ePaper
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಚೀನವು ಯುದ್ಧಕ್ಕೆ ಸಿದ್ಧ ಎಂಬ ರಾಹುಲ್ ಹೇಳಿಕೆ ಬಗ್ಗೆ ನಡ್ಡಾ, ಯೋಗಿ ಆಕ್ರೋಶ

ಹೊಸದಿಲ್ಲಿ : ಚೀನದ ವಿಚಾರದಲ್ಲಿ ನೀಡಿದ ಹೇಳಿಕೆ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ವ್ಯಾಪಕ ಆಕ್ರೋಶ ಹೊರ ಹಾಕಿದ್ದು, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ , ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಕಿಡಿ ಕಾರಿದ್ದಾರೆ.


“ಚೀನವು ಯುದ್ಧಕ್ಕೆ ಸಿದ್ಧವಾಗುತ್ತಿದೆ. ಆದರೆ, ಭಾರತ ಸರ್ಕಾರ ಮಾತ್ರ ನಿದ್ದೆಗೆ ಶರಣಾಗಿದೆ. ಅಪಾಯವನ್ನು ಸರ್ಕಾರ ನಿರ್ಲಕ್ಷಿಸುತ್ತಿದೆ. ಚೀನವು ಈಗಾಗಲೇ ಭಾರತದ 2 ಸಾವಿರ ಚದರ ಕಿಲೋ ಮೀಟರ್‌ ಭೂಮಿಯನ್ನು ಅತಿಕ್ರಮಣ ಮಾಡಿಕೊಂಡಿದೆ. ಗಾಲ್ವಾನ್‌ನಲ್ಲಿ ನಮ್ಮ 20 ಯೋಧರನ್ನು ಚೀನೀ ಸೈನಿಕರು ಹತ್ಯೆಗೈದಿದ್ದಾರೆ. ಅರುಣಾಚಲ ಪ್ರದೇಶದಲ್ಲೂ ನಮ್ಮ ಯೋಧರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ’ ಎಂದು ರಾಹುಲ್‌ ಹೇಳಿದ್ದರು.

”ರಾಹುಲ್ ಗಾಂಧಿಯವರ ಹೇಳಿಕೆಯು ನಮ್ಮ ಸೇನೆಯ ಧೈರ್ಯವನ್ನು ಕುಗ್ಗಿಸುವ ಕೆಲಸ ಮಾಡುತ್ತದೆ. ಎಷ್ಟೇ ಖಂಡಿಸಿದರೂ ಕಡಿಮೆಯೇ. ಭಾರತೀಯ ಸೇನೆಯು ಶೌರ್ಯ ಮತ್ತು ಶೌರ್ಯದ ಸಂಕೇತವಾಗಿದೆ. ಚೀನದ ಕಮ್ಯುನಿಸ್ಟ ಪಕ್ಷವು ಕಾಂಗ್ರೆಸ್ ಪಕ್ಷದೊಂದಿಗೆ ಎಂಒಯುಗೆ ಸಹಿ ಹಾಕಿರುವುದು ನಮಗೆ ತಿಳಿದಿದೆ” ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಕಿಡಿ ಕಾರಿದ್ದಾರೆ.

”ಭಾರತೀಯ ಸೇನೆಯು ಡೋಕ್ಲಾಮ‌ನಲ್ಲಿದ್ದಾಗ, ರಾಹುಲ್ ಗಾಂಧಿ ಚೀನ ರಾಯಭಾರ ಕಚೇರಿಯಲ್ಲಿ ಚೀನದ ಅಧಿಕಾರಿಗಳನ್ನು ಸದ್ದಿಲ್ಲದೆ ಭೇಟಿಯಾಗಿದ್ದರು. ಅವರು ಸರ್ಜಿಕಲ್ ಸ್ಟ್ರೈಕ್ ಮತ್ತು ಪುಲ್ವಾಮಾ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದು ನಮಗೆ ತಿಳಿದಿದೆ, ಇದು ಅವರು ಭಾರತದ ಭಾಷೆಯನ್ನು ಮಾತನಾಡುವುದಿಲ್ಲ ಎಂದು ತಿಳಿಸುತ್ತದೆ. ಅವರು ಪಾಕಿಸ್ಥಾನ ಮಾತನಾಡುವ ಭಾಷೆಯನ್ನೇ ಮಾತನಾಡುತ್ತಾರೆ. ಇಂತಹ ಹೇಳಿಕೆಗಳನ್ನು ನಾನು ಖಂಡಿಸುತ್ತೇನೆ, ಇದು ರಾಹುಲ್ ಗಾಂಧಿಯವರ ದೇಶದ ಬಗೆಗಿನ ಮನಸ್ಥಿತಿಯನ್ನು ತೋರಿಸುತ್ತದೆ” ಎಂದು ನಡ್ಡಾ ಹೇಳಿದ್ದಾರೆ.

”ರಾಹುಲ್ ಗಾಂಧಿಯವರ ಹೇಳಿಕೆ ಅತಿರೇಕದ ಮತ್ತು ದೇಶ ವಿರೋಧಿ ಅಂಶಗಳನ್ನು ಪ್ರೇರೇಪಿಸುತ್ತದೆ. ಇದು ಭಾರತ ಮತ್ತು ಭಾರತೀಯ ಸೇನೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವಮಾನಿಸಲಾಗಿದೆ. ಇದನ್ನು ನಾವು ಖಂಡಿಸುತ್ತೇವೆ. ಡೋಕ್ಲಾಮ್ ಘಟನೆಯ ಸಂದರ್ಭದಲ್ಲಿ, ನಮ್ಮ ಸೈನಿಕರನ್ನು ಗೌರವಿಸುವ ಬದಲು, ಅವರು ಮಾಡಿದ ಕೆಲಸದಿಂದ ಅವರ ಪಾತ್ರ ಏನು ಎಂಬುದು ಸ್ಪಷ್ಟವಾಗಿದೆ” ಎಂದು ಆದಿತ್ಯನಾಥ್ ಆಕ್ರೋಶ ಹೊರ ಹಾಕಿದ್ದಾರೆ.

ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿಯವರು ದೇಶದ ಸೈನಿಕರು ಮತ್ತು ಜನರಲ್ಲಿ ಕ್ಷಮೆ ಯಾಚಿಸಬೇಕು ಮತ್ತು ಅವರು ದೇಶವನ್ನು ಮತ್ತೆ ಮತ್ತೆ ತೊಂದರೆಗೆ ಸಿಲುಕಿಸುವ ಕ್ರಮಗಳಿಂದ ದೂರವಿರಬೇಕು ಎಂದು ಯೋಗಿ ಹೇಳಿದ್ದಾರೆ.

“ಭಾರತೀಯ ಸೇನೆಯ ಕೆಚ್ಚೆದೆಯ ಯೋಧರನ್ನು ಸಮರ್ಪಕವಾಗಿ ನಿಯೋಜಿಸಿರುವುದರಿಂದ ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿರುವ ಯಾಂಗ್ಟ್ಸೆ ಪ್ರದೇಶವು ಈಗ ಸಂಪೂರ್ಣ ಸುರಕ್ಷಿತವಾಗಿದೆ” ಎಂದು ಕೇಂದ್ರ ಸಚಿವ ಕಿರಣ ರಿಜಿಜು ಟ್ವೀಟ್ ಮಾಡಿದ್ದಾರೆ.

ಬಿಜೆಪಿ ವಕ್ತಾರ ಗೌರವ ಭಾಟಿಯಾ ಮಾತನಾಡಿ, "ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಿಮೋಟ್ ಕಂಟ್ರೋಲ್ ಆಗಿರದಿದ್ದರೆ ಮತ್ತು ವಿರೋಧ ಪಕ್ಷ ದೇಶದೊಂದಿಗೆ ನಿಂತಿರುವುದು ಹೌದೇ ಆದರೆ ,ಭಾರತವನ್ನು ಕೀಳಾಗಿಸಿ ಅದರ ಸಶಸ್ತ್ರ ಪಡೆಗಳ ನೈತಿಕ ಸ್ಥೈರ್ಯವನ್ನು ಕುಸಿಯುವ ಹೇಳಿಕೆಗಾಗಿ ಗಾಂಧಿ ಅವರನ್ನು ಪಕ್ಷದಿಂದ ಹೊರಹಾಕಬೇಕು” ಎಂದು ಹೇಳಿದ್ದಾರೆ.

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.