ಚೀನಾದ ವಿಚಾರದಲ್ಲಿ ಕೇಂದ್ರ ಸರಕಾರ ಮಣಿಯುತ್ತಿದೆ: ಕಾಂಗ್ರೆಸ್ ಆರೋಪ
ಹೊಸದಿಲ್ಲಿ, ಮೇ 20 : ಚೀನಾದ ವಿಚಾರದಲ್ಲಿ ಕೇಂದ್ರ ಸರಕಾರ ಮಣಿಯುವ ಧೋರಣೆ ಅನುಸರಿಸುತ್ತಿದೆ ಎಂದು ಕಾಂಗ್ರೆಸ್ ಬುಧವಾರ ಆರೋಪಿಸಿದೆ.
ಕಾಂಗ್ರೆಸ್ ಸಂವಹನ ವಿಭಾಗದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಗ್ರೇಟ್ ನಿಕೋಬಾರ್ ದ್ವೀಪ ಯೋಜನೆ ವಿಚಾರವನ್ನು ಮುಂದಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವನ್ನು ಟೀಕಿಸಿದರು.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ ಮಾಡಿರುವ ಜೈರಾಮ್ ರಮೇಶ್, ಗ್ರೇಟ್ ನಿಕೋಬಾರ್ ಯೋಜನೆಯಿಂದ ಉಂಟಾಗಬಹುದಾದ ಪರಿಸರ ಹಾನಿ ಬಗ್ಗೆ ಕಾಳಜಿ ವ್ಯಕ್ತಪಡಿಸುವವರನ್ನು ಚೀನಾಪರ ಎಂದು ಬಿಂಬಿಸಲು ಸರಕಾರದ ಬೆಂಬಲಿಗರು ಪ್ರಚಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಇದು ಬೂಟಾಟಿಕೆಯ ಪರಮಾವಧಿಯಾಗಿದ್ದು, ಚೀನಾದ ವಿಚಾರದಲ್ಲಿ ಕೇಂದ್ರ ಸರಕಾರ ಮಣಿಯುವ ಹಾಗೂ ಸಮರ್ಪಣೆಯ ಧೋರಣೆ ಅನುಸರಿಸುತ್ತಿದೆ ಎಂದು ಅವರು ಟೀಕಿಸಿದರು.
2020ರ ಜೂನ್ 19ರಂದು ಲಡಾಖ್ನಲ್ಲಿ 20 ಭಾರತೀಯ ಯೋಧರು ಹುತಾತ್ಮರಾದ ಘಟನೆಯ ಬಳಿಕ ಪ್ರಧಾನಿ ಮೋದಿ ಅವರು ಚೀನಾಕ್ಕೆ ಕ್ಲೀನ್ ಚಿಟ್ ನೀಡಿದ್ದರು ಎಂದು ಕಾಂಗ್ರೆಸ್ ಆರೋಪಿಸಿದೆ.
ಚೀನಾ ಜೊತೆಗಿನ ಮಾತುಕತೆಯಲ್ಲಿ ಲಡಾಖ್ನ ಕೆಲವು ಪ್ರದೇಶಗಳಲ್ಲಿ ಭಾರತದ ಸಾಂಪ್ರದಾಯಿಕ ಗಸ್ತು ಹಾಗೂ ಪಶುಪಾಲನಾ ಹಕ್ಕುಗಳನ್ನು ಸರಕಾರ ಬಿಟ್ಟುಕೊಟ್ಟಿದೆ. 2025-26ರಲ್ಲಿ ಚೀನಾ ಮತ್ತು ಭಾರತದ ನಡುವಿನ ವ್ಯಾಪಾರ ಅಂತರ ಸುಮಾರು 115 ಶತಕೋಟಿ ಡಾಲರ್ಗೆ ಏರಿದ್ದು, ಇದರಿಂದ ವಿಶೇಷವಾಗಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಹಾನಿಯಾಗಿದೆ ಎಂದು ರಮೇಶ್ ಹೇಳಿದರು.
ಆಪರೇಷನ್ ಸಿಂಧೂರ್ಗೆ ಪ್ರತಿಯಾಗಿ ಪಾಕಿಸ್ತಾನ ಕೈಗೊಂಡ ಕ್ರಮಗಳ ಹಿಂದೆ ಚೀನಾದ ಪಾತ್ರವಿದೆ ಎಂದು ಕೆಲವು ಹಿರಿಯ ಸೇನಾ ಅಧಿಕಾರಿಗಳು ಹೇಳಿದ್ದರೂ, ಈ ಕುರಿತು ಪ್ರಧಾನಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಅವರು ಆರೋಪಿಸಿದರು.
ಭಾರತವು ಚೀನಾದಿಂದ ಆರ್ಥಿಕ ಮತ್ತು ಭದ್ರತಾ ಸವಾಲುಗಳನ್ನು ಎದುರಿಸುತ್ತಿದೆ. ಆದರೆ ಗ್ರೇಟ್ ನಿಕೋಬಾರ್ ಯೋಜನೆ ಮುಖ್ಯವಾಗಿ ವ್ಯಾಪಾರ ಉದ್ದೇಶಕ್ಕಾಗಿ ರೂಪಿಸಿರುವ ಯೋಜನೆಯಾಗಿದ್ದು, ಅದರ ಭಾಗವಾಗಿರುವ ಸರಕು ಸಾಗಣೆ ಬಂದರು ಸೈನಿಕ ಬಳಕೆಗೆ ಸಂಬಂಧಪಟ್ಟದ್ದಲ್ಲ ಎಂದು ಅವರು ಹೇಳಿದರು.
ಅಂಡಮಾನ್–ನಿಕೋಬಾರ್ ಪ್ರದೇಶದಲ್ಲಿರುವ ಐಎನ್ಎಸ್ ಬಾಜ್ ಸೇರಿದಂತೆ ಇತರ ಸೈನಿಕ ಕೇಂದ್ರಗಳನ್ನು ಅಭಿವೃದ್ಧಿಪಡಿಸಲು ಅವಕಾಶಗಳಿದ್ದರೂ, ಸರಕಾರ ಅದಕ್ಕೆ ಆದ್ಯತೆ ನೀಡುತ್ತಿಲ್ಲ ಎಂದು ರಮೇಶ್ ಆರೋಪಿಸಿದರು.
ಗ್ರೇಟ್ ನಿಕೋಬಾರ್ ಯೋಜನೆಯಿಂದ ಪರಿಸರ ಹಾಗೂ ಸ್ಥಳೀಯ ಜನರ ಜೀವನದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.