ePaper
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಮಹಾರಾಷ್ಟ್ರ ಸಚಿವರು ಬಂದರೆ ಸೂಕ್ತ ಕಾನೂನು ಕ್ರಮ -ಬೊಮ್ಮಾಯಿ ಎಚ್ಚರಿಕೆ

ಹುಬ್ಬಳ್ಳಿ : ಮಹಾರಾಷ್ಟ್ರದ ಸಚಿವರು ಬೆಳಗಾವಿಗೆ ಬಂದರೆ ಕಾನೂನು ಸುವ್ಯವಸ್ಥೆಯ ಸಮಸ್ಯೆ ಉಂಟಾಗುವ ಸಾಧ್ಯತೆಯಿದ್ದು ಅದಕ್ಕೇ ಬರಬೇಡಿ ಎಂದು ಮಹಾರಾಷ್ಟ್ರ ಸರಕಾರಕ್ಕೆ ಸೂಚಿಸಿದ್ದೇವೆ, ಆದರೂ ಅವರು ಬರುತ್ತೇವೆಂದರೆ ನಾವು ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂಬ ಸ್ಪಷ್ಟ ಎಚ್ಚರಿಕೆಯನ್ನು ರಾಜ್ಯ ಸರಕಾರ ನೀಡಿದೆ.

ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ತಾವು ಸೇರಿದಂತೆ ಸರಕಾರದ ಮುಖ್ಯ ಕಾರ್ಯದರ್ಶಿಗಳೂ ಮಹಾರಾಷ್ಟ್ರ ಸರಕಾರಕ್ಕೆ ಸಚಿವರನ್ನು ಕಳುಹಿಸಬೇಡಿ ಎಂದು ಸೂಚಿಸಿದ್ದಾರೆ. ಆದರೂ ಬರುತ್ತೇವೆ ಎಂದರೆ ಕಾನೂನು ಸುವ್ಯವಸ್ಥೆಗೆ ಏನು ಮಾಡಬೇಕೋ ಅದನ್ನು ಮಾಡುತ್ತೇವೆ ಎಂದರು.

ಬೆಳಗಾವಿಗೆ ಸಚಿವರು ಬರೋದು ಬೇಡಾ, ಕಾನೂನು ಸುವ್ಯವಸ್ಥೆ ಸಮಸ್ಯೆ ಆಗುತ್ತದೆ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಆದರೂ ಅವರು ಬರ್ತೀನಿ ಅನ್ನುವುದು ಸರಿಯಾದ ಕ್ರಮ ಅಲ್ಲ ಎಂದರು.
ಮಹಾರಾಷ್ಟ್ರ ಮತ್ತು ಕರ್ನಾಟಕ ಜನರ ನಡುವೆ ಸಾಮರಸ್ಯ ಇದೆ. ಉಭಯ ರಾಜ್ಯಗಳ ನಡುವಿನ ಗಡಿವಿವಾದ ಕರ್ನಾಟಕದ ಪ್ರಕಾರ ಮುಗಿದು ಹೋಗಿರುವ ಅಧ್ಯಾಯ. ಆದರೆ ಮಹಾರಾಷ್ಟ್ರ ಪದೇ ಪದೇ ಕ್ಯಾತೆ ತೆಗೆದು, ಈಗ ಸುಪ್ರೀಮ ಕೋರ್ಟಗೆ ಹೋಗಿದೆ. ಈ ಸಂದರ್ಭದಲ್ಲಿ ಮಹಾರಾಷ್ಟ್ರದ ಸಚಿವರು ರಾಜ್ಯಕ್ಕೆ ಬರುವ ಸಾಹಸ ಮಾಡಿದರೆ ಕ್ರಮ ತೆಗೆದುಕೊಳ್ಳಲೇ ಬೇಕಾಗುತ್ತದೆ. ಈ ಕುರಿತು ಪೊಲೀಸ್ ಇಲಾಖೆಗೆ ಸೂಚನೆ ನೀಡಿರುವುದಾಗಿಯೂ ಅವರು ತಿಳಿಸಿದರು.

ಹಿಂದಿನ ಸರಕಾರಗಳು ಈ ಹಿಂದೆ ಇಂಥ ಘಟನೆಗಳನ್ನು ಎದುರಿಸಿದ ಮಾದರಿಯನ್ನೇ ಬಳಸಲಾಗುವದು ಎಂದು ತಿಳಿಸುವ ಮೂಲಕ "ಪ್ರವೇಶ ನಿಷೇಧ" ಮಾಡುವ ಸೂಚನೆಯನ್ನು ಮುಖ್ಯಮಂತ್ರಿ ನೀಡಿದರು.

ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವರಾದ ಚಂದ್ರಕಾಂತ ಪಾಟೀಲ ಮತ್ತು ಶಂಭುರಾಜೆ ದೇಸಾಯಿ ಅವರನ್ನು ಬೆಳಗಾವಿಯ ಮಹಾರಾಷ್ಟ್ರವಾದಿಗಳ ಭೇಟಿಗೆ ನಾಳೆ ದಿ.೬ ರಂದು ಕಳುಹಿಸಲಿದೆ. ಸಚಿವ ಪಾಟೀಲ ಅವರು ಕೊಲ್ಲಾಪುರದ ತಮ್ಮ ನಿವಾಸದಿಂದ ನಿಪ್ಪಾಣಿ ಮಾರ್ಗವಾಗಿ ರಸ್ತೆ ಮೂಲಕ ಮತ್ತು ಸಚಿವ ದೇಸಾಯಿ ಅವರು ಮುಂಬಯಿಯಿಂದ ವಿಶೇಷ ವಿಮಾನದ ಮೂಲಕ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಡಿ 6 ರಂದು ಆಗಮಿಸಲಿದ್ದಾರೆ.

ಸಚಿವ ಪಾಟೀಲ ಅವರನ್ನು ಬೆಳಗಾವಿ ಗಡಿಯಲ್ಲಿ ಅಂದರೆ ನಿಪ್ಪಾಣಿ ತಾಲೂಕಿನ ಕೊಗನೊಳ್ಳಿ ಚೆಕ್ ಪೋಸ್ಟ್ ನಲ್ಲಿ ವಶಕ್ಕೆ ಪಡೆದು ಹಿಂದಕ್ಕೆ ಕಳುಹಿಸಲಾಗುವದು, ಹಾಗೆಯೇ ಸಚಿವ ದೇಸಾಯಿ ಅವರನ್ನು ವಿಮಾನ ನಿಲ್ದಾಣದಿಂದ ಹಿಂದಕ್ಕೆ ಕಳುಹಿಸಲಾಗುವದೆಂದು ಪೊಲೀಸ್ ಮೂಲಗಳು "ಸಮದರ್ಶಿ" ಗೆ ತಿಳಿಸಿವೆ.

ಮಹಾರಾಷ್ಟ್ರದಿಂದ ಬೆಳಗಾವಿಗೆ ಪ್ರವೇಶಿಸುವ ಪ್ರತಿ ಮಾರ್ಗಗಳಲ್ಲೂ ಬಲವಾದ ಪೊಲೀಸ್ ಬಂದೋಬಸ್ತ ಏರ್ಪಡಿಸಲಾಗಿದೆ.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.