ಬೆಳಗಾವಿ: ಐತಿಹಾಸಿಕ ಬೆಳಗಾವಿ ಕೋಟೆಯ ಎದುರು ವಾಣಿಜ್ಯ ಮಳಿಗೆಗಳನ್ನು ನಿರ್ಮಿಸುವ ಪ್ರಸ್ತಾವನೆಗೆ ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಕೋಟೆ ಸುತ್ತಮುತ್ತಲಿನ ಪ್ರದೇಶದ ಐತಿಹಾಸಿಕ ಸ್ವರೂಪವನ್ನು ಕಾಪಾಡುವಂತೆ ಆಗ್ರಹಿಸಿದರು.
ಶುಕ್ರವಾರ ಸಂಜೆ ನಡೆದ ಕ್ಯಾಂಟೋನ್ಮೆಂಟ್ ಮಂಡಳಿ ಸಭೆಯಲ್ಲಿ ಈ ವಿಷಯ ಪ್ರಮುಖ ಚರ್ಚೆಗೆ ಗ್ರಾಸವಾಯಿತು. ಕೋಟೆ ಎದುರು ಹೂವಿನ ಮಾರುಕಟ್ಟೆ ಹಾಗೂ ವಾಹನಗಳ ಬಿಡಿಭಾಗಗಳ ಅಂಗಡಿಗಳನ್ನು ಸ್ಥಾಪಿಸುವ ಪ್ರಸ್ತಾವನೆಗೆ ಆಕ್ಷೇಪ ವ್ಯಕ್ತಪಡಿಸಿದ ಶೆಟ್ಟರ್, ಈ ಪ್ರದೇಶವನ್ನು ವಾಣಿಜ್ಯ ಚಟುವಟಿಕೆಗಳಿಗೆ ಬಳಸುವ ಬದಲು ಸಾರ್ವಜನಿಕ ಹಾಗೂ ಮನರಂಜನಾ ಉದ್ದೇಶಗಳಿಗೆ ಮೀಸಲಿಡಬೇಕು ಎಂದು ಹೇಳಿದರು.
ಗ್ಯಾರೇಜ್, ಟೈರ್ ದುರಸ್ತಿ ಮತ್ತು ಪಂಚರ್ ಅಂಗಡಿಗಳಿಗೆ ಅವಕಾಶ ನೀಡಿದರೆ ಐತಿಹಾಸಿಕ ಪ್ರದೇಶದ ಸೌಂದರ್ಯ ಹಾಳಾಗುವುದರ ಜೊತೆಗೆ ಕಸದ ಸಮಸ್ಯೆ ಉಂಟಾಗಿ ಕೋಟೆಯ ಪರಂಪರೆಯ ಮೌಲ್ಯಕ್ಕೂ ಧಕ್ಕೆಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಇದಕ್ಕೆ ಪರ್ಯಾಯವಾಗಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಆಧುನಿಕ ಕ್ರೀಡಾ ಸಂಕೀರ್ಣ ಹಾಗೂ ಮಕ್ಕಳಿಗಾಗಿ ವಿಶಾಲ ಆಟದ ಮೈದಾನವನ್ನು ಅಭಿವೃದ್ಧಿಪಡಿಸುವಂತೆ ಶೆಟ್ಟರ್ ಸಲಹೆ ನೀಡಿದರು. ಇದರಿಂದ ಸಾರ್ವಜನಿಕರಿಗೆ ಉತ್ತಮ ಸೌಲಭ್ಯ ದೊರೆಯುವುದರ ಜೊತೆಗೆ ಐತಿಹಾಸಿಕ ಪ್ರದೇಶದ ಸ್ವರೂಪವೂ ಉಳಿಯಲಿದೆ ಎಂದು ಹೇಳಿದರು.
ಈ ಕುರಿತು ಪ್ರತಿಕ್ರಿಯಿಸಿದ ಬ್ರಿಗೇಡಿಯರ್ ಗಿರೀಶ್ ಉಪಾಧ್ಯಾಯ, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಯೋಜನೆಯನ್ನು ರದ್ದುಪಡಿಸಿದರೆ ಗುತ್ತಿಗೆದಾರರು ಈಗಾಗಲೇ ವೆಚ್ಚ ಮಾಡಿದ್ದಲ್ಲಿ ಕಾನೂನು ತೊಡಕುಗಳು ಎದುರಾಗುವ ಸಾಧ್ಯತೆ ಇದೆ ಎಂದು ತಿಳಿಸಿದರು. ಇದಕ್ಕೆ ಪರ್ಯಾಯವಾಗಿ ಮುಖ್ಯ ರಸ್ತೆಯ ಪಕ್ಕದ ಜಾಗದ ಬದಲು ಈ ಹಿಂದೆ ಗುರುತಿಸಲಾಗಿದ್ದ ಖಾಲಿ ಜಾಗವನ್ನು ಆದಾಯ ತರುವ ಚಟುವಟಿಕೆಗಳಿಗೆ ಬಳಸುವ ಕುರಿತು ಚರ್ಚೆ ನಡೆಯಿತು. ಅಂತಿಮ ನಿರ್ಧಾರಕ್ಕೂ ಮುನ್ನ ಕಾನೂನು ತಜ್ಞರ ಅಭಿಪ್ರಾಯ ಪಡೆಯಲು ಸಭೆ ತೀರ್ಮಾನಿಸಿತು.
ಸಭೆಯಲ್ಲಿ ಕ್ಯಾಂಟೋನ್ಮೆಂಟ್ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿಯನ್ನೂ ಪರಿಶೀಲಿಸಲಾಯಿತು. ನಿರ್ಮಾಣ ಸಾಮಗ್ರಿಗಳ ಬೆಲೆ ಏರಿಕೆಯಿಂದ ಗುತ್ತಿಗೆದಾರರು ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದಾಮ ಮಂಚಲ್ವಾರ್ ಮಾಹಿತಿ ನೀಡಿದರು. ಮಾರುಕಟ್ಟೆ ದರಗಳಿಗೆ ಅನುಗುಣವಾಗಿ ಅಂದಾಜು ವೆಚ್ಚವನ್ನು ಪರಿಷ್ಕರಿಸಿ ಹೊಸದಾಗಿ ಟೆಂಡರ್ ಆಹ್ವಾನಿಸಲು ಅಧಿಕಾರಿಗಳಿಗೆ ಸೂಚಿಸಲಾಯಿತು.
ವಿದ್ಯಾರ್ಥಿಗಳ ಸುರಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ ಮರಾಠಿ, ಇಂಗ್ಲಿಷ್ ಹಾಗೂ ಉರ್ದು ಮಾಧ್ಯಮ ಶಾಲೆಗಳಲ್ಲಿ 47 ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆಗೆ ಸಭೆ ಅನುಮೋದನೆ ನೀಡಿತು. ಜೊತೆಗೆ ಶಾಲೆಗಳಿಗೆ ಬಹುಉದ್ದೇಶ ಸಭಾಂಗಣ ಹಾಗೂ ಅಡುಗೆಮನೆ ನಿರ್ಮಾಣಕ್ಕೂ ಒಪ್ಪಿಗೆ ನೀಡಲಾಯಿತು.
ಹಾಕಿ ಮೈದಾನ ಅಭಿವೃದ್ಧಿ, ಫುಟ್ಬಾಲ್ ಸಂಸ್ಥೆಗಳೊಂದಿಗೆ ಸಹಭಾಗಿತ್ವದ ಮೂಲಕ ಕ್ರೀಡೆಗೆ ಉತ್ತೇಜನ ನೀಡುವುದು ಹಾಗೂ ಧೋಬಿಘಾಟ್ ಪ್ರದೇಶದಲ್ಲಿನ ಸ್ಥಗಿತಗೊಂಡ ಕೊಳವೆಬಾವಿಯನ್ನು ತಕ್ಷಣ ಕಾರ್ಯಾರಂಭಗೊಳಿಸಿ ನೀರಿನ ಸರಬರಾಜು ಸುಧಾರಿಸುವ ಪ್ರಸ್ತಾವನೆಗಳಿಗೂ ಸಭೆ ಅನುಮೋದನೆ ನೀಡಿತು.
ಸಭೆಯ ಅಧ್ಯಕ್ಷತೆಯನ್ನು ಬ್ರಿಗೇಡಿಯರ್ ಜಾಯದೀಪ ಮುಖರ್ಜಿ ವಹಿಸಿದ್ದರು.