LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ಹಿಂದೂ ಮಹಿಳೆ ಅಪಹರಣದ ಸುಳ್ಳು ಕಥೆ ಹೆಣೆದು ಮುಸ್ಲಿಂ ಯುವಕರನ್ನು ಸಿಲುಕಿಸಲು ಯತ್ನ, ಆರೋಪಿ ಪರಾರಿ

ಮೀರತ್, ಜೂ. 2 : ಹಿಂದೂ ಮಹಿಳೆಯೊಬ್ಬರ ಅಪಹರಣ ಪ್ರಕರಣದ ನೆಪದಲ್ಲಿ ಇಬ್ಬರು ಮುಸ್ಲಿಂ ಯುವಕರನ್ನು ಕ್ರಿಮಿನಲ್ ಪ್ರಕರಣದಲ್ಲಿ ಸಿಲುಕಿಸಲು ಸಂಚು ರೂಪಿಸಲಾಗಿತ್ತು ಎಂಬ ಅಚ್ಚರಿಯ ಸಂಗತಿ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದ ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಪ್ರಕರಣದ ಪ್ರಮುಖ ಆರೋಪಿ ನಕುಲ್ ಸಿಂಗ್ ತಲೆಮರೆಸಿಕೊಂಡಿದ್ದು, ಆತನ ಪತ್ತೆ ಹಾಗೂ ಬಂಧನಕ್ಕಾಗಿ ಮೂರು ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಎಂದು ವರದಿಯಾಗಿದೆ.

ಪೊಲೀಸರ ಮಾಹಿತಿ ಪ್ರಕಾರ, ಜೀಶನ್ ಮತ್ತು ಶವೇಝ್ ಎಂಬ ಇಬ್ಬರು ಮುಸ್ಲಿಂ ಯುವಕರ ವಿರುದ್ಧ ಗಂಭೀರ ಆರೋಪ ಹೊರಿಸಿ ಅವರನ್ನು ಕಾನೂನು ಸಂಕಷ್ಟಕ್ಕೆ ಸಿಲುಕಿಸುವ ಉದ್ದೇಶದಿಂದ ನಕುಲ್ ಸಿಂಗ್ ಪೂರ್ವಯೋಜಿತ ಸಂಚು ರೂಪಿಸಿದ್ದಾನೆ. ನಕುಲ್, ಜೀಶನ್ ಹಾಗೂ ಶವೇಝ್ ಮೂವರೂ ಸುಮಾರು 20 ವರ್ಷ ವಯಸ್ಸಿನವರಾಗಿದ್ದಾರೆ.

ಶನಿವಾರ ನಕುಲ್ ಸಿಂಗ್ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ, ಇಬ್ಬರು ಯುವಕರು ಹಿಂದೂ ಮಹಿಳೆಯೊಬ್ಬರನ್ನು ಅಪಹರಿಸಿ ಕಾರಿನಲ್ಲಿ ಕರೆದೊಯ್ಯುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದ. ಅಲ್ಲದೆ, ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ ಬಳಿಕ ಆಕೆಯನ್ನು ಮೆಡಿಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ರಿಂಗ್ ರಸ್ತೆ ಪ್ರದೇಶದಲ್ಲಿ ಬಿಟ್ಟು ಪರಾರಿಯಾಗಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದ.

ತಾನು ಹಾಗೂ ತನ್ನ ಸಹಚರರು ಆರೋಪಿತ ಯುವಕರನ್ನು ತಡೆದಿದ್ದು, ಮಹಿಳೆ ಸ್ಥಳದಲ್ಲೇ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ ಎಂದು ನಕುಲ್ ಪೊಲೀಸರಿಗೆ ತಿಳಿಸಿದ್ದ. ಮಾಹಿತಿ ಪಡೆದ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಇದೇ ವೇಳೆ ಜೀಶನ್ ಮತ್ತು ಶವೇಝ್ ಅವರನ್ನು ವಶಕ್ಕೆ ಪಡೆದು ಅವರು ಪ್ರಯಾಣಿಸುತ್ತಿದ್ದ ವಾಹನವನ್ನು ಜಪ್ತಿ ಮಾಡಿದ್ದರು.

ನಕುಲ್ ನೀಡಿದ ದೂರಿನ ಆಧಾರದ ಮೇಲೆ ಆರಂಭಿಕ ಹಂತದಲ್ಲಿ ಇಬ್ಬರು ಯುವಕರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಆದರೆ ತನಿಖೆ ಮುಂದುವರಿದಂತೆ ಹಲವು ಅನುಮಾನಾಸ್ಪದ ಅಂಶಗಳು ಪೊಲೀಸರ ಗಮನಕ್ಕೆ ಬಂದವು. ನಕುಲ್ ನೀಡಿದ ಮಾಹಿತಿ ಮತ್ತು ಘಟನೆಯ ವಾಸ್ತವಾಂಶಗಳ ನಡುವೆ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ಪೊಲೀಸರು ಎಲ್ಲ ಆಯಾಮಗಳಲ್ಲೂ ತನಿಖೆ ಕೈಗೊಂಡರು.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಪ್ರಜ್ಞೆಗೆ ಬಂದ ಮಹಿಳೆ ನೀಡಿದ ಹೇಳಿಕೆ ಪ್ರಕರಣಕ್ಕೆ ಹೊಸ ತಿರುವು ನೀಡಿತು. ನಕುಲ್ ಸಿಂಗ್ ತನ್ನನ್ನು ಉದ್ಯೋಗ ಕೊಡಿಸುವ ಭರವಸೆ ನೀಡಿ ಸಂಪರ್ಕಿಸಿದ್ದನು ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾಳೆ. ಆತ ಹಿಂದೂ ಸಂಘಟನೆಯೊಂದರ ಜತೆ ಸಂಪರ್ಕ ಹೊಂದಿದ್ದಾನೆ ಎಂದೂ ಆಕೆ ಹೇಳಿದ್ದಾಳೆ.

ಸಿವಿಲ್ ಲೈನ್ಸ್ ವೃತ್ತಾಧಿಕಾರಿ ಶುಭಿತಾ ಸಿಂಗ್ ಅವರ ಪ್ರಕಾರ, ಮಹಿಳೆಯನ್ನು ಉದ್ದೇಶಪೂರ್ವಕವಾಗಿ ಜೀಶನ್ ಮತ್ತು ಶವೇಝ್ ಅವರೊಂದಿಗೆ ಕಳುಹಿಸಲಾಗಿತ್ತು. ನಂತರ ಆಕೆಯನ್ನು ರಿಂಗ್ ರಸ್ತೆ ಪ್ರದೇಶದಲ್ಲಿ ಬಿಟ್ಟು, ಅಪಹರಣದ ನಾಟಕ ಸೃಷ್ಟಿಸುವ ಯೋಜನೆ ರೂಪಿಸಲಾಗಿತ್ತು ಎಂಬುದು ತನಿಖೆಯಲ್ಲಿ ಗೊತ್ತಾಗಿದೆ.

ಈ ಸಂಚಿನಲ್ಲಿ ಸಹಕರಿಸಿದರೆ ಹಣ ನೀಡುವುದಾಗಿ ನಕುಲ್ ಭರವಸೆ ನೀಡಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾಳೆ. ಆಕೆಯ ಹೇಳಿಕೆಯಂತೆ, ಇಬ್ಬರು ಯುವಕರ ವಿರುದ್ಧ ಸುಳ್ಳು ಆರೋಪ ಹೊರಿಸಲು ಪೂರ್ವನಿಯೋಜಿತವಾಗಿ ಈ ಸಂಪೂರ್ಣ ಯೋಜನೆ ರೂಪಿಸಲಾಗಿತ್ತು.

ಇನ್ನೊಂದೆಡೆ ವಿಚಾರಣೆ ವೇಳೆ ಜೀಶನ್ ಮತ್ತು ಶವೇಝ್ ತಾವು ಯಾವುದೇ ಅಪರಾಧದಲ್ಲಿ ಭಾಗಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಘಟನೆ ನಡೆಯುವ ಮೊದಲು ಮಹಿಳೆಯನ್ನು ತಾವು ಎಂದಿಗೂ ಭೇಟಿಯಾಗಿರಲಿಲ್ಲ ಎಂದು ಅವರು ಪೊಲೀಸರಿಗೆ ತಿಳಿಸಿದ್ದಾರೆ.

ಪ್ರಕರಣದ ಸತ್ಯಾಸತ್ಯತೆ ತಿಳಿಯಲು ಪೊಲೀಸರು ವ್ಯಾಪಕ ತನಿಖೆ ನಡೆಸಿದ್ದಾರೆ. 500ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿದ್ದು, ಸಂಬಂಧಪಟ್ಟ ಎಲ್ಲರ ದೂರವಾಣಿ ಕರೆಗಳ ವಿವರಗಳನ್ನು ವಿಶ್ಲೇಷಿಸಲಾಗಿದೆ. ಅಲ್ಲದೆ, ಘಟನೆಗೆ ಸಂಬಂಧಿಸಿದ ಪ್ರತಿಯೊಬ್ಬರನ್ನೂ ಪ್ರತ್ಯೇಕವಾಗಿ ವಿಚಾರಣೆ ನಡೆಸಲಾಗಿದೆ.

ತನಿಖೆಯಲ್ಲಿ ಸಂಗ್ರಹಿಸಲಾದ ಸಾಕ್ಷ್ಯಾಧಾರಗಳು ಮಹಿಳೆಯ ಹೇಳಿಕೆಯನ್ನು ಬೆಂಬಲಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜೊತೆಗೆ, ಜೀಶನ್ ಮತ್ತು ಶವೇಝ್ ವಿರುದ್ಧ ಮಾಡಲಾದ ಆರೋಪಗಳಿಗೆ ವಿರುದ್ಧವಾದ ಹಲವು ಪುರಾವೆಗಳು ಲಭ್ಯವಾಗಿದ್ದು, ಅವರ ವಿರುದ್ಧದ ಆರೋಪಗಳು ಸುಳ್ಳು ಎನ್ನುವ ಅಂಶಗಳು ದೃಢವಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಇದರಿಂದ ಪ್ರಕರಣದಲ್ಲಿ ಮಹತ್ವದ ತಿರುವು ಕಂಡುಬಂದಿದ್ದು, ಇದೀಗ ನಕುಲ್ ಸಿಂಗ್ ವಿರುದ್ಧವೇ ಪ್ರಕರಣ ದಾಖಲಿಸಲಾಗಿದೆ. ಆರೋಪಿ ತಲೆಮರೆಸಿಕೊಂಡಿರುವ ಹಿನ್ನೆಲೆಯಲ್ಲಿ ಆತನ ಬಂಧನಕ್ಕಾಗಿ ವಿಶೇಷ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST