ಪ್ರಯಾಗರಾಜ, ಎ.30 : ದೇಶದಲ್ಲಿನ ಮಾನವ ಹಕ್ಕುಗಳ ಆಯೋಗಗಳ ಕಾರ್ಯವೈಖರಿ ಕುರಿತು ಅಲಹಾಬಾದ ಹೈಕೋರ್ಟ ವಿಭಾಗೀಯ ಪೀಠದಲ್ಲಿ ಅಪರೂಪದ ಭಿನ್ನಾಭಿಪ್ರಾಯ ವ್ಯಕ್ತವಾಗಿದ್ದು, ಇಬ್ಬರು ನ್ಯಾಯಮೂರ್ತಿಗಳು ಪ್ರತ್ಯೇಕ ಮಧ್ಯಂತರ ಆದೇಶಗಳನ್ನು ಹೊರಡಿಸಿದ್ದಾರೆ.
ಮದರಸಾಗಳ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಹೊರಡಿಸಿದ್ದ ಕೆಲವು ಆದೇಶಗಳನ್ನು ಪ್ರಶ್ನಿಸಿ ಶಿಕ್ಷಕರ ಸಂಘ ಮದರಿಸ್ ಅರೇಬಿಯಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಈ ಬೆಳವಣಿಗೆ ನಡೆದಿದೆ.
ವಿಚಾರಣೆ ಸಂದರ್ಭದಲ್ಲಿ ನ್ಯಾಯಮೂರ್ತಿ ಅತುಲ್ ಶ್ರೀಧರನ್ ಅವರು, ದೇಶಾದ್ಯಂತ ಮಾನವ ಹಕ್ಕುಗಳ ಆಯೋಗಗಳು ಮುಸ್ಲಿಂ ಸಮುದಾಯದ ಸದಸ್ಯರ ಮೇಲೆ ನಡೆಯುವ ದಾಳಿಗಳು ಹಾಗೂ ಕೆಲವೊಮ್ಮೆ ಸಂಭವಿಸುವ ಗುಂಪು ಹತ್ಯೆಗಳಂತಹ ಗಂಭೀರ ಪ್ರಕರಣಗಳಲ್ಲಿ ಸ್ವಯಂಪ್ರೇರಿತವಾಗಿ ಕ್ರಮ ಕೈಗೊಳ್ಳುವುದರಲ್ಲಿ ವಿಫಲವಾಗುತ್ತಿವೆ ಎಂದು ಅಭಿಪ್ರಾಯಪಟ್ಟರು. ಅಪರಾಧಿಗಳ ವಿರುದ್ಧ ಪ್ರಕರಣ ದಾಖಲಿಸದಿರುವುದು ಅಥವಾ ಸಮರ್ಪಕ ತನಿಖೆ ನಡೆಯದಿರುವ ಸಂದರ್ಭಗಳಲ್ಲಿಯೂ ಆಯೋಗಗಳ ಚುರುಕಿನ ಕೊರತೆ ಕಾಣುತ್ತಿದೆ ಎಂದು ಹೇಳಿದರು.
ಮಾನವ ಹಕ್ಕುಗಳ ಆಯೋಗಗಳು ತಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿದ ವಿಷಯಗಳಲ್ಲಿ ತಲೆಹಾಕುತ್ತಿವೆ ಎಂದು ಅವರು ಆಕ್ಷೇಪಿಸಿದರು. ಸಂವಿಧಾನದ ವಿಧಿ 226ರ ಅಡಿಯಲ್ಲಿ ಹೈಕೋರ್ಟ ವ್ಯಾಪ್ತಿಗೆ ಒಳಪಡುವ ವಿಷಯಗಳತ್ತವೇ ಹೆಚ್ಚು ಗಮನ ಹರಿಸಲಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.
ಮುಸ್ಲಿಂ ಸಮುದಾಯದ ಮೇಲೆ ದಾಳಿ, ಗುಂಪು ಹತ್ಯೆಗಳಂತಹ ಪ್ರಕರಣಗಳಲ್ಲಿ ಆಯೋಗಗಳು ಸ್ವಯಂಪ್ರೇರಿತವಾಗಿ ಕ್ರಮ ಕೈಗೊಳ್ಳಬೇಕಾಗಿತ್ತು. ಆದರೆ ಸಂಬಂಧಿಸದ ವಿಷಯಗಳತ್ತ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು. ಸಾಮಾನ್ಯ ನಾಗರಿಕರು ಕಾನೂನನ್ನು ಕೈಗೆತ್ತಿಕೊಂಡು ಕಿರುಕುಳ ನೀಡುವ ಘಟನೆಗಳಲ್ಲಿಯೂ ಆಯೋಗಗಳ ಚುರುಕು ಕಾಣಿಸದಿರುವುದನ್ನು ಅವರು ಉಲ್ಲೇಖಿಸಿದರು.
ವಿಭಿನ್ನ ಧರ್ಮಗಳ ವ್ಯಕ್ತಿಗಳ ನಡುವಿನ ಸಂಬಂಧಗಳ ಹಿನ್ನೆಲೆಯಲ್ಲಿ ನಡೆಯುವ ಕಿರುಕುಳ ಪ್ರಕರಣಗಳನ್ನೂ ಅವರು ಪ್ರಸ್ತಾಪಿಸಿ, ಸಾರ್ವಜನಿಕ ಸ್ಥಳಗಳಲ್ಲಿ ಸಹ ಇಂತಹ ಸಂದರ್ಭಗಳು ಭಯ ಹುಟ್ಟಿಸುವ ಮಟ್ಟಕ್ಕೆ ತಲುಪಿವೆ ಎಂದು ವಿಷಾದ ವ್ಯಕ್ತಪಡಿಸಿದರು.
ಇದಕ್ಕೆ ವಿರುದ್ಧವಾಗಿ, ನ್ಯಾಯಮೂರ್ತಿ ವಿವೇಕ ಸರನ್ ಅವರು ಇಂತಹ ಸಾಮಾನ್ಯೀಕರಣವನ್ನು ಒಪ್ಪಲಾರದೆ ತಮ್ಮ ಪ್ರತ್ಯೇಕ ಮಧ್ಯಂತರ ಆದೇಶದಲ್ಲಿ ಸ್ಪಷ್ಟಪಡಿಸಿದರು. ಮಾನವ ಹಕ್ಕುಗಳ ಆಯೋಗಗಳ ಕಾರ್ಯವೈಖರಿ ಕುರಿತು ಇಂತಹ ಸಮಗ್ರ ಅಭಿಪ್ರಾಯಕ್ಕೆ ಒಪ್ಪಿಗೆ ಇಲ್ಲ ಎಂದು ತಿಳಿಸಿದ್ದಾರೆ.