ಬೆಳಗಾವಿ, ಡಿ. 31: ರಾಮತೀರ್ಥನಗರದ ಕಾರ್ಯಸಿದ್ದಿ ಆಂಜನೇಯಸ್ವಾಮಿ ದೇವಸ್ಥಾನದ 1 ನೇ ಹಂತ ಮತ್ತು ಪ್ರತೀಕ್ಷಾ ಹೋಟೆಲ್ ಹತ್ತಿರದ 2 ನೇ ಹಂತದಲ್ಲಿ ಎಲ್ಲ ಸಾರಿಗೆ ಬಸ್ಸುಗಳನ್ನು ವಿನಂತಿ ಮೇರೆಗೆ ಕಡ್ಡಾಯವಾಗಿ ನಿಲ್ಲಿಸಲೇಬೇಕೆಂದು ಇಲ್ಲಿನ ನಾಗರಿಕರು ಆಗ್ರಹಿಸಿದ್ದಾರೆ.
ಬುಧವಾರ ಇಲ್ಲಿನ ರಹವಾಸಿಗಳು ಸಾರಿಗೆ ಸಂಸ್ಥೆಯ ಅಧೀಕ್ಷಕಿ ವಿಜಯಲಕ್ಷ್ಮಿ ಅವರಿಗೆ ವಿನಂತಿ ನಿಲುಗಡೆ ಕೋರಿಕೆಯ ಮನವಿ ಸಲ್ಲಿಸಿ, ಈ ಬೇಡಿಕೆ ಮಾಡಿದರು.
2012 ರಲ್ಲಿ ಸಂಸದ ಸುರೇಶ ಅಂಗಡಿ ಅವರ ಸೂಚನೆ ಮೇರೆಗೆ ಜನರ ಅನುಕೂಲಕ್ಕೆ ಸಾರಿಗೆ ಸಂಸ್ಥೆ 1ನೇ ಹಂತ ಮತ್ತು 2ನೇ ಹಂತಗಳಲ್ಲಿ ಕಡ್ಡಾಯವಾಗಿ ಈ ಮಾರ್ಗದಲ್ಲಿ ಸಂಚರಿಸುವ ಎಲ್ಲ ವೇಗದೂತ, ತಡೆ ರಹಿತ ಮತ್ತು ಸಾಮಾನ್ಯ ಬಸ್ಸುಗಳಿಗೆ ನಿಲುಗಡೆಗೆ ಅಧಿಕೃತ ಆದೇಶ ಮಾಡಲಾಗಿತ್ತು. ಸಾರಿಗೆ ಸಿಬ್ಬಂದಿ ಮಾತ್ರ ಈ ಆದೇಶಕ್ಕೆ ಕವಡೆ ಕಿಮ್ಮತ್ತು ಕೊಡದ ಕಾರಣ ಸುಮಾರು ವರ್ಷಗಳಿಂದ ಪ್ರಯಾಣಿಕರು ಮತ್ತು ಸಿಬ್ಬಂದಿಗಳ ನಡುವೆ ಸಂಘರ್ಷಗಳು ಜರುಗುತ್ತಲೇ ಇದ್ದು, ಇದಕ್ಕೆ ಇತಿಶ್ರೀ ಹಾಡಬೇಕು. ಹಿರಿಯ ಅಧಿಕಾರಿಗಳಿಗೆ ಈ ಕುರಿತು ಸೂಕ್ತ ಕ್ರಮಕ್ಕೆ ಆಗ್ರಹಿಸಿ ಹತ್ತಾರು ಬಾರಿ ಮನವಿಗಳನ್ನು ಕೊಟ್ಟಿದ್ದು, ಗಮನಾರ್ಹವಾಗಿದೆ. ಸೂಕ್ತ ಕ್ರಮ ಜರುಗಿಸದಿದ್ದರೆ ಬಸ್ ತಡೆದು ಪ್ರತಿಭಟಿಸುತ್ತೇವೆ ಎಂದು ಮಾಜಿ ಮೇಯರ್ ಎನ್ ಬಿ ನಿರ್ವಾಣಿ ಈ ಸಂದರ್ಭದಲ್ಲಿ ಎಚ್ಚರಿಸಿದರು.
ಮನವಿ ಸ್ವೀಕರಿಸಿದ ಅಧೀಕ್ಷಕಿ ವಿಜಯಲಕ್ಶ್ಮಿ ಅವರು, ವಿಷಯವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆಯಾಗದಂತೆ ಕ್ರಮ ವಹಿಸಲಾಗುವದು ಎಂದರು.
ಆನಂದ ಕರಲಿಂಗನ್ನವರ, ಸಿ.ಎಸ್. ಬಿಡ್ನಾಳ, ಸುರೇಶ ಉರಬಿನಹಟ್ಟಿ, ಮಂಜುನಾಥ ಪಾಟೀಲ, ಎನ್. ಬಿ.ಹಣ್ಣಿಕೇರಿ, ಶಿವಾನಂದ ಮಠಪತಿ, ಮಹಾದೇವ ಕೆಂಪಿಗೌಡ್ರ, ಡಿ.ಕೆ. ಭೂತಿ, ಈರಣ್ಣ ಅಂಗಡಿ, ಶಂಕರಗೌಡ ಪಾಟೀಲ, ವಿ.ಎ. ಮೇಸ್ತ್ರಿ, ಅಡಿವೆಪ್ಪ ವಠಾರ, ಶಿವಾನಂದ ಗಡಾದ, ಈರಗೌಡ ಪಾಟೀಲ, ಬಸವರಾಜ ಮಾದಗೌಡ ಮುಂತಾದವರು ಉಪಸ್ಥಿತರಿದ್ದರು.



