ಹೊಸದಿಲ್ಲಿ, ಮೇ 4 : ಕೇರಳ ವಿಧಾನಸಭಾ ಚುನಾವಣೆಯಲ್ಲಿ ಸಿಪಿಎಂ ನೇತೃತ್ವದ ಎಡ ಪ್ರಜಾಸತ್ತಾತ್ಮಕ ರಂಗ ಸೋಲನುಭವಿಸಿರುವುದರಿಂದ, ಸುಮಾರು 50 ವರ್ಷಗಳ ಬಳಿಕ ಭಾರತದಲ್ಲಿ ಯಾವುದೇ ಎಡಪಂಥೀಯ ಸರಕಾರ ಉಳಿದಿಲ್ಲ.
ಪಿಣರಾಯಿ ವಿಜಯನ್ ನೇತೃತ್ವದ ಎಲ್ಡಿಎಫ್ 2016ರಲ್ಲಿ ಕೇರಳದಲ್ಲಿ ಅಧಿಕಾರಕ್ಕೆ ಬಂದಿದ್ದು, ಅದು ದೇಶದಲ್ಲಿದ್ದ ಕೊನೆಯ ಕಮ್ಯುನಿಸ್ಟ್ ಸರಕಾರವಾಗಿತ್ತು. ಆದರೆ 2026ರ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅಧಿಕಾರಕ್ಕೆ ಮರಳಲು ಸಜ್ಜಾಗಿದ್ದು, ಎಡರಂಗವು ತನ್ನ ಕೊನೆಯ ಅಧಿಕಾರದ ನೆಲೆಯನ್ನು ಕಳೆದುಕೊಂಡಿದೆ.
ಇದರಿಂದ 1997ರ ನಂತರ ಇದೇ ಮೊದಲ ಬಾರಿಗೆ ದೇಶದಲ್ಲಿ ಕಮ್ಯುನಿಸ್ಟ್ ಪಕ್ಷದ ಮುಖ್ಯಮಂತ್ರಿ ಇರುವುದಿಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ.
ಪಶ್ಚಿಮ ಬಂಗಾಳದಲ್ಲಿ 1977ರಿಂದ 2011ರವರೆಗೆ 34 ವರ್ಷಗಳ ಕಾಲ ಎಡಪಂಥೀಯ ಆಡಳಿತ ಮುಂದುವರಿದಿತ್ತು. 2011ರಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಅಧಿಕಾರಕ್ಕೆ ಬಂದ ಬಳಿಕ ಅದಕ್ಕೆ ಅಂತ್ಯವಾಯಿತು. ತ್ರಿಪುರಾದಲ್ಲಿಯೂ 1993ರಿಂದ 2018ರವರೆಗೆ ಎಡರಂಗ ಆಡಳಿತ ನಡೆಸಿದ್ದು, ಬಳಿಕ ಬಿಜೆಪಿ ಅದನ್ನು ಸೋಲಿಸಿತ್ತು.
2009ರ ಲೋಕಸಭಾ ಚುನಾವಣೆಯ ನಂತರದಿಂದ ಎಡರಂಗವು ಭಾರತೀಯ ರಾಜಕೀಯದಲ್ಲಿ ತನ್ನ ನೆಲೆಯನ್ನು ಕ್ರಮೇಣ ಕಳೆದುಕೊಳ್ಳುತ್ತ ಬಂದಿದೆ.