ಬೆಳಗಾವಿ: ಅಧಿವೇಶನದ ವಿರೋಧವಾಗಿ ಮಹಾಮೇಳ ನಡೆಸಲು ಮುಂದಾಗಿದ್ದ ನಾಡದ್ರೋಹಿ ಎಂಇಎಸ್ ಪುಂಡರನ್ನು ಬೆಳಗಾವಿ ಪೊಲೀಸ ವಶಕ್ಕೆ ಪಡೆದಿದ್ದಾರೆ.
ಪ್ರತಿವರ್ಷ ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ನಾಡದ್ರೋಹಿ ಎಂಇಎಸ್ ಅಧಿವೇಶನಕ್ಕೆ ವಿರುದ್ಧವಾಗಿ ಮಹಾಮೇಳ ಆಯೋಜನೆ ಮಾಡುತ್ತಿದ್ದು ಈ ಬಾರಿಯು ಎಂಇಎಸ್ ಮಹಾಮೇಳ ಆಯೋಜನೆ ಮಾಡಿದೆ. ಹಾಗಾಗಿ ಜಿಲ್ಲಾಡಳಿತ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ನಿಷೇಧ ಹೇರಿತ್ತು. ಆದರೆ ಜಿಲ್ಲಾಡಳಿತ ನಿಷೇಧ ಧಿಕ್ಕರಿಸಿ ಎಂಇಎಸ್ ಪುಂಡರು ನಾಡದ್ರೋಹಿ ಘೋಷಣೆ ಕೂಗಿ ಮಹಾಮೇಳ ಆಚರಣೆಗೆ ಮುಂದಾದಾಗ ಪೊಲೀಸರು ಅವರನ್ನು ವಶಕ್ಕೆ ಪಡೆದರು.
ಎಂಇಎಸ್ ನಾಯಕರಾದ ಮನೋಹರ ಕಿಣೇಕರ, ಆರ್ ಎಂ. ಪಾಟೀಲ, ಪ್ರಕಾಶ ಶಿರೋಳಕರ, ಪ್ರಕಾಶ ಮರ್ಕಾಳೆ ಸೇರಿ ನಗರದ ಸಂಭಾಜಿ ವೃತ್ತದ ಬಳಿ 20ಕ್ಕೂ ಅಧಿಕ ಜನರನ್ನು ವಶಕ್ಕೆ ಪಡೆಯಲಾಗಿದೆ. ಎಂಇಎಸ್ ಮಹಾಮೇಳದ ಹಿನ್ನೆಲೆ ಬೆಳಗಾವಿ ನಗರದಲ್ಲಿ ಬಿಗಿ ಖಾಕಿ ಸರ್ಪಗಾವಲು ಹಾಕಲಾಗಿತ್ತು. ನಗರದ ಮೂರು ಮೈದಾನ, ಒಂದು ವೃತ್ತದಲ್ಲಿ ನಿಷೇಧಾಜ್ಞೆ ಜಾರಿ ಮಾಡಿ ಡಿಸಿಪಿ ರೋಹನ್ ಜಗದೀಶ ನೇತೃತ್ವದಲ್ಲಿ ಬೀಗಿ ಭದ್ರತೆ ಒದಗಿಸಲಾಗಿತ್ತು.