
ಬೆಳಗಾವಿ : ಶಾಲೆಗಳಿಗೆ ಬೇಸಿಗೆ ರಜೆ ಬಿದ್ದ ಹಿನ್ನೆಲೆಯಲ್ಲಿ ಹಿಡಕಲ್ ಜಲಾಶಯದ ಹಿನ್ನೀರಿಗೆ ಈಜಲು ತೆರಳಿದ್ದ ಐವರು ಬಾಲಕರಲ್ಲಿ ಇಬ್ಬರು ನೀರು ಪಾಲಾಗಿರುವ ಘಟನೆ ಹುಕ್ಕೇರಿ ತಾಲೂಕಿನ ಹಳೇಗುಡನಟ್ಟಿ ಬಳಿ ಸೋಮವಾರ ಮಧ್ಯಾಹ್ನ ನಡೆದಿದೆ. ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.
ದುರ್ಘಟನೆಯಲ್ಲಿ ಕೃಷ್ಣ ವಿಠ್ಠಲ ಖಾನಾಪುರೆ (14) ಹಾಗೂ ಪ್ರಜ್ವಲ ಗೋಕಾರ (14) ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಇವರಿಬ್ಬರು ದಾದಾಬಾನಟ್ಟಿಯ ಆರ್.ಸಿ ಸೆಂಟರ್ ಗ್ರಾಮದವರಾಗಿದ್ದಾರೆ.
ಶಾಲೆಗಳಿಗೆ ಬೇಸಿಗೆಯ ರಜೆ ಇದ್ದ ಹಿನ್ನೆಲೆಯಲ್ಲಿ ಆರ್.ಸಿ ಸೆಂಟರ್ ಗ್ರಾಮದ ಐವರು ಬಾಲಕರು ಹಳೇ ಗುಡನಟ್ಟಿ ಗ್ರಾಮದ ದೇವಸ್ಥಾನ ಬಳಿಯ ಹಿಡಕಲ್ ಜಲಾಶಯದ ಹಿನ್ನೀರಿನಲ್ಲಿ ಈಜಲು ನದಿಗೆ ಇಳಿದಿದ್ದರು. ಈ ಐವರಲ್ಲಿ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದು, ಇಬ್ಬರು ಜಲಸಮಾಧಿಯಾಗಿದ್ದಾರೆ.









