ಹೊಸದಿಲ್ಲಿ, ಜೂ. 30: ಮಹಾರಾಷ್ಟ್ರದ ಪುಣೆಯಲ್ಲಿ ಮೂರು ವರ್ಷದ ಬಾಲಕಿಯ ಅಪಹರಣ, ಲೈಂಗಿಕ ದೌರ್ಜನ್ಯ ಹಾಗೂ ಕೊಲೆ ಪ್ರಕರಣದಲ್ಲಿ ತಪ್ಪಿತಸ್ಥನೆಂದು ಸಾಬೀತಾದ 65 ವರ್ಷದ ಭೀಮರಾವ್ ಪ್ರಭಾಕರ ಕಾಂಬ್ಳೆಗೆ ವಿಶೇಷ ಪೋಕ್ಸೊ ನ್ಯಾಯಾಲಯ ಸಾಯುವವರೆಗೆ ನೇಣುಶಿಕ್ಷೆ ವಿಧಿಸಿದೆ. ಪ್ರಕರಣವನ್ನು "ಅಪರೂಪದ ಪ್ರಕರಣಗಳಲ್ಲಿ ಅಪರೂಪ" ಎಂದು ಪರಿಗಣಿಸಿರುವ ನ್ಯಾಯಾಲಯ, ಆರೋಪಿಯ ಕೃತ್ಯವು ಅತ್ಯಂತ ಅಮಾನವೀಯ, ಕ್ರೂರ ಹಾಗೂ ಸಮಾಜದ ಮನಸ್ಸನ್ನೇ ಬೆಚ್ಚಿಬೀಳಿಸುವಂತದ್ದು ಎಂದು ಅಭಿಪ್ರಾಯಪಟ್ಟಿದೆ.
ತೀರ್ಪು ಪ್ರಕಟಿಸಿದ ವಿಶೇಷ ನ್ಯಾಯಾಧೀಶ ಎಸ್.ಆರ್. ಸಾಲುಂಖೆ, ಈ ಪ್ರಕರಣದ ಸಾಕ್ಷ್ಯಗಳು, ವೈದ್ಯಕೀಯ ವರದಿಗಳು ಮತ್ತು ಸಿಸಿಟಿವಿ ದೃಶ್ಯಾವಳಿಗಳು ಆರೋಪಿಯ ಅಪರಾಧವನ್ನು ಯಾವುದೇ ಅನುಮಾನಕ್ಕೆ ಅವಕಾಶವಿಲ್ಲದಂತೆ ಸಾಬೀತುಪಡಿಸಿವೆ ಎಂದು ಹೇಳಿದ್ದಾರೆ. "ಸಿಸಿಟಿವಿ ದೃಶ್ಯಾವಳಿಗಳಲ್ಲಿ ದಾಖಲಾಗಿರುವ ಪುಟ್ಟ ಮಗುವಿನ ಕೊನೆಯ ಕಿರುಚಾಟವನ್ನು ನ್ಯಾಯಾಲಯ ಮರೆಯಲು ಸಾಧ್ಯವಿಲ್ಲ. ಮಗುವಿನ ದೇಹದ ಮೇಲಿನ 18 ಗಾಯಗಳು, ಆಕೆ ಅನುಭವಿಸಿದ ನೋವು ಮತ್ತು ಅಮಾನವೀಯ ಕೃತ್ಯವನ್ನು ಪರಿಗಣಿಸಿದಾಗ ಅತ್ಯುನ್ನತ ಶಿಕ್ಷೆಯೊಂದೇ ನ್ಯಾಯಸಮ್ಮತವಾಗಿದೆ" ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ.
ಮೂಲತಃ ಪುಣೆ ಜಿಲ್ಲೆಯ ಭೋರ್ ತಾಲ್ಲೂಕಿನ ಸಾಲ್ವಾಡೆ ಗ್ರಾಮದ ನಿವಾಸಿಯಾಗಿರುವ ಭೀಮರಾವ ಪ್ರಭಾಕರ ಕಾಂಬ್ಳೆಗೆ ಏಳು ಹೆಣ್ಣು ಮಕ್ಕಳು ಮತ್ತು ಒಬ್ಬ ಮಗನಿದ್ದಾರೆ. ಪುಣೆ ಪೊಲೀಸರ ತನಿಖೆಯಲ್ಲಿ ಆತನ ವಿರುದ್ಧ ಈ ಹಿಂದೆಯೂ ಮಹಿಳೆಯರು ಹಾಗೂ ಬಾಲಕಿಯರ ಮೇಲಿನ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದ ಹಲವು ಪ್ರಕರಣಗಳು ದಾಖಲಾಗಿದ್ದವು ಎಂಬ ಮಾಹಿತಿಯೂ ಹೊರಬಂದಿದೆ.
ಮೃತ ಬಾಲಕಿ ಪುಣೆಯ ಧಯಾರಿ ಪ್ರದೇಶದ ನಿವಾಸಿಯಾಗಿದ್ದು, ತನ್ನ ಆರು ವರ್ಷದ ಅಕ್ಕನೊಂದಿಗೆ ರಜಾದಿನಗಳಲ್ಲಿ ನಸ್ರಾಪುರದಲ್ಲಿರುವ ಪೂರ್ವಜರ ಮನೆಗೆ ಆಗಾಗ್ಗೆ ಭೇಟಿ ನೀಡುತ್ತಿದ್ದಳು. ಘಟನೆ ನಡೆದ ದಿನವೂ ಕುಟುಂಬ ಸದಸ್ಯರೊಂದಿಗೆ ಗ್ರಾಮಕ್ಕೆ ಬಂದಿದ್ದಳು.
ಮೇ 1ರಂದು ನಡೆದ ಘಟನೆ
ಮೇ 1ರಂದು ಕಾಂಬ್ಳೆ ದಿನಗೂಲಿ ಕೆಲಸಕ್ಕೆ ತೆರಳದೆ ಸ್ಥಳೀಯ ದೇವಸ್ಥಾನದ ಬಳಿ ಕುಳಿತಿದ್ದ. ಅದೇ ಸಮಯದಲ್ಲಿ ದೇವಸ್ಥಾನದ ಆವರಣದಲ್ಲಿ ಮೂರು ವರ್ಷದ ಬಾಲಕಿ ಸೇರಿದಂತೆ ಹಲವು ಮಕ್ಕಳು ಆಟವಾಡುತ್ತಿದ್ದರು. ದೇವಸ್ಥಾನದ ಮುಂದೆ ನಿಂತಿದ್ದ ಮೋಟಾರ್ಸೈಕಲ್ ಮೇಲೆ ಮಕ್ಕಳು ಕುಳಿತಿದ್ದ ಕಾರಣ ಕೋಪಗೊಂಡ ಕಾಂಬ್ಳೆ ಅವರತ್ತ ಇಟ್ಟಿಗೆಗಳನ್ನು ಎಸೆದಿದ್ದ. ಇದರಿಂದ ಮಕ್ಕಳು ಅಲ್ಲಿಂದ ಓಡಿಹೋಗಿದ್ದರು.
ಸಂಜೆ ಸುಮಾರು 4 ಗಂಟೆ ವೇಳೆಗೆ ಬಾಲಕಿ ಕಾಣೆಯಾಗಿರುವುದನ್ನು ಆಕೆಯ ಅಜ್ಜಿ ಗಮನಿಸಿ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದರು. ಬಳಿಕ ಗ್ರಾಮಸ್ಥರು ಮತ್ತು ಪೊಲೀಸರು ಸೇರಿ ವ್ಯಾಪಕ ಹುಡುಕಾಟ ಆರಂಭಿಸಿದರು.
ಸಿಸಿಟಿವಿಯಲ್ಲಿ ಸಿಕ್ಕ ಮಹತ್ವದ ಸುಳಿವು
ಗ್ರಾಮದ ವಿವಿಧೆಡೆ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಕಾಂಬ್ಳೆ ಬಾಲಕಿಯನ್ನು ಸಮೀಪದ ಗೋಶಾಲೆಯತ್ತ ಕರೆದೊಯ್ಯುತ್ತಿರುವ ದೃಶ್ಯಗಳು ಪತ್ತೆಯಾಗಿದ್ದವು. ನಂತರದ ವಿಚಾರಣೆಯಲ್ಲಿ ಆತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ ಎಂದು ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಹುಡುಕಾಟದ ವೇಳೆ ಗ್ರಾಮಸ್ಥರು ಗೋಣಿಚೀಲದ ಕೆಳಗೆ ಮರೆಮಾಚಲಾಗಿದ್ದ ಬಾಲಕಿಯ ಶವವನ್ನು ಪತ್ತೆಹಚ್ಚಿದರು. ಬಾಲಕಿಯ ಬಾಯಿಯಲ್ಲಿ ಲೆಗ್ಗಿಂಗ್ಸ್ ತುರುಕಲಾಗಿದ್ದು, ಮುಖ, ಎದೆ, ಖಾಸಗಿ ಅಂಗಗಳು ಹಾಗೂ ಗುದದ್ವಾರದ ಬಳಿ ಗಂಭೀರ ಗಾಯಗಳಿದ್ದವು. ಈ ದೃಶ್ಯ ಕಂಡ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ಮರಣೋತ್ತರ ಪರೀಕ್ಷೆಯಲ್ಲಿ ಬಾಲಕಿಯ ದೇಹದ ಮೇಲೆ 18 ಗಾಯಗಳು ಕಂಡುಬಂದಿದ್ದು, ಯೋನಿ ಹಾಗೂ ಗುದದ್ವಾರದ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ದೃಢಪಟ್ಟಿದೆ. ದೇಹದ ಮೇಲೆ ಆರೋಪಿಯ ವೀರ್ಯದ ಕುರುಹುಗಳು ಪತ್ತೆಯಾಗಿದ್ದು, ಎದೆಗೆ ಬಲವಾದ ಪೆಟ್ಟು, ಬಾಯಿ ಮುಚ್ಚುವಿಕೆ ಹಾಗೂ ಉಸಿರುಗಟ್ಟುವಿಕೆಯಿಂದ ಬಾಲಕಿ ಮೃತಪಟ್ಟಿದ್ದಾಳೆ ಎಂದು ವೈದ್ಯಕೀಯ ವರದಿ ತಿಳಿಸಿದೆ.
ಡಿಎನ್ಎ ಪರೀಕ್ಷೆಯ ವರದಿಯೂ ಆರೋಪಿಯ ವಿರುದ್ಧದ ಆರೋಪಗಳನ್ನು ಸಂಪೂರ್ಣವಾಗಿ ದೃಢಪಡಿಸಿದೆ. ಅಲ್ಲದೆ, ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ ಮಧ್ಯಾಹ್ನ 3.12ಕ್ಕೆ ಕಾಂಬ್ಳೆ ಬಾಲಕಿಯೊಂದಿಗೆ ಗೋಶಾಲೆಯೊಳಗೆ ಪ್ರವೇಶಿಸಿದ್ದು, ಮಧ್ಯಾಹ್ನ 3.51ಕ್ಕೆ ಆತ ಒಬ್ಬನೇ ಹೊರಬಂದಿರುವುದು ದಾಖಲಾಗಿತ್ತು. ಈ ಎಲೆಕ್ಟ್ರಾನಿಕ್ ಸಾಕ್ಷ್ಯಗಳು ಪ್ರಕರಣದ ನಿರ್ಣಾಯಕ ಅಂಶಗಳಾಗಿದ್ದವು.
ವಿಶೇಷ ಸಾರ್ವಜನಿಕ ಅಭಿಯೋಜಕ ಅಜಯ ಮಿಸಾರ್ ವೈದ್ಯಕೀಯ ವರದಿಗಳು, ಡಿಎನ್ಎ ಪರೀಕ್ಷೆ, ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಇತರ ವೈಜ್ಞಾನಿಕ ಸಾಕ್ಷ್ಯಗಳನ್ನು ನ್ಯಾಯಾಲಯದ ಮುಂದೆ ಮಂಡಿಸಿದರು. ಮಾಹಿತಿದಾರರ ಪರ ವಕೀಲ ವಿಪುಲ್ ದುಶಿಂಗ್ ಆರೋಪಿಯ ಹಿಂದಿನ ಅಪರಾಧ ಹಿನ್ನೆಲೆ ಹಾಗೂ ಸಮಾಜಕ್ಕೆ ಆತ ಉಂಟುಮಾಡುವ ಅಪಾಯವನ್ನು ನ್ಯಾಯಾಲಯದ ಗಮನಕ್ಕೆ ತಂದರು.
ಈ ಎಲ್ಲ ಅಂಶಗಳನ್ನು ಸಮಗ್ರವಾಗಿ ಪರಿಗಣಿಸಿದ ನ್ಯಾಯಾಲಯ, ಮೂರು ವರ್ಷದ ಬಾಲಕಿಯ ಮೇಲಿನ ಅಮಾನವೀಯ ಲೈಂಗಿಕ ದೌರ್ಜನ್ಯ ಮತ್ತು ಕೊಲೆ ಅತ್ಯಂತ ಕ್ರೂರ ಕೃತ್ಯವಾಗಿದ್ದು, ಇದು "ಅಪರೂಪದ ಪ್ರಕರಣಗಳಲ್ಲಿ ಅಪರೂಪ" ಎಂಬ ಮಾನದಂಡಕ್ಕೆ ಸಂಪೂರ್ಣವಾಗಿ ಹೊಂದುತ್ತದೆ ಎಂದು ಅಭಿಪ್ರಾಯಪಟ್ಟಿತು. ಇಂತಹ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ನ್ಯಾಯಕ್ಕೆ ಸಮರ್ಪಕವಾಗುವುದಿಲ್ಲ ಎಂದು ಹೇಳಿ, ಆರೋಪಿಗೆ ಸಾಯುವವರೆಗೆ ನೇಣುಶಿಕ್ಷೆ ವಿಧಿಸಿತು.