LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ಹಿಂದೂ ಧರ್ಮ ಒಂದು ಜೀವನ ವಿಧಾನ, ದೇವಾಲಯಕ್ಕೆ ಹೋಗುವುದು ಕಡ್ಡಾಯವಲ್ಲ: ಸುಪ್ರೀಮ ಕೋರ್ಟ

ಹೊಸದಿಲ್ಲಿ, ಮೇ 13 : ಹಿಂದೂ ಧರ್ಮವು ಕೇವಲ ಧಾರ್ಮಿಕ ಆಚರಣೆಗಳಿಗೆ ಸೀಮಿತವಾಗಿರುವುದಿಲ್ಲ, ಅದು ಒಂದು ಜೀವನ ವಿಧಾನವಾಗಿದೆ ಎಂದು ಸುಪ್ರೀಂ ಕೋರ್ಟ್ ಬುಧವಾರ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಹಿಂದೂವಾಗಿ ಉಳಿಯಲು ದೇವಾಲಯಕ್ಕೆ ಹೋಗುವುದು ಅಥವಾ ನಿರ್ದಿಷ್ಟ ಧಾರ್ಮಿಕ ಆಚರಣೆಗಳನ್ನು ಪಾಲಿಸುವುದು ಕಡ್ಡಾಯವಲ್ಲ ಎಂದು ಸಂವಿಧಾನ ಪೀಠ ತಿಳಿಸಿದೆ.

ಮನೆಯೊಳಗೆ ದೀಪ ಹಚ್ಚಿ ನಂಬಿಕೆ ವ್ಯಕ್ತಪಡಿಸಿದರೂ ಅದು ವ್ಯಕ್ತಿಯ ಧರ್ಮ ಮತ್ತು ಭಕ್ತಿಯನ್ನು ಸಾಬೀತುಪಡಿಸಲು ಸಾಕು ಎಂದು ಪೀಠ ಹೇಳಿದೆ.

ಕೇರಳದ ಶಬರಿಮಲೆ ದೇವಸ್ಥಾನ ಸೇರಿದಂತೆ ವಿವಿಧ ಧಾರ್ಮಿಕ ಸ್ಥಳಗಳಲ್ಲಿ ಮಹಿಳೆಯರ ವಿರುದ್ಧದ ತಾರತಮ್ಯ ಹಾಗೂ ದಾವೂದಿ ಬೊಹ್ರಾಗಳು ಸೇರಿದಂತೆ ಹಲವು ಸಮುದಾಯಗಳ ಧಾರ್ಮಿಕ ಸ್ವಾತಂತ್ರ್ಯದ ವ್ಯಾಪ್ತಿಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಒಂಭತ್ತು ನ್ಯಾಯಾಧೀಶರ ಸಂವಿಧಾನ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.

ಪೀಠದಲ್ಲಿ ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ, ಎಂ.ಎಂ. ಸುಂದ್ರೇಶ್, ಅಹ್ಸಾನುದ್ದೀನ್ ಅಮಾನುಲ್ಲಾ, ಅರವಿಂದ್ ಕುಮಾರ್, ಆಗಸ್ಟೀನ್ ಜಾರ್ಜ್ ಮಸಿಹ್, ಪ್ರಸನ್ನ ಬಿ. ವರಾಲೆ, ಆರ್. ಮಹಾದೇವನ್ ಹಾಗೂ ಜೋಯ್ಮಲ್ಯ ಬಾಗ್ಚಿ ಸದಸ್ಯರಾಗಿದ್ದರು.

ವಿಚಾರಣೆಯ 15ನೇ ದಿನ ಅರ್ಜಿದಾರರ ಪರ ಹಿರಿಯ ವಕೀಲ ಡಾ. ಜಿ. ಮೋಹನ್ ಗೋಪಾಲ್ ವಾದ ಮಂಡಿಸಿದರು. ಧಾರ್ಮಿಕ ಸಮುದಾಯಗಳ ಒಳಗಿನಿಂದಲೇ ಸಾಮಾಜಿಕ ನ್ಯಾಯಕ್ಕಾಗಿ ಬೇಡಿಕೆಗಳು ಬರುತ್ತಿವೆ ಎಂದು ಅವರು ನ್ಯಾಯಾಲಯದ ಗಮನಕ್ಕೆ ತಂದರು.

ಹಿಂದೂ ಧರ್ಮವನ್ನು ವಿವಿಧ ಹಂತಗಳಲ್ಲಿ ಬೇರೆಬೇರೆ ರೀತಿಯಲ್ಲಿ ವ್ಯಾಖ್ಯಾನಿಸಲಾಗಿದೆ. 1966ರಲ್ಲಿ ಹಿಂದೂ ಎಂದರೆ ವೇದಗಳನ್ನು ಅತ್ಯುನ್ನತ ಅಧಿಕಾರವೆಂದು ಒಪ್ಪಿಕೊಳ್ಳುವವನು ಎಂದು ಹೇಳಲಾಗಿತ್ತು. ಆದರೆ ಇಂದಿನ ಪರಿಸ್ಥಿತಿಯಲ್ಲಿ ಎಲ್ಲ ಹಿಂದೂಗಳೂ ಹಾಗೆ ನಂಬುತ್ತಾರೆ ಎನ್ನುವುದು ಸತ್ಯವೇ ಎಂದು ಅವರು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ನಾಗರತ್ನ, ಅದಕ್ಕಾಗಿಯೇ ಹಿಂದೂ ಧರ್ಮವನ್ನು ಜೀವನ ವಿಧಾನ ಎಂದು ಕರೆಯಲಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಹಿಂದೂವಾಗಿ ಉಳಿಯಲು ದೇವಾಲಯಕ್ಕೆ ಹೋಗುವುದು ಅಥವಾ ಧಾರ್ಮಿಕ ಆಚರಣೆಗಳನ್ನು ಪಾಲಿಸುವುದು ಕಡ್ಡಾಯವಲ್ಲ ಎಂದು ಅವರು ಹೇಳಿದರು.

ಧಾರ್ಮಿಕ ಆಚರಣೆಗಳನ್ನು ಅನುಸರಿಸುವುದು ಪ್ರತಿಯೊಬ್ಬರ ವೈಯಕ್ತಿಕ ಆಯ್ಕೆಯಾಗಿದೆ. ಪ್ರತಿಯೊಬ್ಬರಿಗೂ ತಮ್ಮದೇ ಆದ ನಂಬಿಕೆ ಮತ್ತು ಭಕ್ತಿ ಹೊಂದುವ ಹಕ್ಕಿದೆ ಎಂದು ಪೀಠ ಸ್ಪಷ್ಟಪಡಿಸಿತು.

ಈ ವೇಳೆ ಮುಖ್ಯ ನ್ಯಾಯಮೂರ್ತಿಯೂ ಅಭಿಪ್ರಾಯ ವ್ಯಕ್ತಪಡಿಸಿ, ಒಬ್ಬ ವ್ಯಕ್ತಿ ತನ್ನ ಗುಡಿಸಲಿನೊಳಗೆ ದೀಪ ಹಚ್ಚಿದರೂ ಅದು ಅವನ ಧರ್ಮ ಹಾಗೂ ನಂಬಿಕೆಯನ್ನು ತೋರಿಸಲು ಸಾಕು ಎಂದು ಹೇಳಿದರು.

ಇದಕ್ಕೂ ಮೊದಲು ನಡೆದ ವಿಚಾರಣೆ ವೇಳೆ ಪ್ರತಿಯೊಂದು ಧಾರ್ಮಿಕ ಆಚರಣೆ ಅಥವಾ ಸಂಪ್ರದಾಯಗಳನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ಅವಕಾಶ ನೀಡಿದರೆ ನೂರಾರು ಅರ್ಜಿಗಳು ಬರಬಹುದು. ಇದರಿಂದ ಪ್ರತಿಯೊಂದು ಧರ್ಮವೂ ಒಡೆಯುವ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ ಎಂದು ಸಂವಿಧಾನ ಪೀಠ ಎಚ್ಚರಿಸಿತ್ತು.

ಗಮನಾರ್ಹವಾಗಿ, 2018ರ ಸೆಪ್ಟೆಂಬರ್‌ನಲ್ಲಿ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠವು ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ 10ರಿಂದ 50 ವರ್ಷದೊಳಗಿನ ಮಹಿಳೆಯರ ಪ್ರವೇಶವನ್ನು ನಿರ್ಬಂಧಿಸಿದ್ದ ಆಚರಣೆಯನ್ನು 4–1 ಬಹುಮತದ ತೀರ್ಪಿನಲ್ಲಿ ರದ್ದುಗೊಳಿಸಿತ್ತು. ಶತಮಾನಗಳಷ್ಟು ಹಳೆಯದಾದ ಆ ಆಚರಣೆ ಕಾನೂನುಬಾಹಿರ ಹಾಗೂ ಸಂವಿಧಾನಬಾಹಿರ ಎಂದು ಆಗ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು.

Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST