ePaper
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಬಸವ ಜಯಂತಿ ಸಂಭ್ರಮ: ಬೃಹತ್ ಬೈಕ್ ರ್ಯಾಲಿಗೆ ಬೆಳಗಾವಿ ಸಜ್ಜು

ಬೆಳಗಾವಿ, ಏಪ್ರಿಲ್ 16 : ಬಸವ ಜಯಂತಿ ಉತ್ಸವದ ಅಂಗವಾಗಿ ಸಮಾನತೆ ಸಂದೇಶವನ್ನು ಸಮಾಜಕ್ಕೆ ತಲುಪಿಸುವ ಉದ್ದೇಶದಿಂದ ಏಪ್ರಿಲ್ 19ರಂದು ರವಿವಾರ ಬೆಳಗಾವಿ ಮಹಾನಗರದಲ್ಲಿ ಬೃಹತ್ ಬೈಕ್ ರ್ಯಾಲಿ ಆಯೋಜಿಸಲಾಗಿದೆ ಎಂದು ಬಸವ ಜಯಂತಿ ಉತ್ಸವ–2026 ಸಮಿತಿಯ ಸಂಚಾಲಕ ಬಸವರಾಜ ರೊಟ್ಟಿ ತಿಳಿಸಿದರು.

ಗುರುವಾರ ನಡೆದ ಪತ್ರಿಕಾ ಪರಿಷತ್ತಿನಲ್ಲಿ ಮಾತನಾಡಿದ ಅವರು, ಬೆಳಿಗ್ಗೆ 8 ಗಂಟೆಗೆ ಶಹಾಪೂರ ಗೋವಾವೇಸ ಬಸವೇಶ್ವರ ಸರ್ಕಲ್‌ನಿಂದ ಈ ರ್ಯಾಲಿ ಪ್ರಾರಂಭವಾಗಲಿದ್ದು, ಸುಮಾರು 2 ಸಾವಿರಕ್ಕೂ ಅಧಿಕ ಬೈಕ್‌ಗಳು ಹಾಗೂ ಕಾರುಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದು ಹೇಳಿದರು.

ಬಸವಣ್ಣನವರು ಸಾರಿದ ಸಮಾನತೆ, ಸಹಬಾಳ್ವೆ ಮತ್ತು ಮಾನವೀಯ ಮೌಲ್ಯಗಳನ್ನು ಜನರಲ್ಲಿ ಬಿತ್ತರಿಸುವ ಉದ್ದೇಶದಿಂದ ಈ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದ್ದು, ಸಮಾಜದ ಎಲ್ಲ ವರ್ಗಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಈ ರ್ಯಾಲಿಗೆ ನಾಗನೂರು ರುದ್ರಾಕ್ಷಿ ಮಠದ ಪೀಠಾಧಿಕಾರಿ ಡಾ. ಅಲ್ಲಮಪ್ರಭು ಮಹಸ್ವಾಮೀಜಿಯವರು, ಬೆಳಗಾವಿಯ ಸಂಸದ ಜಗದೀಶ ಶೆಟ್ಟರ್ ಹಾಗೂ ಕೆಎಲ್ಇ ಸಂಸ್ಥೆಯ ಗೌರವ ಕಾರ್ಯಧ್ಯಕ್ಷ ಡಾ. ಪ್ರಭಾಕರ ಕೋರೆ ಚಾಲನೆ ನೀಡಲಿದ್ದಾರೆ. ಬೆಳಗಾವಿಯ ಮಹಾಪೌರ ಶ್ರೀಮತಿ ಪ್ರೀತಿ ಕಾಮಕರ, ಉಪಮಹಾಪೌರ ಹನುಮಂತ ಕೊಂಗಾಲಿ, ಶಾಸಕರಾದ ರಾಜು ಸೇಠ, ಅಭಯ ಪಾಟೀಲ ಸೇರಿದಂತೆ ಅನೇಕ ಜನಪ್ರತಿನಿಧಿಗಳು ಹಾಗೂ ನಗರ ಸೇವಕರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಬೈಕ್ ರ್ಯಾಲಿ ಬಸವೇಶ್ವರ ಸರ್ಕಲ್‌ನಿಂದ ಆರಂಭವಾಗಿ ಟಿಳಕವಾಡಿ, ಅನಗೋಳ, ವಡಗಾವ, ಖಾಸಬಾಗ, ಶಹಾಪೂರ, ಕಪಿಲೇಶ್ವರ ರಸ್ತೆ, ಕರ್ನಾಟಕ ಚೌಕ, ರವಿವಾರಪೇಟೆ, ಖಡೆ ಬಜಾರ, ಮಾರುತಿ ಗಲ್ಲಿ, ರಾಮದೇವ ಗಲ್ಲಿ, ಕಾಲೇಜು ರಸ್ತೆ, ಚೆನ್ನಮ್ಮ ಸರ್ಕಲ್, ಸಿವಿಲ್ ಆಸ್ಪತ್ರೆ, ಆರ್.ಎನ್. ಶೆಟ್ಟಿ ಪಾಲಿಟೆಕ್ನಿಕ, ಕಾಲೇಜು ರಸ್ತೆ, ಲಿಂಗಾಯಿತ ಭವನ, ಶ್ರೀನಗರ ಗಾರ್ಡನ್, ರಾಣಿ ಚೆನ್ನಮ್ಮ ಸೊಸೈಟಿ, ಸಾಯಿ ಮಂದಿರ, ಬಾಲ ಭವನ, ಲೌಡೇಲ್ ಶಾಲೆ, ಮಹಾಂತೇಶ ನಗರ ಬಸ್ ನಿಲ್ದಾಣ, ಪಿ ಮತ್ತು ಟಿ ಕ್ವಾಟರ್ಸ್, ಸಿದ್ನಾಳ ಕ್ರಾಸ್, ಕೆಎಂಎಫ್ ಡೈರಿ, ದತ್ತ ಮಂದಿರ ಮಾರ್ಗವಾಗಿ ಲಿಂಗಾಯಿತ ಸಂಘಟನೆ ಮೈದಾನಕ್ಕೆ ತಲುಪಿ, ಫ.ಗು. ಹಳಕಟ್ಟಿ ಭವನದಲ್ಲಿ ಸಮಾರೋಪಗೊಳ್ಳಲಿದೆ.

ಈ ಸಂದರ್ಭದಲ್ಲಿ ಶ್ರೀಮತಿ ರತ್ನಪ್ರಭಾ ಬೆಲ್ಲದ ಮಾತನಾಡಿ, ಬಸವಪರ ಎಲ್ಲಾ ಸಂಘಟನೆಗಳು ಒಂದಾಗಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲದೆ ಬಸವ ಜಯಂತಿ ಆಚರಣೆ ನಡೆಸುತ್ತಿರುವುದು ಸಂತಸದ ವಿಷಯ ಎಂದು ಹೇಳಿದರು.

ಪತ್ರಿಕಾ ಪರಿಷತ್ತಿನಲ್ಲಿ ಈರಣ್ಣ ದೇಯಣ್ಣವರ, ಕಿರಣ್ ಅಗಡಿ, ರಮೇಶ ತುಬಚಿ, ಶಂಕರ ಗುಡಸ, ಎಸ್‌.ಜಿ. ಸಿದ್ನಾಳ, ಆನಂದ ಗುಡಸ, ಪ್ರೇಮ ಚೌಗಲಾ, ಮನೋಹರ ಪುಡಕಲಕಟ್ಟಿ, ಬಾಲಚಂದ್ರ ಬಾಗಿ, ಅಶೋಕ ಬೆಂಡಿಗೇರಿ, ಮುರಗೆಪ್ಪ ಬಾಳಿ ಹಾಗೂ ಸಿ.ಎಂ. ಬೂದಿಹಾಳ ಉಪಸ್ಥಿತರಿದ್ದರು.

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.