ವಿಜಯಪುರ: ಭೀಮಾ ತೀರದ ಕುಖ್ಯಾತ ಹಂತಕ ಚಂದಪ್ಪ ಹರಿಜನ ಸಹಚರ ಹಾಗೂ ಸೋದರ ಸಂಬಂಧಿಯಾದ ರೌಡಿ ಬಾಗಪ್ಪ ಹರಿಜನನನ್ನು ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಮಂಗಳವಾರ ರಾತ್ರಿ 8:50 ರ ಸುಮಾರಿಗೆ ವಿಜಯಪುರದ ರೇಡಿಯೋ ಕೇಂದ್ರದ ಬಳಿಯ ಮದಿನಾ ನಗರದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.
ವಿಜಯಪುರದ ಮದಿನಾ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದ ಹಲವು ಕೊಲೆ ಪ್ರಕರಣಗಳ ಆರೋಪಿ ಬಾಗಪ್ಪನು ರಾತ್ರಿ 8-50 ಸುಮಾರಿಗೆ ಮನೆಯಿಂದ ಹೊರಬರುತ್ತಿದ್ದಂತೆ ದುಷ್ಕರ್ಮಿಗಳು ಮಚ್ಚಿನಿಂದ ಹಲ್ಲೆ ನಡೆಸಿ ಹಣೆ, ಮುಖ, ತಲೆ, ಎದೆ ಸೇರಿದಂತೆ ವಿವಿಧ ಕಡೆಗಳಲ್ಲಿ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಬಾಗಪ್ಪನ ಒಂದು ಕೈಯನ್ನು ಸಹ ಕತ್ತರಿಸಲಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸ ವರಿಷ್ಠ ಲಕ್ಷ್ಮಣ ನಿಂಬರಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈಗ ಹಂತಕರ ಪತ್ತೆಗಾಗಿ ಎಎಸ್ಪಿ ರಾಮನಗೌಡ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿದೆ.
ಹಿಂದೆ ಸಹ ಬಾಗಪ್ಪ ಹರಿಜನ ಮೇಲೆ ಗುಂಡಿನ ದಾಳಿ ಮಾಡಿ ಕೊಲೆಗೆ ಯತ್ನಿಸಲಾಗಿತ್ತು. ಆದರೆ ಆಗ ಬಾಗಪ್ಪ ಅದೃಷ್ಟವಶಾತ್ ಬದುಕುಳಿದಿದ್ದ. ಆದರೆ ಈ ಬಾರಿ ಹಂತಕರು ಯೋಜಿತ ರೀತಿಯಲ್ಲಿ ದಾಳಿ ನಡೆಸಿ ಬಾಗಪ್ಪನನ್ನು ಕೊಂದು ಹಾಕಿದ್ದಾರೆ.
ಈ ಹಿಂದೆ 2023 ರಲ್ಲಿ ಕೋರ್ಟ ಆವರಣದಲ್ಲೇ ಬಾಗಪ್ಪ ಹರಿಜನನ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು. ಅಪರಿಚಿತ ವ್ಯಕ್ತಿಯೊಬ್ಬ ಐದು ಸುತ್ತು ಗುಂಡು ಹಾರಿಸಿದ್ದ, ಗುಂಡು ಬಾಗಪ್ಪನ ಎದೆ ಭಾಗಕ್ಕೆ ಹೊಕ್ಕಿತ್ತು. ಆತನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಗ ಈತ ಪ್ರಾಣಾಪಾಯದಿಂದ ಪಾರಾಗಿದ್ದ. ಆದರೆ, ಈಗ ಯೋಜಿತ ರೀತಿಯಲ್ಲಿ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಬಾಗಪ್ಪ ಹರಿಜನನ ಹತ್ಯೆ ಮಾಡಲಾಗಿದೆ.
ಬಾಗಪ್ಪ ಹರಿಜನ ಯಾರು..?
ಭೀಮಾ ತೀರದ ಕುಖ್ಯಾತಿಯಲ್ಲಿ ಬಾಗಪ್ಪ ಹರಿಜನ ಕೂಡ ಒಬ್ಬ. ಈ ಹಿಂದೆ ಭೀಮಾ ತೀರವನ್ನೇ ನಡುಗಿಸಿದ್ದ ಚಂದಪ್ಪ ಹರಿಜನನ ಬಲಗೈ ಬಂಟನಾಗಿದ್ದ ಈತ ಆತನ ಸೋದರ ಸಂಬಂಧಿ. 2000ರ ಮೇ ತಿಂಗಳಲ್ಲಿ ಚಂದಪ್ಪನ ಸಾವಿನ ಬಳಿಕ ಕುಟುಂಬದಲ್ಲಿ ಉಂಟಾಗಿದ್ದ ಆಸ್ತಿ ಗಲಾಟೆ ಪ್ರಕರಣದಲ್ಲಿ ಬಾಗಪ್ಪನು ಚಂದಪ್ಪನ ಸಹೋದರ ಬಸಪ್ಪ ಹರಿಜನ ಕೊಲೆ ಮಾಡಿದ ಆರೋಪ ಎದುರಿಸುತ್ತಿದ್ದ. ಆಲಮೇಲ ಪೊಲೀಸ್ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿತ್ತು.
ಇದಲ್ಲದೇ 2013ರಲ್ಲಿ ಗಾಂಧಿ ಚೌಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬ್ಯಾಡಗಿಹಾಳ ಗ್ರಾಮದ ಬಸ್ ಕಂಡಕ್ಟರ್ ಲಾಳಸಂಗಿ ಎಂಬುವರ ಕೊಲೆ ಪ್ರಕರಣದಲ್ಲಿ ಸಹ ಈತನ ವಿರುದ್ಧ ಪ್ರಕರಣ ದಾಖಲಾಗಿತ್ತು.