ಭೋಪಾಲ, ಮೇ 12 : ಪಶ್ಚಿಮ ಏಶ್ಯದಲ್ಲಿನ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಇಂಧನವನ್ನು ಮಿತವ್ಯಯವಾಗಿ ಬಳಕೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಕರೆ ನೀಡಿದ ಬೆನ್ನಲ್ಲೇ ಮಧ್ಯಪ್ರದೇಶದಲ್ಲಿ ಬಿಜೆಪಿ ನಾಯಕರೊಬ್ಬರು ಸುಮಾರು 50 ವಾಹನಗಳ ಬೆಂಗಾವಲಿನೊಂದಿಗೆ ಸಂಚರಿಸಿರುವ ಘಟನೆ ವಿವಾದಕ್ಕೆ ಕಾರಣವಾಗಿದೆ.
ಮಧ್ಯಪ್ರದೇಶ ಪಠ್ಯಪುಸ್ತಕ ನಿಗಮದ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಸೌಭಾಗ್ಯ ಸಿಂಗ್ ಠಾಕೂರ್ ಅವರು ಅಧಿಕಾರ ಸ್ವೀಕಾರಕ್ಕಾಗಿ ಉಜ್ಜಯಿನಿಯಿಂದ ಭೋಪಾಲ್ವರೆಗೆ ಬೆಂಬಲಿಗರು ಮತ್ತು ಬೆಂಗಾವಲು ವಾಹನಗಳ ದಂಡಿನೊಂದಿಗೆ ಪ್ರಯಾಣಿಸಿದ್ದಾರೆ.
ಈ ದೃಶ್ಯಗಳ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಹೆದ್ದಾರಿಯಲ್ಲಿ ಉದ್ದ ಸಾಲಿನಲ್ಲಿ ವಾಹನಗಳು ಸಾಗುತ್ತಿರುವುದು ಹಾಗೂ ಮಾರ್ಗಮಧ್ಯೆ ವಿವಿಧ ಸ್ಥಳಗಳಲ್ಲಿ ಬೆಂಬಲಿಗರು ವಾಹನ ನಿಲ್ಲಿಸಿ ಠಾಕೂರ್ ಅವರಿಗೆ ಸ್ವಾಗತ ಕೋರಿರುವುದು ವಿಡಿಯೊದಲ್ಲಿ ಕಾಣಿಸಿಕೊಂಡಿದೆ.
ವಾಹನಗಳ ದಟ್ಟಣೆಯಿಂದ ಹಲವು ಕಡೆ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಸಾರ್ವಜನಿಕರು ಮತ್ತು ವಾಹನ ಸವಾರರು ತೊಂದರೆ ಅನುಭವಿಸಿದರು ಎಂದು ವರದಿಯಾಗಿದೆ. ಕೆಲವೆಡೆ ದೀರ್ಘ ಕಾಲ ವಾಹನ ಸಂಚಾರ ನಿಧಾನಗೊಂಡ ಪರಿಣಾಮ ಜನರು ಪರದಾಡುವಂತಾಯಿತು.
ಪಶ್ಚಿಮ ಏಶ್ಯ ಬಿಕ್ಕಟ್ಟಿನಿಂದ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೇಶದ ಆರ್ಥಿಕತೆಗೆ ಒತ್ತಡ ಉಂಟಾಗುವ ಸಾಧ್ಯತೆ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಹೇಳಿದ್ದರು. ಇಂಧನವನ್ನು ಜವಾಬ್ದಾರಿಯಿಂದ ಬಳಕೆ ಮಾಡುವಂತೆ ಅವರು ಜನತೆಗೆ ಮನವಿ ಮಾಡಿದ್ದರು. ಆ ಕರೆಯಾದ ಕೇವಲ ಎರಡು ದಿನಗಳಲ್ಲೇ ಬಿಜೆಪಿ ನಾಯಕರ ಈ ವಾಹನ ರ್ಯಾಲಿ ನಡೆದಿರುವುದು ಚರ್ಚೆಗೆ ಗ್ರಾಸವಾಗಿದೆ.
ಪ್ರಧಾನಿಯ ಮನವಿಯ ಬಗ್ಗೆ ಈಗಾಗಲೇ ಟೀಕೆ ಮಾಡಿದ್ದ ಪ್ರತಿಪಕ್ಷ ಕಾಂಗ್ರೆಸ್, ಸರ್ಕಾರದ ನೀತಿಗಳ ವೈಫಲ್ಯವನ್ನು ಮುಚ್ಚಿಹಾಕಲು ಇಂತಹ ಕರೆಗಳನ್ನು ನೀಡಲಾಗುತ್ತಿದೆ ಎಂದು ಆರೋಪಿಸಿತ್ತು. ಇದರ ನಡುವೆಯೇ ನಡೆದ ಈ ಘಟನೆ ಬಿಜೆಪಿ ಮತ್ತು ಪ್ರಧಾನಿ ಮೋದಿ ಅವರಿಗೆ ಮುಜುಗರ ಉಂಟುಮಾಡಿದೆ ಎಂದು ಪ್ರತಿಪಕ್ಷಗಳು ಟೀಕಿಸಿವೆ.