ePaper
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ವಂದೇ ಭಾರತ ಎಕ್ಸ್ ಪ್ರೆಸ್ ರೈಲು ಹಾಗೂ ಭಾರತ ಗೌರವ ಕಾಶಿ ರೈಲಿಗೆ ಹಸಿರು ನಿಶಾನೆ ತೋರಿದ ಪ್ರಧಾನಿ

ಬೆಂಗಳೂರು: ರಾಜಧಾನಿ ಬೆಂಗಳೂರಿಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿಯವರು ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದು, ವಂದೇ ಭಾರತ ರೈಲು ಹಾಗೂ ಭಾರತ ಗೌರವ ಕಾಶಿ ರೈಲಿಗೆ ಚಾಲನೆ ನೀಡಿದರು.

ಶಾಸಕರ ಭವನದ ಬಳಿ ಕನಕದಾಸರ ಪ್ರತಿಮೆಗೆ ಹಾಗೂ ಮಹರ್ಷಿ ವಾಲ್ಮೀಕಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪುಷ್ಪ ನಮನ ಸಲ್ಲಿಸಿದರು. ಬಳಿಕ ಅಲ್ಲಿಂದ ಕೆ ಎಸ್ ಆರ್ ರೈಲು ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ಬಿಜೆಪಿ ಕಾರ್ಯಕರ್ತರು ಸಾವಿರಾರು ಜನರು ಮೋದಿ ಮೋದಿ ಎಂಬ ಜಯಘೋಷಗಳೊಂದಿಗೆ ಸ್ವಾಗತಿಸಿದರು. ವಾಹನದಿಂದ ಇಳಿದು ಜನರತ್ತ ಕೈಬೀಸುತ್ತ ಕೆಲ ಕಾಲ ನಿಂತ ಪ್ರಧಾನಿ ಮೋದಿ ಬಳಿಕ ಜನರಿಗೆ ಕೈಮುಗಿದು ತೆರಳಿದರು.

ಬಳಿಕ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ರೈಲು ನಿಲ್ದಾಣದಲ್ಲಿ ಬಹುನಿರೀಕ್ಷಿತ ವಂದೇ ಭಾರತ ರೈಲು ಹಾಗೂ ಭಾರತ್ ಗೌರವ ಕಾಶಿ ರೈಲುಗಳಿಗೆ ಹಸಿರು ನಿಶಾನೆ ತೋರಿದರು. ಪ್ಲಾಟ್ ಫಾರಂ ನಂ. 7ರಲ್ಲಿ ವಂದೇ ಭಾರತ ರೈಲಿಗೆ ಚಾಲನೆ ನೀಡಿದರು. ಬಳಿಕ ಪ್ಲಾಟ್ ಫಾರ್ಮ್ 8ರಲ್ಲಿ ಭಾರತ ಗೌರವ ಕಾಶಿ ರೈಲಿಗೆ ಹಸಿರು ನಿಶಾನೆ ತೋರಿದರು.

ವಂದೇ ಭಾರತ ರೈಲು ಬೆಂಗಳೂರಿನಿಂದ ಮೈಸೂರು ಮೂಲಕ ಚೆನ್ನೈಗೆ ತೆರಳಲಿದೆ. ಮೇಕ್ ಇನ್ ಇಂಡಿಯಾ ಯೋಜನೆಯಡಿ ಸಿದ್ಧಪಡಿಸಲಾಗಿರುವ ಈ ರೈಲು ಅತ್ಯಂತ ವೇಗವಾಗಿ ಚಲಿಸಲಿದ್ದು, ಹಲವು ಸುಸಜ್ಜಿತ ವ್ಯವಸ್ಥೆಯನ್ನು ಹೊಂದಿದೆ. ಇನ್ನು ಭಾರತ ಗೌರವ ಕಾಶಿ ರೈಲು ರಾಜ್ಯದ ಜನತೆಗಾಗಿ ಕಾಶಿ ಯಾತ್ರೆಗೆ ತೆರಳಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಮುಜರಾಯಿ ಇಲಾಖೆಯಿಂದ ಆರಂಭವಾಗಿರುವ ವಿಶೇಷ ರೈಲು ಇದಾಗಿದೆ.

ಈ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಪಾಲ ಥಾವರ್ ಚಂದ ಗೆಹ್ಲೋಟ್, ವಿಧಾನಸಭೆ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಚಿವ ಶ್ರೀರಾಮುಲು ಉಪಸ್ಥಿತರಿದ್ದರು.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.