು ವರ್ಗಾಯಿಸಿಕೊಂಡಿದ್ದ ಹಣವನ್ನು ಫ್ರೀಜ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದರು.
ಆನ್ಲೈನ್ನಲ್ಲಿ ರಿಫಂಡ್, ಕಸ್ಟಮರ್ ಕೇರ್ ಅಥವಾ ಬ್ಯಾಂಕ್ ಹೆಸರಿನಲ್ಲಿ ಬರುವ ಕರೆಗಳನ್ನು ಸಾರ್ವಜನಿಕರು ಅಂಧವಾಗಿ ನಂಬಬಾರದು. ಬ್ಯಾಂಕ್ ವಿವರ, ಒಟಿಪಿ, ಯುಪಿಐ ಪಿನ್ ಅಥವಾ ಸ್ಕ್ರೀನ್ ಹಂಚಿಕೆ ಮಾಡುವಂತೆ ಯಾರಾದರೂ ಕೇಳಿದರೆ ಯಾವುದೇ ಕಾರಣಕ್ಕೂ ಮಾಹಿತಿ ನೀಡಬಾರದು ಎಂದು ಅವರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದರು.