ಅಳ್ನಾವರ, ಮೇ 24 : ಕಾಲೇಜು ದಿನಗಳಲ್ಲಿ ಪಡೆದ ಶಿಕ್ಷಣ, ಸ್ನೇಹ, ಅನುಭವ ಹಾಗೂ ಮೌಲ್ಯಗಳು ಮುಂದಿನ ಜೀವನದ ದಾರಿ ರೂಪಿಸಲು ಸಹಕಾರಿಯಾಗಲಿವೆ. ಕಠಿಣ ಅಧ್ಯಯನದ ಮೂಲಕ ಹೆಚ್ಚಿನ ಅಂಕ ಗಳಿಸಲು ಶ್ರಮಿಸುವುದರ ಜೊತೆಗೆ ಸಮಾಜದ ಉತ್ತಮ ನಾಗರಿಕರಾಗಿ ಸೇವೆ ಸಲ್ಲಿಸಲು ಸಜ್ಜಾಗಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ. ಉಮಾ ಪೂಜಾರ ಹೇಳಿದರು.
ಕಾಲೇಜಿನ ಸಭಾಭವನದಲ್ಲಿ ಶನಿವಾರ ಸಾಂಸ್ಕೃತಿಕ ಘಟಕದ ಆಶ್ರಯದಲ್ಲಿ ನಡೆದ ಕಲಾ ಹಾಗೂ ವಾಣಿಜ್ಯ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಾಧನೆಯ ಮೂಲಕ ಉತ್ತಮ ಜೀವನ ರೂಪಿಸಿಕೊಳ್ಳಬೇಕು. ನಿಮ್ಮ ಗುರಿ ಸಾಧನೆಗೆ ಮಹಾವಿದ್ಯಾಲಯ ಸದಾ ಬೆಂಬಲವಾಗಿರುತ್ತದೆ ಎಂದು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಿದರು.
ಶಿಕ್ಷಣದ ಜೊತೆಗೆ ಸಾಂಸ್ಕೃತಿಕ, ಕ್ರೀಡೆ ಹಾಗೂ ವಿವಿಧ ಚಟುವಟಿಕೆಗಳಲ್ಲಿ ಸಾಧನೆ ಮಾಡಿ ಕಾಲೇಜಿನ ಹೆಸರನ್ನು ಎತ್ತಿಹಿಡಿದಿರುವ ನಿಮ್ಮ ಭವಿಷ್ಯ ಉಜ್ವಲವಾಗಿರಲಿ. ನಿಮ್ಮ ಪರಿಶ್ರಮ ಮತ್ತು ಶಕ್ತಿ ಸದಾ ಮುಂದುವರೆಯಲಿ. ಆತ್ಮವಿಶ್ವಾಸ, ಪ್ರಾಮಾಣಿಕತೆ ಹಾಗೂ ಕಠಿಣ ಪರಿಶ್ರಮದ ಮೂಲಕ ಬದುಕಿನಲ್ಲಿ ಯಶಸ್ಸು ಸಾಧಿಸಬೇಕು ಎಂದು ಶುಭ ಹಾರೈಸಿದರು.
ವಿದ್ಯಾರ್ಥಿಗಳ ಹಸ್ತಪ್ರತಿ ಬ್ಯಾನರ್ ಅನಾವರಣಗೊಳಿಸಲಾಯಿತು. ವಿದ್ಯಾರ್ಥಿನಿಯರ ನೃತ್ಯ ಗಮನ ಸೆಳೆಯಿತು. ಬಿಎ ಹಾಗೂ ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿಗಳು ಕಾಲೇಜು ದಿನಗಳ ಅನುಭವ ಹಂಚಿಕೊಂಡರು. ಸಾಂಸ್ಕೃತಿಕ ಕಾರ್ಯಕ್ರಮಗಳು ಕಾರ್ಯಕ್ರಮಕ್ಕೆ ಮೆರಗು ತಂದವು.
ಆರಂಭದಲ್ಲಿ ಶ್ರೇಯಾ ಕೊಡಕಿ ಪ್ರಾರ್ಥನೆ ಹಾಡಿದರು. ಪ್ರಾಧ್ಯಾಪಕ ದೇವೇಂದ್ರ ತಳವಾರ ಹಿತನುಡಿಗಳನ್ನಾಡಿದರು. ಸಾಂಸ್ಕೃತಿಕ ವೇದಿಕೆಯ ಸಂಚಾಲಕಿ ಡಾ. ಪರ್ವೀನ್ ಶೇಖ್ ಹಾಗೂ ಉಪನ್ಯಾಸಕರಾದ ತೇಜಸ್ವಿನಿ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ಅನಿಲಕುಮಾರ ಖಾತೇದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಮತಿ ಸ್ವಾಗತಿಸಿದರು. ಸಂಗೀತಾ ಬಾಗೇವಾಡಿ ಮತ್ತು ಭೂಮಿಕಾ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಸೌಜನ್ಯ ರಪಾಠಿ ವಂದಿಸಿದರು.