ಗುವಾಹತಿ, ಏಪ್ರಿಲ್ 29 : ಮಧುಚಂದ್ರದ ವೇಳೆ ಪತಿಯನ್ನು ಪತ್ನಿಯೇ ಹತ್ಯೆ ಮಾಡಿದ ಪ್ರಕರಣ ಇಡೀ ದೇಶದ ಗಮನ ಸೆಳೆದಿತ್ತು, ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಸೋನಮ್ ರಘುವಂಶಿಗೆ ಜಾಮೀನು ಮಂಜೂರಾಗಿದೆ. ಪತಿ ರಾಜಾ ರಘುವಂಶಿ ಹತ್ಯೆ ಪ್ರಕರಣದಲ್ಲಿ ಸತತ ಮೂರು ಬಾರಿ ಜಾಮೀನು ಅರ್ಜಿ ತಿರಸ್ಕೃತಗೊಂಡಿದ್ದರೂ, ನಾಲ್ಕನೇ ಬಾರಿ ಶಿಲ್ಲಾಂಗ್ ನ್ಯಾಯಾಲಯ ಆರೋಪಿಗೆ ಜಾಮೀನು ನೀಡಿರುವುದು ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದೆ.
ಸುಮಾರು 10 ತಿಂಗಳ ಕಾಲ ಜೈಲಿನಲ್ಲಿದ್ದ ಸೋನಮ್ ರಘುವಂಶಿ, ನ್ಯಾಯಾಲಯದ ಆದೇಶದ ನಂತರ ಬಿಡುಗಡೆ ಸಂಬಂಧಿತ ಎಲ್ಲಾ ವಿಧಿವಿಧಾನಗಳನ್ನು ಕುಟುಂಬದವರು ಪೂರೈಸಿದ ಬಳಿಕ ಶಿಲ್ಲಾಂಗ್ ಜೈಲಿನಿಂದ ಹೊರಬಂದಳು. ಜಾಮೀನು ಮಂಜೂರಾಗಲು ತನಿಖೆ ಪೂರ್ಣಗೊಂಡಿರುವುದು ಪ್ರಮುಖ ಕಾರಣವಾಗಿದೆ ಎಂದು ತಿಳಿದುಬಂದಿದೆ.
ಈ ಪ್ರಕರಣ ಮೇಘಾಲಯದ ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯ ಸೊಹ್ರಾ ಪ್ರದೇಶದಲ್ಲಿ 2025ರ ಮೇ ತಿಂಗಳಲ್ಲಿ ನಡೆದಿತ್ತು. ಮಧುಚಂದ್ರಕ್ಕಾಗಿ ತೆರಳಿದ್ದ ದಂಪತಿಯಲ್ಲಿ ಪತಿ ರಾಜಾ ರಘುವಂಶಿ ಅಚಾನಕ್ ನಾಪತ್ತೆಯಾಗಿದ್ದ. ನಂತರ ಅವರ ಮೃತದೇಹ ಆಳವಾದ ಕಂದಕದಲ್ಲಿ ಪತ್ತೆಯಾಗಿದ್ದು, ಪ್ರಕರಣ ಕೊಲೆ ಎನ್ನುವ ದಿಕ್ಕಿನಲ್ಲಿ ತೀವ್ರ ತನಿಖೆಗೆ ಕಾರಣವಾಗಿತ್ತು.
ಪೊಲೀಸರ ತನಿಖೆಯಲ್ಲಿ, ಸೋನಮ್ ತನ್ನ ಪ್ರಿಯಕರ ರಾಜಾ ಕುಶ್ವಾಹಾ ಜೊತೆಗೂಡಿ ಪತಿಯನ್ನು ಕೊಲ್ಲಲು ಪೂರ್ವ ಸಂಚು ರೂಪಿಸಿದ್ದಾಗಿ ಬೆಳಕಿಗೆ ಬಂದಿದೆ. ಕುಶ್ವಾಹಾ ಸೇರಿದಂತೆ ಇತರ ಮೂವರ ಸಹಾಯದಿಂದ ಹತ್ಯೆ ನಡೆಸಲಾಗಿದೆ ಎಂಬುದಾಗಿ ಸೋನಮ್ ನೀಡಿದ ತಪ್ಪೊಪ್ಪಿಗೆ ಹೇಳಿಕೆ ಆಧಾರವಾಗಿ ಉತ್ತರ ಪ್ರದೇಶ ಪೊಲೀಸರು ಆಕೆಯನ್ನು ಬಂಧಿಸಿದ್ದರು. ಈ ಪ್ರಕರಣದಲ್ಲಿ ಕುಶ್ವಾಹಾ ಹಾಗೂ ಇನ್ನೂ ಮೂವರು ಆರೋಪಿಗಳು ಬಂಧನದಲ್ಲೇ ಉಳಿದಿದ್ದಾರೆ.
ಪ್ರಕರಣದ ತನಿಖೆ ಪೂರ್ಣಗೊಂಡು ಆರೋಪಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿರುವ ಹಿನ್ನೆಲೆಯಲ್ಲಿ, ಪೂರ್ವ ಖಾಸಿ ಹಿಲ್ಸ್ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಕಾನೂನು ನೆರವು ಘಟಕದಿಂದ ಸೋನಮ್ ಪರವಾಗಿ ಜಾಮೀನು ಅರ್ಜಿ ಸಲ್ಲಿಸಲಾಗಿತ್ತು. ತನಿಖೆಗೆ ಸಂಪೂರ್ಣ ಸಹಕಾರ ನೀಡಿರುವುದು, ಮುಂದೆಯೂ ನ್ಯಾಯಾಂಗ ಪ್ರಕ್ರಿಯೆಗೆ ಸಹಕರಿಸುವುದಾಗಿ ಆರೋಪಿ ಭರವಸೆ ನೀಡಿರುವುದು ಹಾಗೂ ತನಿಖೆ ಪೂರ್ಣಗೊಂಡಿರುವ ಅಂಶಗಳನ್ನು ಪರಿಗಣಿಸಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಪ್ರಾರಂಭದಲ್ಲಿ ಈ ಪ್ರಕರಣ ದೇಶವ್ಯಾಪಿ ಚರ್ಚೆಗೆ ಗ್ರಾಸವಾಗಿತ್ತು. ಮಧುಚಂದ್ರದ ವೇಳೆ ನಡೆದ ಈ ಹತ್ಯೆ ಪ್ರಕರಣದಲ್ಲಿ ಪತ್ನಿಯೇ ಪ್ರಮುಖ ಆರೋಪಿಯಾಗಿರುವುದು ಜನರಲ್ಲಿ ಆಘಾತ ಮೂಡಿಸಿತ್ತು. ಈಗ ಜಾಮೀನು ಮಂಜೂರಾದ ಹಿನ್ನೆಲೆಯಲ್ಲಿ ಮುಂದಿನ ನ್ಯಾಯಾಂಗ ಪ್ರಕ್ರಿಯೆ ಹೇಗೆ ಸಾಗುತ್ತದೆ ಎಂಬುದರ ಮೇಲೆ ಎಲ್ಲರ ಗಮನ ನೆಟ್ಟಿದೆ.