ಬೆಳಗಾವಿ:
ಬಸನಗೌಡ ಪಾಟೀಲ ಯತ್ನಾಳರನ್ನು ಮತ್ತೆ ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಗೋಕಾಕ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಅವರು ಬಿಜೆಪಿ ವರಿಷ್ಠರನ್ನು ಮತ್ತೊಮ್ಮೆ ಒತ್ತಾಯಿಸಿದ್ದಾರೆ. ಪತ್ರಕರ್ತರ ಜೊತೆ ಮಾತನಾಡಿದ ಅವರು, ಬಸನಗೌಡ ಪಾಟೀಲ ಯತ್ನಾಳ ಅವರು ಯಾವ ತಪ್ಪು ಮಾಡಿದ್ದರೂ ಅದನ್ನು ಮನ್ನಿಸಿ ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಬೇಕು. ಇದರಿಂದ ಬಿಜೆಪಿಗೆ ಬಹಳ ದೊಡ್ಡ ಪ್ರಮಾಣದಲ್ಲಿ ಅನುಕೂಲವಾಗುತ್ತದೆ ಎಂದು ಹೇಳಿದರು.
ವಿಜಯೇಂದ್ರ–ಯತ್ನಾಳ ವಿವಾದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಜಾರಕಿಹೊಳಿ
ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಪಕ್ಷದಿಂದ ಉಚ್ಚಾಟನೆಯಾದಾಗಿನಿಂದ ಅವರನ್ನು ಮರಳಿ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಹೇಳಿದ್ದೆ. ಯತ್ನಾಳ ಉಚ್ಚಾಟನೆಯಾಗಿ ಎಂಟು ತಿಂಗಳು ಕಳೆದಿವೆ, ಅವರು ರಾಜ್ಯ ರಾಜಕಾರಣದಲ್ಲಿ ಬೆಳೆಯುತ್ತಿದ್ದಾರೆ. ವಿಜಯೇಂದ್ರಗೆ ಹಿನ್ನಡೆಯಾಗುತ್ತಿದೆ. ಹೈಕಮಾಂಡ್ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.
ಬಿಜೆಪಿ ಒಳ ರಾಜಕಾರಣದ ಬಗ್ಗೆ ಮಾತನಾಡಿದ ಅವರು ಯಡಿಯೂರಪ್ಪರ ವಿರುದ್ಧ ನಾವು ಎಂದಿಗೂ ಮಾತನಾಡಿಲ್ಲ. ವಿಜಯೇಂದ್ರನ ನಡವಳಿಕೆಯಿಂದಲೇ ಬಿಜೆಪಿ ಹಾಳಾಗುತ್ತಿದೆ, ಇದು ನಮಗೂ ನೋವಾಗುತ್ತಿದೆ,” ಎಂದರು.
ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ
ಕಬ್ಬಿನ ಬೆಂಬಲ ಬೆಲೆ ಕುರಿತು ರೈತರು ನಡೆಸುತ್ತಿರುವ ಹೋರಾಟಕ್ಕೆ ನಾನು ಬೆಂಬಲಿಸುತ್ತೇನೆ. ಸರಕಾರ ತ್ವರಿತವಾಗಿ ಬೆಂಬಲ ಬೆಲೆ ಘೋಷಿಸಬೇಕು ಎಂದರು.
2028ರ ವಿಧಾನಸಭೆ ಚುನಾವಣೆಯಲ್ಲಿ ಅಥಣಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿಯನ್ನು ಸೋಲಿಸಿಯೇ ಸಿದ್ದವೆಂದು ಮಾಜಿ ಸಚಿವ, ಗೋಕಾಕ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಶಪಥ ಮಾಡಿರುವುದಾಗಿ ತಿಳಿಸಿದರು.
“ಅಥಣಿ ಸಹಕಾರ ಕ್ಷೇತ್ರದಲ್ಲಿ ಸೋಲು ಆಗುವುದು ಮೊದಲೇ ಗೊತ್ತಿತ್ತು. ಕೃಷ್ಣಾ ಸಹಕಾರ ಕ್ಷೇತ್ರದಲ್ಲಿ ಶಾಸಕ ಸವದಿ 18 ಸಾವಿರ ಮತಗಳನ್ನು ಐದು ಸಾವಿರಕ್ಕೆ ತಗ್ಗಿಸಿದ್ದಾರೆ. ಆದರೆ ಅದರ ಬಗ್ಗೆ ಯಾರೂ ಪ್ರಶ್ನೆ ಮಾಡುವುದಿಲ್ಲ,” ಎಂದರು.
ಬಿಜೆಪಿ ಮಾಜಿ ಸಂಸದ ರಮೇಶ್ ಕತ್ತಿ ನನ್ನ ಆತ್ಮೀಯರು, ನಮ್ಮ ನಡುವೆ ವೈಷಮ್ಯ ಇಲ್ಲ. ಆದರೆ ವಾಲ್ಮೀಕಿ ಸಮಾಜದ ಕುರಿತು ಮಾತನಾಡಿದ್ದಕ್ಕೆ ನನಗೆ ಬೇಸರವಾಯಿತು. ರಮೇಶ್ ಕತ್ತಿ ಅವರ ಮಾತಿನ ಶೈಲಿ ಬದಲಾಯಿಸಿಕೊಳ್ಳಬೇಕು, ಇಲ್ಲದಿದ್ದರೆ ರಾಜಕೀಯ ಜೀವನದಲ್ಲಿ ಹೊಡೆತ ಎದುರಾಗಬಹುದು, ಎಂದರು.
ಕಾಂಗ್ರೆಸ್ ಕುರಿತು ನವೆಂಬರ್ ಕ್ರಾಂತಿ ಕುರಿತು ನಮ್ಮ ಪಕ್ಷದವರು ಯಾಕೆ ಚರ್ಚೆ ಮಾಡುತ್ತಿದ್ದಾರೆ ಗೊತ್ತಿಲ್ಲ. ಡಿ.ಕೆ. ಶಿವಕುಮಾರ್ ಸಿಎಂ ಆಗಲಿ ಅಥವಾ ಸಿದ್ದರಾಮಯ್ಯ ಮುಂದುವರಿಯಲಿ — ನಮಗೆ ಅವರೊಂದಿಗೆ ಸಂಬಂಧವಿಲ್ಲ. ನಾವು ವಿರೋಧ ಪಕ್ಷದ ಕೆಲಸ ಮಾಡಿದರೆ ಸಾಕು ಎಂದು ಹೇಳಿದರು.

