ಬೆಂಗಳೂರು, ಮೇ 15 : ದೇಶದ ಜನರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಅಚ್ಚೇ ದಿನ್ ನೋಡಲೂ ಇಲ್ಲ, ಅಮೃತಕಾಲದಲ್ಲೂ ಬದುಕಲು ಆಗುತ್ತಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.
ಶುಕ್ರವಾರ ಎಕ್ಸ್ನಲ್ಲಿ ಪ್ರಕಟಿಸಿರುವ ಹೇಳಿಕೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಅವರು, ದಿನದಿಂದ ದಿನಕ್ಕೆ ಏರುತ್ತಿರುವ ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲದ ದರಗಳಿಂದ ದೇಶದ ಜನರ ಬದುಕು ಸಂಕಷ್ಟಕ್ಕೆ ಸಿಲುಕಿದೆ ಎಂದು ಆರೋಪಿಸಿದ್ದಾರೆ.
ಅಚ್ಚೇ ದಿನ್ ಹೆಸರಿನಲ್ಲಿ ದೇಶದ ಜನರನ್ನು ಮೋಸ ಮಾಡಿದ ಬಿಜೆಪಿ ಸರ್ಕಾರ ಈಗ ಜನರಿಗೆ ದುಬಾರಿ ಬದುಕು, ತೆರಿಗೆ ದರೋಡೆ ಹಾಗೂ ಯುವಜನತೆಗೆ ನಿರುದ್ಯೋಗದ ನರಕವನ್ನು ನೀಡಿದೆ ಎಂದು ಅವರು ಟೀಕಿಸಿದ್ದಾರೆ.
ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗಿರುವುದರಿಂದ ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಾಗಿದೆ ಎಂದು ಕೇಂದ್ರ ಸರ್ಕಾರ ಸಮರ್ಥಿಸಿಕೊಳ್ಳುತ್ತಿದೆ. ಆದರೆ ಇದೇ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಇಳಿಕೆಯಾಗಿದ್ದಾಗ ಯಾಕೆ ಇಂಧನ ದರ ಕಡಿಮೆ ಮಾಡಲಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿದರೂ ಅದರ ಲಾಭ ದೇಶದ ಜನರಿಗೆ ಸಿಗಲಿಲ್ಲ. ಅದಾನಿ ಹಾಗೂ ಅಂಬಾನಿ ಕಂಪೆನಿಗಳ ಲಾಭಕ್ಕಾಗಿ ಜನಸಾಮಾನ್ಯರ ಮೇಲೆ ಹೆಚ್ಚುವರಿ ತೆರಿಗೆ ಹೇರಲಾಗಿದೆ ಎಂದು ಹರಿಪ್ರಸಾದ್ ಆರೋಪಿಸಿದ್ದಾರೆ.
ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆಯ ಪರಿಣಾಮ ಕೇವಲ ವಾಹನಗಳಿಗಷ್ಟೇ ಸೀಮಿತವಾಗುವುದಿಲ್ಲ. ರೈತರ ಹೊಲದಿಂದ ಮಾರುಕಟ್ಟೆಗೆ ಬರುವ ಪ್ರತಿಯೊಂದು ಆಹಾರ ವಸ್ತುವಿನ ಮೇಲೂ ಅದರ ಪರಿಣಾಮ ಬೀಳುತ್ತದೆ ಎಂದು ಅವರು ಹೇಳಿದ್ದಾರೆ.
ಸಾರಿಗೆ ವೆಚ್ಚ ಹೆಚ್ಚುವುದರಿಂದ ತರಕಾರಿ, ಅಕ್ಕಿ, ಹಣ್ಣು, ಹಾಲು ಸೇರಿದಂತೆ ದಿನಬಳಕೆಯ ಎಲ್ಲ ವಸ್ತುಗಳ ದರವೂ ಏರಿಕೆಯಾಗುತ್ತದೆ. ಇದರ ಪರಿಣಾಮವಾಗಿ ಸಾಮಾನ್ಯ ಜನರ ಅಡಿಗೆ ಮನೆಯ ಮೇಲೆಯೇ ಹೊರೆ ಬೀಳುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಜನರಿಗೆ ಅಚ್ಚೇ ದಿನ್ ಭ್ರಮೆ ಸೃಷ್ಟಿಸಿ, ಕಾರ್ಪೊರೇಟ್ ಸಾಮ್ರಾಜ್ಯಗಳಿಗೆ ಅಮೃತಕಾಲ ಒದಗಿಸಲಾಗಿದೆ ಎಂದು ಆರೋಪಿಸಿದ ಅವರು, ಚುನಾವಣೆ ಮುಗಿಯುವವರೆಗೆ ಧರ್ಮ, ಪಾಕಿಸ್ತಾನ, ಮಂದಿರ, ಮಂಗಲಸೂತ್ರದಂತಹ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಳ್ಳಲಾಗುತ್ತದೆ. ಚುನಾವಣೆ ಮುಗಿದ ತಕ್ಷಣ ಜನರಿಗೆ ಪೆಟ್ರೋಲ್, ಗ್ಯಾಸ್ ದರ ಏರಿಕೆ ಹಾಗೂ ತೆರಿಗೆ ಹೊಡೆತ ಎದುರಾಗುತ್ತದೆ ಎಂದು ಲೇವಡಿ ಮಾಡಿದ್ದಾರೆ.
ಜನರ ಜೇಬು ಖಾಲಿ ಮಾಡಿ ಕಾರ್ಪೊರೇಟ್ ಖಜಾನೆ ತುಂಬಿಸುವ ರಾಜಕಾರಣ ಎಷ್ಟು ದಿನ ಮುಂದುವರಿಯಬೇಕು ಎಂದು ಪ್ರಶ್ನಿಸಿರುವ ಅವರು, ಕೇಂದ್ರ ಬಿಜೆಪಿ ಸರ್ಕಾರದ ದುರಾಡಳಿತದಿಂದ ದೇಶದ ಆರ್ಥಿಕ ವ್ಯವಸ್ಥೆ ಮತ್ತಷ್ಟು ಕುಸಿಯುವ ಅಪಾಯವಿದೆ ಎಂದು ಎಚ್ಚರಿಕೆ ನೀಡಿದ್ದಾರೆ.