ಬೆಳಗಾವಿ: ಬೆಳಗಾವಿಯ ರಾಣಿ ಚೆನ್ನಮ್ಮ ಕಿರು ಮೃಗಾಲಯದಲ್ಲಿ ಒಟ್ಟು 31 ಕೃಷ್ಣಮೃಗಗಳು ಮೃತಪಟ್ಟಿದ್ದು, ಇದು ಒಬ್ಬರಿಂದ ಒಬ್ಬರಿಗೆ ಹರಡುವ ರೋಗದಿಂದಾಗಿರಬಹುದು ಎಂದು ಆತಂಕ ವ್ಯಕ್ತವಾಗಿದೆ.ಇದು ಕೊರೊನಾ ಮಾದರಿಯ ರೋಗ ಆಗಿರಬಹುದು ಎಂದು ಅರಣ್ಯ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡದ ಅವರು, ಅರಣ್ಯ ಅಧಿಕಾರಿಗಳು ಈಗಾಗಲೇ ಕೃಷ್ಣಮೃಗಗಳ ಸಾವಿನ ಸ್ಥಳಕ್ಕೆ ಭೇಟಿ ನೀಡಿದ್ದು, ವರದಿ ಬರಬೇಕಿದೆ. ರೋಗ ಬಂದಿರಬಹುದು ಎಂಬ ಆತಂಕ ಇದೆ. ಇಂದು ಬೆಂಗಳೂರಿನ ಬನ್ನೇರುಘಟ್ಟದಿಂದ ನುರಿತ ವೈದ್ಯರು ಬಂದಿದ್ದಾರೆ. ವೈದ್ಯರು ವರದಿ ನೀಡಿದ ಬಳಿಕ ಸರ್ಕಾರ ಮತ್ತು ಜಿಲ್ಲಾಡಳಿತ ಸೂಕ್ತ ಕ್ರಮ ತೆಗೆದುಕೊಳ್ಳಲಿದೆ ಎಂದರು.
ಸದ್ಯ ಒಂದೇ ಕಡೆ ಮಾತ್ರ ಈ ಸಾವುಗಳು ಸಂಭವಿಸಿವೆ. ವರದಿ ಬಂದ ಬಳಿಕ ಜಿಲ್ಲಾಡಳಿತ ಮತ್ತು ಇಲಾಖೆ ವತಿಯಿಂದ ಮುಂದಿನ ಕ್ರಮಗಳನ್ನು ಕೈಗೊಳ್ಳುತ್ತೇವೆ. ಮೊನ್ನೆಯೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಇದೊಂದು ಹೊಸ ರೋಗ ಆಗಿದ್ದು, ಅದನ್ನು ಕಂಡುಹಿಡಿಯಲು ಕಷ್ಟವಾಗಬಹುದು ಎಂದು ತಿಳಿಸಿದರು.
ಅರಣ್ಯ ಇಲಾಖೆ ನಿಗಮದ ಅಧ್ಯಕ್ಷರೊಂದಿಗೆ ಕೃಷ್ಣಮೃಗಗಳ ಅಕಾಲಿಕ ಮರಣದ ಕುರಿತು ಈಗಾಗಲೇ ಚರ್ಚೆ ನಡೆಸಲಾಗಿದೆ. ಅಧ್ಯಕ್ಷರು ಬಂದ ಮೇಲೆ ಸಂಜೆ ಮೃಗಾಲಯಕ್ಕೆ ಭೇಟಿ ನೀಡುವುದಾಗಿ ಸಚಿವರು ಹೇಳಿದರು.

