ಯಡಿಯೂರಪ್ಪ ಮಗನಾಗಿ ರೈತರ ಹೋರಾಟದಲ್ಲಿ ಬಾಗಿಯಾಗಿದ್ದೇನೆ: ವಿಜಯೇಂದ್ರ

A B Dharwadkar
ಯಡಿಯೂರಪ್ಪ ಮಗನಾಗಿ ರೈತರ ಹೋರಾಟದಲ್ಲಿ ಬಾಗಿಯಾಗಿದ್ದೇನೆ: ವಿಜಯೇಂದ್ರ

ಬೆಳಗಾವಿ: ಕಬ್ಬಿಗೆ ಬೆಂಬಲ ಬೆಲೆಯ ಬೇಡಿಕೆ ಹಿನ್ನೆಲೆ ಬೆಳಗಾವಿ ಜಿಲ್ಲೆಯಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ತಾವು “ಯಡಿಯೂರಪ್ಪನ ಮಗನಾಗಿ” ಭಾಗಿಯಾಗಲು ಬಂದಿದ್ದೇನೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

ಮಂಗಳವಾರ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಮೂಡಲಗಿ ತಾಲೂಕಿನ ಗುರ್ಲಾಪುರ ಗ್ರಾಮದಲ್ಲಿ ಕಳೆದ ಕೆಲವು ದಿನಗಳಿಂದ ಕಬ್ಬು ಬೆಳೆಗಾರರು ಹೋರಾಟ ನಡೆಸುತ್ತಿದ್ದಾರೆ. ಅವರ ಬೇಡಿಕೆ ನ್ಯಾಯಸಮ್ಮತವಾಗಿದೆ. ರಾಜ್ಯ ಸರ್ಕಾರ ಮುಂಚೂಣಿಯಲ್ಲಿ ಬಂದು ಸಮಸ್ಯೆ ಬಗೆಹರಿಸಬೇಕು. ಸರ್ಕಾರ ಸ್ಪಂದಿಸದಿದ್ದರೆ ವಿರೋಧ ಪಕ್ಷವಾಗಿ ಬೆಂಬಲ ನೀಡುವುದು ನಮ್ಮ ಕರ್ತವ್ಯ,” ಎಂದು ಹೇಳಿದರು.

“ರೈತರ ಹೋರಾಟದಲ್ಲಿ ಪಾಲ್ಗೊಳ್ಳಲು ನಾನು ಬಂದಿದ್ದೇನೆ. ಯಾರ ಕಾರ್ಖಾನೆಗಳಿವೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಸಕ್ಕರೆ ಕಾರ್ಖಾನೆ ಸಾಹುಕಾರರು ಹಾಗೂ ಅಧಿಕಾರಿಗಳು ಸೇರಿ ಚರ್ಚೆ ನಡೆಸಿ ಸಮಸ್ಯೆ ಪರಿಹರಿಸಬೇಕು,” ಎಂದು ಅವರು ಒತ್ತಾಯಿಸಿದರು.

2014ರಲ್ಲಿ ಅಧಿವೇಶನ ನಡೆಯುತ್ತಿದ್ದ ವೇಳೆ ಕಬ್ಬಿನ ದರದ ವಿಚಾರದಲ್ಲಿ ರೈತ ವಿಠ್ಠಲ್ ಅರಬಾವಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನೆನಪಿಸಿಕೊಂಡ ವಿಜಯೇಂದ್ರ, “ಆಗ ಯಡಿಯೂರಪ್ಪ ಅವರು ಹೋರಾಟ ನಡೆಸಿ ಅಂದಿನ ಮುಖ್ಯಮಂತ್ರಿ ಬಳಿ ಒತ್ತಾಯಿಸಿ ನ್ಯಾಯ ಒದಗಿಸಿದ್ದರು. ಇಂದು ರೈತರು ಮತ್ತೆ ಸಂಕಷ್ಟದಲ್ಲಿದ್ದಾರೆ. ಆದರೆ ರಾಜ್ಯ ಸರ್ಕಾರ ನಿರ್ಲಕ್ಷ್ಯ ವಹಿಸಿದೆ,” ಎಂದು ಆರೋಪಿಸಿದರು.

“ಅತಿವೃಷ್ಟಿ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ನಾನು ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದೆ. ಆದರೆ ಉಸ್ತುವಾರಿ ಸಚಿವರು, ಕಂದಾಯ ಹಾಗೂ ಕೃಷಿ ಸಚಿವರು ಉತ್ತರ ಕರ್ನಾಟಕ ಪ್ರವಾಸಕ್ಕೂ ಹೋಗಲಿಲ್ಲ. ರೈತರು ಇಂದಿಗೂ ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ಸರ್ಕಾರಕ್ಕೆ ಅವರ ಧ್ವನಿ ಕೇಳಿಸಿಕೊಳ್ಳುತ್ತಿಲ್ಲ,” ಎಂದು ಹೇಳಿದರು.

ರಾಜ್ಯದಲ್ಲಿ ಸಕ್ಕರೆ ಕಬ್ಬಿನ ಸಂಸ್ಕರಣೆಯಿಂದ ಸುಮಾರು ಆರು ಮಿಲಿಯನ್ ಟನ್ ಕಬ್ಬು ಅರಿಯಲಾಗುತ್ತಿದ್ದು, 50–60 ಸಾವಿರ ಕೋಟಿ ರೂ.ಗಳಷ್ಟು ಆದಾಯ ಸರ್ಕಾರಕ್ಕೆ ಬರುತ್ತದೆ. “ಆದರೂ ರೈತರ ಸಂಕಷ್ಟ ಕೇಳಲು ಸರ್ಕಾರ ಮುಂದಾಗಿಲ್ಲ,” ಎಂದು ವಿಜಯೇಂದ್ರ ಟೀಕಿಸಿದರು.

“ರಾಜ್ಯ ಸರ್ಕಾರದ ಒಳಗೇ ಕುರ್ಚಿ ರಾಜಕೀಯದ ಯುದ್ಧ ನಡೆಯುತ್ತಿದೆ. ಎಲ್ಲರ ಗಮನ ಬಿಹಾರ ವಿಧಾನಸಭೆ ಚುನಾವಣೆಯತ್ತ ವಾಲಿದೆ. ಅದರ ಬಳಿಕ ಸರ್ಕಾರದ ಅಂತರಂಗ ಸ್ಪಷ್ಟವಾಗುತ್ತದೆ,” ಎಂದು ಹೇಳಿದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್, ಗ್ರಾಮೀಣ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ್, ಮಾಜಿ ಬುಡಾ ಅಧ್ಯಕ್ಷ ಘೂಳಪ್ಪ ಹೊಸಮನಿ, ಪಕ್ಷದ ಮುಖಂಡ ಎಂ.ಬಿ. ಜೀರಲಿ ಮತ್ತಿತರರು ವಿಜಯೇಂದ್ರ ಅವರೊಂದಿಗೆ ಉಪಸ್ಥಿತರಿದ್ದರು.

ಬೆಳಗಾವಿಯಲ್ಲಿ ರೈತರ ಹೋರಾಟ ವಿಸ್ತಾರ

ಬೆಳಗಾವಿ ಜಿಲ್ಲೆಯಲ್ಲಿ ಕಬ್ಬಿಗೆ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ.
ರಾಯಭಾಗ, ಅಥಣಿ ಮತ್ತು ಮೂಡಲಗಿ ತಾಲ್ಲೂಕುಗಳಲ್ಲಿ ಪ್ರತಿಭಟನೆ ವ್ಯಾಪಕವಾಗಿ ಮುಂದುವರಿದಿದೆ. ರಾಯಭಾಗದ ಬಳಿ ಅಥಣಿ–ಗೋಕಾಕ ಸಂಪರ್ಕಿಸುವ ದರೂರ್ ಸೇತುವೆ ರೈತರಿಂದ ಬಂದ್ ಮಾಡಲ್ಪಟ್ಟಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.