ಚಿಕ್ಕಮಗಳೂರು: ಜಲಪಾತದ ಬಳಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಾಗ ಕಾಲು ಜಾರಿ ಬಿದ್ದು ಬಿ.ಇ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಸಮೀಪದ ಕಾಮೇನಹಳ್ಳಿ ಜಲಪಾತದ ಬಳಿ ನಡೆದಿದೆ.
ಮೃತನನ್ನ ವರುಣ್ ದೇಸಾಯಿ (19) ಎಂದು ಗುರುತಿಸಲಾಗಿದೆ. ಮೂಲತಃ ಬೆಳಗಾವಿ ಮೂಲದ ವರುಣ್ ಚಿಕ್ಕಮಗಳೂರು ನಗರದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೊದಲ ವರ್ಷದ ಬಿಇ ಓದುತ್ತಿದ್ದ. ಶುಕ್ರವಾರ ಸಂಜೆ ಐವರು ಸ್ನೇಹಿತರ ಜೊತೆ ಮೂರು ಬೈಕಿನಲ್ಲಿ ಕಾಮೇನಹಳ್ಳಿ ಜಲಪಾತದ ಬಳಿ ಹೋಗಿದ್ದ. ಈ ವೇಳೆ ಜಲಪಾತದ ಪ್ರದೇಶದ ಅರಿವಿಲ್ಲದೆ ಜಲಪಾತದ ಬಳಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಾಗ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾನೆ. ಅವನ ಮೃತದೇಹ ಶನಿವಾರ ಮುಂಜಾನೆ ದೊರೆತ್ತಿದೆ.

