ಚಿಕ್ಕಮಗಳೂರು, ಏಪ್ರಿಲ್ 09 : ಪತಿ ಮೃತಪಟ್ಟಿರುವುದರ ಅರಿವಿಲ್ಲದೆ ಅವರ ಕೊಳೆತ ಮೃತದೇಹದೊಂದಿಗೆ ಮಾನಸಿಕ ಅಸ್ವಸ್ಥೆಯಾಗಿರುವ ಪತ್ನಿಯೊಬ್ಬರು ಸುಮಾರು ಹತ್ತು ದಿನಗಳ ಕಾಲ ಕಳೆದ ಹೃದಯವಿದ್ರಾವಕ ಘಟನೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಬಣಕಲ್ನಲ್ಲಿ ಬೆಳಕಿಗೆ ಬಂದಿದೆ.
77 ವರ್ಷದ ಸಿರಿಲ್ ಮೋನಿಸ್ ಅನಾರೋಗ್ಯದಿಂದ ಸುಮಾರು ಹತ್ತು ದಿನಗಳ ಹಿಂದೆ ಮನೆಯೊಳಗೆ ಮಲಗಿದ್ದಲ್ಲೇ ಮೃತಪಟ್ಟಿದ್ದಾರೆ. ಆದರೆ ಅವರ ಪತ್ನಿ ಮಾನಸಿಕ ಅಸ್ವಸ್ಥರಾಗಿದ್ದರಿಂದ ಪತಿ ಸಾವನ್ನಪ್ಪಿರುವುದನ್ನು ಗಮನಿಸದೆ ಅದೇ ಮನೆಯಲ್ಲಿ ದಿನಗಳನ್ನು ಕಳೆದಿರುವುದು ತಿಳಿದುಬಂದಿದೆ.
ಮನೆಯಿಂದ ತೀವ್ರ ದುರ್ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಅಕ್ಕಪಕ್ಕದವರು ಅನುಮಾನಗೊಂಡು ಬುಧವಾರ ಮನೆಗೆ ಹೋಗಿ ಪರಿಶೀಲನೆ ನಡೆಸಿದಾಗ ಘಟನೆ ಬಹಿರಂಗವಾಗಿದೆ. ಮರಣೋತ್ತರ ಪರೀಕ್ಷೆಯಲ್ಲಿ ಸಿರಿಲ್ ಮೋನಿಸ್ ಸುಮಾರು ಹತ್ತು ದಿನಗಳ ಹಿಂದೆಯೇ ಮೃತಪಟ್ಟಿರುವುದು ದೃಢಪಟ್ಟಿದೆ.
ಸಿರಿಲ್ ಮೋನಿಸ್ ಅವರಿಗೆ ಇಬ್ಬರು ಮಕ್ಕಳು ಇದ್ದು, ಪುತ್ರಿ ವಿದೇಶದಲ್ಲಿ ಶಿಕ್ಷಕಿಯಾಗಿದ್ದರೆ, ಪುತ್ರ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾನೆ. ದಂಪತಿಗಳು ಮನೆಯಲ್ಲಿ ಇಬ್ಬರೇ ವಾಸವಾಗಿದ್ದರು.
ಪುತ್ರ ಪ್ರತಿದಿನ ತಾಯಿಗೆ ದೂರವಾಣಿ ಮೂಲಕ ಸಂಪರ್ಕದಲ್ಲಿದ್ದರೂ, ತಂದೆಯ ಬಗ್ಗೆ ವಿಚಾರಿಸಿದಾಗ ‘ಅವರು ಚೆನ್ನಾಗಿದ್ದಾರೆ’ ಎಂದು ತಾಯಿ ಹೇಳುತ್ತಿದ್ದುದಾಗಿ ತಿಳಿದುಬಂದಿದೆ.
ಸುಮಾರು 15 ದಿನಗಳ ಹಿಂದೆ ಮನೆಗೆ ಬಂದಿದ್ದ ಪುತ್ರ ನಾಲ್ಕು ದಿನಗಳ ನಂತರ ಹಿಂದಿರುಗಿದ್ದನು. ಆ ಬಳಿಕ ಈ ದುರ್ಘಟನೆ ಸಂಭವಿಸಿರುವುದು ತಿಳಿದುಬಂದಿದೆ.
ಕೊಳೆತಿದ್ದ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲು ಸಮಾಜ ಸೇವಕ ಆರಿಫ ನೆರವಾಗಿದ್ದಾರೆ. ಸಂಜೆ ವೇಳೆ ಬಣಕಲ್ ಕ್ರೈಸ್ತ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.









