ಪತ್ರಕರ್ತರು ಜವಾಬ್ದಾರಿಯಿಂದ ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸಬೇಕು : ರಾಷ್ಟ್ರೀಯ ಪತ್ರಕರ್ತರ ಸಮ್ಮೇಳನದಲ್ಲಿ ಕರೆ

A B Dharwadkar
ಪತ್ರಕರ್ತರು ಜವಾಬ್ದಾರಿಯಿಂದ ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸಬೇಕು : ರಾಷ್ಟ್ರೀಯ ಪತ್ರಕರ್ತರ ಸಮ್ಮೇಳನದಲ್ಲಿ ಕರೆ

ಬಳ್ಳಾರಿ, ಫೆ. 20 : ಪತ್ರಿಕಾರಂಗದಲ್ಲಿ ಹೊಸ ಯೋಜನೆಗಳನ್ನು ಅನುಷ್ಠಾನಗೊಳಿಸುವುದು, ಹೊಸ ವಿಷಯಗಳು ಹಾಗೂ ಜ್ಞಾನವನ್ನು ಅಳವಡಿಸಿಕೊಳ್ಳುವುದು ಕಾಲದ ಅಗತ್ಯವಾಗಿದ್ದು, ದೇಶದ ಅಭಿವೃದ್ಧಿ, ಆಡಳಿತದ ಪಾರದರ್ಶಕತೆ ಮತ್ತು ಸಮಾಜದ ಸುವ್ಯವಸ್ಥೆಗೆ ಪತ್ರಕರ್ತರು ಪ್ರಮುಖ ಪಾತ್ರವಹಿಸಬೇಕು ಎಂದು ಗದುಗಿನ ಶ್ರೀ ತೊಂಟದಾರ್ಯ ಡಂಬಳ ಮಠದ ಶ್ರೀ ಸಿದ್ದರಾಮ ಮಹಾಸ್ವಾಮಿಗಳು ಹೇಳಿದರು.

ನಗರದ ನಕ್ಷತ್ರ ಹೋಟೆಲ್‌ನಲ್ಲಿ ಇಂಡಿಯನ್ ಜರ್ನಲಿಸ್ಟ್ ಯೂನಿಯನ್, ಕರ್ನಾಟಕ ಪತ್ರಕರ್ತರ ಸಂಘ ಹಾಗೂ ಬಳ್ಳಾರಿ ಜಿಲ್ಲಾ ಪತ್ರಕರ್ತರ ಸಂಘದ ಸಂಯುಕ್ತ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಪತ್ರಕರ್ತರ ಸಮ್ಮೇಳನದಲ್ಲಿ ಅವರು ಮಾತನಾಡಿದರು.

Screenshot

ಪತ್ರಿಕಾರಂಗ ಇಂದು ಮುದ್ರಣ ಮಾಧ್ಯಮಕ್ಕೆ ಸೀಮಿತವಾಗದೆ ವಿದ್ಯುನ್ಮಾನ ಮಾಧ್ಯಮ, ಯೂಟ್ಯೂಬ್, ಸಾಮಾಜಿಕ ಜಾಲತಾಣಗಳ ಮೂಲಕ ವಿಸ್ತರಿಸಿದೆ. ಈ ಹಿನ್ನೆಲೆಯಲ್ಲಿ ಪತ್ರಕರ್ತರು ಸಮಗ್ರ ಮಾಹಿತಿ ಸಂಗ್ರಹಿಸಿ, ಪರಿಶೀಲಿಸಿ, ತಿದ್ದಿ ಜನರಿಗೆ ತಲುಪಿಸುವ ಜವಾಬ್ದಾರಿ ಹೊಂದಿರಬೇಕು ಎಂದು ತಿಳಿಸಿದರು. ಪತ್ರಕರ್ತರು ಸಾಮಾಜಿಕ ಜವಾಬ್ದಾರಿಯೊಂದಿಗೆ ಕೆಲಸ ಮಾಡಿ ಸತ್ಯವನ್ನು ಹೇಳಬೇಕು, ಆದರೆ ಸಮಾಜದಲ್ಲಿ ಅಶಾಂತಿ ಉಂಟುಮಾಡುವ ರೀತಿಯ ವರದಿಗಳಿಂದ ದೂರವಿರಬೇಕು ಎಂದು ಸಲಹೆ ನೀಡಿದರು.

ದೇಶದ ವಿವಿಧ ಭಾಗಗಳಿಂದ ಪತ್ರಕರ್ತರು ಒಂದೇ ವೇದಿಕೆಯಲ್ಲಿ ಸೇರಿ ಭವಿಷ್ಯದ ದಿಕ್ಕು ಕುರಿತು ಚರ್ಚಿಸುವುದು ಉತ್ತಮ ಬೆಳವಣಿಗೆಯಾಗಿದ್ದು, ಇದು ಸಂಘಟನೆ ಮತ್ತು ವೃತ್ತಿಪರ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಹೇಳಿದರು.

ಪತ್ರಕರ್ತರು ಸಮಾಜದ ಕಣ್ಣು ಮತ್ತು ಕಿವಿ : ಶ್ರೀರಾಮುಲು

Screenshot

ಮಾಜಿ ಸಚಿವ ಹಾಗೂ ಮಾಜಿ ಸಂಸದ ಬಿ. ಶ್ರೀರಾಮುಲು ಮಾತನಾಡಿ, ದೇಶದ ಭದ್ರತೆ ಕಾಯುವ ಸೈನಿಕರು ಹೇಗೆ ಮುಖ್ಯವೋ, ಸಮಾಜದ ಮಾಹಿತಿಯನ್ನು ಜನರಿಗೆ ತಲುಪಿಸುವ ಪತ್ರಕರ್ತರು ಕೂಡ ಅಷ್ಟೇ ಮುಖ್ಯ ಎಂದು ಹೇಳಿದರು. ವಿಜಯನಗರ ಕಾಲದಲ್ಲೇ ಧೂತರು ಎಂಬ ರೂಪದಲ್ಲಿ ಮಾಹಿತಿ ಸಾಗಾಣಿಕೆ ಕಾರ್ಯ ನಡೆಯುತ್ತಿತ್ತು. ಆ ಪರಂಪರೆ ಇಂದು ಆಧುನಿಕ ತಂತ್ರಜ್ಞಾನ ಮೂಲಕ ಮತ್ತಷ್ಟು ವಿಸ್ತರಿಸಿದೆ ಎಂದು ತಿಳಿಸಿದರು.

ಯುದ್ಧ, ಗಲಭೆ ಮತ್ತು ಸಂಕಷ್ಟದ ಸಂದರ್ಭಗಳಲ್ಲಿ ಜೀವಪಣಕ್ಕಿಟ್ಟು ವರದಿ ಮಾಡುವ ಪತ್ರಕರ್ತರ ಸೇವೆ ಶ್ಲಾಘನೀಯವಾಗಿದೆ. ಅನೇಕರು ಪ್ರಾಣತ್ಯಾಗವನ್ನೂ ಮಾಡಿದ್ದು, ಪತ್ರಕರ್ತರ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರಗಳು ಕಾಳಜಿ ವಹಿಸಬೇಕು ಎಂದು ಹೇಳಿದರು.

ವಸ್ತುನಿಷ್ಠ ವರದಿಗೆ ಒತ್ತು ನೀಡಬೇಕು : ಅನ್ನಪೂರ್ಣ ತುಕಾರಾಂ

ಸಂಡೂರು ಕ್ಷೇತ್ರದ ಶಾಸಕಿ ಅನ್ನಪೂರ್ಣ ತುಕಾರಾಂ ಮಾತನಾಡಿ, ಪತ್ರಿಕಾರಂಗ ಸಮಾಜಕ್ಕೆ ಮಾಹಿತಿ, ಶಿಕ್ಷಣ ಹಾಗೂ ಜಾಗೃತಿ ಮೂಡಿಸುವ ಮಹತ್ವದ ಅಂಗವಾಗಿದೆ ಎಂದರು. ಸುದ್ದಿ ಪ್ರಸಾರದಲ್ಲಿ ವೇಗ ಹೆಚ್ಚಾದರೂ, ನಿಖರತೆ ಮತ್ತು ವಸ್ತುನಿಷ್ಠತೆ ಕಳೆದುಕೊಳ್ಳಬಾರದು. ಚಾನಲ್‌ಗಳ ರೇಟಿಂಗ್‌ಗಾಗಿ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡುವ ಪ್ರವೃತ್ತಿ ತಪ್ಪಿಸಬೇಕು ಎಂದು ಹೇಳಿದರು.

ಆಡಳಿತದ ತಪ್ಪು–ಒಪ್ಪುಗಳನ್ನು ಜನರಿಗೆ ತಲುಪಿಸಿ, ಸಾರ್ವಜನಿಕ ಸಮಸ್ಯೆಗಳ ಪರಿಹಾರಕ್ಕೆ ನೆರವಾಗುವುದು ಪತ್ರಕರ್ತರ ಪ್ರಮುಖ ಕರ್ತವ್ಯವಾಗಿದೆ. ಮಹಿಳೆಯರ ಗೌರವ ಮತ್ತು ಮರ್ಯಾದೆಗೆ ಧಕ್ಕೆಯಾಗದಂತೆ ವರದಿ ಮಾಡುವ ಜವಾಬ್ದಾರಿಯೂ ಇದೆ ಎಂದು ಹೇಳಿದರು. ಪತ್ರಕರ್ತರ ಕುಟುಂಬಗಳಿಗೆ ರಕ್ಷಣೆ, ಆರೋಗ್ಯ ವಿಮೆ, ಶಿಕ್ಷಣ ಮತ್ತು ಪಿಂಚಣಿ ಸೌಲಭ್ಯ ನೀಡುವ ದಿಶೆಯಲ್ಲಿ ಸರ್ಕಾರಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪತ್ರಕರ್ತರ ಸಮಸ್ಯೆಗಳು ಇನ್ನೂ ಉಳಿದಿವೆ : ಕೆ.ಬಿ. ಪಂಡಿತ್

ಇಂಡಿಯನ್ ಜರ್ನಲಿಸ್ಟ್ ಯೂನಿಯನ್ ಅಧ್ಯಕ್ಷ ಕೆ.ಬಿ. ಪಂಡಿತ್ ಮಾತನಾಡಿ, ದೇಶದಾದ್ಯಂತ ಪತ್ರಕರ್ತರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಸಂಘಟನೆಗಳು ಅವುಗಳ ಪರಿಹಾರಕ್ಕಾಗಿ ಪ್ರಯತ್ನಿಸುತ್ತಿವೆ. ಕೆಲವು ಸಮಸ್ಯೆಗಳು ಪರಿಹಾರವಾಗಿದ್ದರೂ ಇನ್ನೂ ಬಹುಪಾಲು ಸಮಸ್ಯೆಗಳು ಉಳಿದಿವೆ ಎಂದು ಹೇಳಿದರು.

ಕರ್ನಾಟಕ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಮುರುಗೇಶ ಶಿವಪೂಜಿ ಹಾಗೂ ಬಳ್ಳಾರಿ ಜಿಲ್ಲಾ ಅಧ್ಯಕ್ಷ ಯಾಳ್ಪಿ ಭಾಷಾ ಅವರ ನೇತೃತ್ವದಲ್ಲಿ ಕಾರ್ಯಕ್ರಮದ ಆಯೋಜನೆ ಉತ್ತಮವಾಗಿ ನಡೆದಿದ್ದು, ಸಂಘದ ಬೆಳವಣಿಗೆಗೆ ರಾಜ್ಯದ ಪ್ರತಿನಿಧಿಗಳು ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.

ವಿಮೆ ಮತ್ತು ಕಲ್ಯಾಣ ಯೋಜನೆಗಳ ಮಾಹಿತಿ

Screenshot

ಕರ್ನಾಟಕ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಹಾಗೂ ರಾಷ್ಟ್ರೀಯ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಮುರುಗೇಶ ಶಿವಪೂಜಿ ಮಾತನಾಡಿ, ಸಂಘವು ಆರಂಭದಲ್ಲಿ ಸದಸ್ಯರಿಗೆ ಒಂದು ಲಕ್ಷ ರೂಪಾಯಿ ವಿಮೆ ಯೋಜನೆ ಜಾರಿಗೆ ತಂದಿದ್ದು, ಈಗ ನಾಲ್ಕು ಲಕ್ಷ ರೂಪಾಯಿ ವಿಮೆ ಹಾಗೂ ಚಿಕಿತ್ಸೆಗೆ ಸುಮಾರು 80 ಸಾವಿರ ರೂಪಾಯಿವರೆಗೆ ಧನಸಹಾಯ ನೀಡಲಾಗುತ್ತಿದೆ ಎಂದು ತಿಳಿಸಿದರು.

ಸಂಘದ ಗೌರವಾಧ್ಯಕ್ಷರಾಗಿ ಶ್ರೀ ಸಿದ್ದರಾಮ ಮಹಾಸ್ವಾಮಿಗಳ ಮಾರ್ಗದರ್ಶನ ದೊರೆಯುತ್ತಿದ್ದು, ಟ್ರಸ್ಟ್ ಸ್ಥಾಪನೆ ಮೂಲಕ ಇನ್ನಷ್ಟು ಕಲ್ಯಾಣಕಾರಿ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ ಎಂದರು.

ಇತರೆ ರಾಜ್ಯಗಳ ಪ್ರತಿನಿಧಿಗಳ ಅಭಿಪ್ರಾಯ

ಬಿಹಾರ ರಾಜ್ಯದ ಮಾಜಿ ಸದಸ್ಯ ಅನಿಲ್ ಹೆಗಡೆ ಸೇರಿದಂತೆ ವಿವಿಧ ರಾಜ್ಯಗಳ ಅಧ್ಯಕ್ಷರು ಪತ್ರಿಕಾರಂಗದ ಬೆಳವಣಿಗೆ, ಸಂಘಟನೆಯ ಬಲವರ್ಧನೆ ಹಾಗೂ ಪತ್ರಕರ್ತರ ಸಮಸ್ಯೆಗಳ ಪರಿಹಾರ ಕ್ರಮಗಳ ಕುರಿತು ಮಾತನಾಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ಪತ್ರಕರ್ತರ ಸಂಘದ ವೆಬ್‌ಸೈಟ್ ಉದ್ಘಾಟನೆ ನೆರವೇರಿತು.

ಕಾರ್ಯಕ್ರಮದಲ್ಲಿ ಗೋವಾ ರಾಜ್ಯದ ವಾರ್ತಾ ಮತ್ತು ಪ್ರಚಾರ ಇಲಾಖೆಯ ಆಯುಕ್ತ ಕಿರಣ ಮನನಕರ, ರಾಜ್ಯ ಸಂಘದ ಉಪಾಧ್ಯಕ್ಷರು, ಕೋಶಾಧಿಕಾರಿಗಳು, ಪ್ರಧಾನ ಕಾರ್ಯದರ್ಶಿಗಳು, ವಿವಿಧ ಜಿಲ್ಲೆಗಳ ಅಧ್ಯಕ್ಷರು, ರಾಷ್ಟ್ರೀಯ ಪತ್ರಕರ್ತರ ಸಂಘದ ಪದಾಧಿಕಾರಿಗಳು ಹಾಗೂ ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಪತ್ರಕರ್ತರ ಪ್ರತಿನಿಧಿಗಳು ಭಾಗವಹಿಸಿದ್ದರು.

 

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.