ಹೊಸದಿಲ್ಲಿ, ಜೂ. 29: ಅಯೋಧ್ಯೆಯ ರಾಮಮಂದಿರ ದೇಣಿಗೆ ನಿಧಿಯ ದುರುಪಯೋಗದ ಆರೋಪಗಳ ಕುರಿತು ಸಿಬಿಐ ನೇತೃತ್ವದ ಬಹು-ಸಂಸ್ಥೆಗಳ ತನಿಖೆಗೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ತುರ್ತು ವಿಚಾರಣೆಗೆ ಸುಪ್ರೀಮ ಕೋರ್ಟ ಸೋಮವಾರ ನಿರಾಕರಿಸಿದೆ. ಬೇಸಿಗೆ ರಜೆಯ ಬಳಿಕ ನಿಯಮಿತ ಕಾರ್ಯಚಟುವಟಿಕೆಗಳನ್ನು ಆರಂಭಿಸಿದ ನ್ಯಾಯಾಲಯ, "ಸ್ವರ್ಗವೇನೂ ಕುಸಿಯುವುದಿಲ್ಲ" ಎಂದು ಹೇಳಿ ತುರ್ತು ವಿಚಾರಣೆಯ ಮನವಿಯನ್ನು ತಳ್ಳಿಹಾಕಿದೆ.
ರಾಮಮಂದಿರದಲ್ಲಿ ಸಂಗ್ರಹವಾಗಿರುವ ದೇಣಿಗೆ ನಿಧಿಯ ದುರುಪಯೋಗದ ಆರೋಪಗಳ ಕುರಿತು ಸಿಬಿಐ ಹಾಗೂ ಇತರ ತನಿಖಾ ಸಂಸ್ಥೆಗಳು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸುವಂತೆ ಇಬ್ಬರು ವಕೀಲರು ಸಲ್ಲಿಸಿರುವ ಪಿಐಎಲ್ನಲ್ಲಿ ಕೋರಲಾಗಿದೆ.
ಅರ್ಜಿಯನ್ನು ತುರ್ತಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳುವಂತೆ ಮನವಿ ಮಾಡಿದ ಅರ್ಜಿದಾರರು, ಉತ್ತರ ಪ್ರದೇಶ ಪೊಲೀಸರು ನಡೆಸುತ್ತಿರುವ ತನಿಖೆಯು ವಿಶ್ವಾಸಾರ್ಹವಾಗಿ ಕಾಣುತ್ತಿಲ್ಲ ಎಂದು ವಾದಿಸಿದರು. ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಸಾಕ್ಷ್ಯಗಳನ್ನು ಸಮರ್ಪಕವಾಗಿ ಸಂರಕ್ಷಿಸಿಲ್ಲ ಎಂಬ ಆರೋಪವನ್ನೂ ಅವರು ಮುಂದಿಟ್ಟರು.
ನ್ಯಾಯಮೂರ್ತಿಗಳಾದ ಎಂ.ಎಂ. ಸುಂದ್ರೇಶ್ ಹಾಗೂ ಶೀಲ್ ನಾಗು ಅವರ ಪೀಠವು ತುರ್ತು ಪಟ್ಟಿಗೆ ಸೇರಿಸುವ ಮನವಿಯನ್ನು ತಿರಸ್ಕರಿಸಿ, ಜುಲೈ 12ರಿಂದ 17ರ ವಾರದಲ್ಲಿ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿತು.
ಈ ನಡುವೆ, ರಾಮಮಂದಿರ ದೇಣಿಗೆ ದುರುಪಯೋಗದ ಆರೋಪಗಳ ಸಂಬಂಧ ಈಗಾಗಲೇ ಪೊಲೀಸ್ ತನಿಖೆ ಮುಂದುವರಿದಿದೆ. ತನಿಖೆಯ ಭಾಗವಾಗಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದು, ಅಗತ್ಯವಿದ್ದರೆ ಟ್ರಸ್ಟಿ ಅನಿಲ್ ಮಿಶ್ರಾ ಸೇರಿದಂತೆ ಇತರ ಹಿರಿಯ ಅಧಿಕಾರಿಗಳ ಹೇಳಿಕೆಗಳನ್ನೂ ದಾಖಲಿಸಬಹುದು ಎಂದು ಮೂಲಗಳು ತಿಳಿಸಿವೆ.
ಆರೋಪಗಳಿಂದ ತಮಗೆ ತೀವ್ರ ಆಘಾತ ಮತ್ತು ನೋವಾಗಿದೆ ಎಂದು ತಿಳಿಸಿರುವ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್, ನ್ಯಾಯಸಮ್ಮತ ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಪುನರುಚ್ಚರಿಸಿದೆ. ಚಂಪತ್ ರಾಯ್ ಹಾಗೂ ಟ್ರಸ್ಟಿ ಅನಿಲ್ ಮಿಶ್ರಾ ಅವರ ರಾಜೀನಾಮೆಗಳನ್ನು ಸ್ವೀಕರಿಸಿರುವುದನ್ನು ದೃಢಪಡಿಸಿರುವ ಟ್ರಸ್ಟ್, ಈ ವಿಷಯವನ್ನು ಮುಂದಿನ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದೆ.
ಭಕ್ತರ ವಿಶ್ವಾಸಕ್ಕೆ ಧಕ್ಕೆಯಾಗದಂತೆ ಎಲ್ಲಾ ಬೆಳ್ಳಿ ಇಟ್ಟಿಗೆಗಳು, ಆಭರಣಗಳು ಹಾಗೂ ಭಗವಾನ್ ರಾಮನಿಗೆ ಅರ್ಪಿಸಲಾದ ಬೆಲೆಬಾಳುವ ವಸ್ತುಗಳನ್ನು ಸುರಕ್ಷಿತವಾಗಿ ಸಂರಕ್ಷಿಸಲಾಗಿದ್ದು, ಅವುಗಳ ಸಂಪೂರ್ಣ ಲೆಕ್ಕಪತ್ರವನ್ನು ನಿರ್ವಹಿಸಲಾಗಿದೆ ಎಂದು ಟ್ರಸ್ಟ್ ಸ್ಪಷ್ಟಪಡಿಸಿದೆ. ಅಂತಿಮವಾಗಿ ಸತ್ಯವೇ ಗೆಲ್ಲುತ್ತದೆ ಎಂಬ ವಿಶ್ವಾಸವನ್ನೂ ಟ್ರಸ್ಟ್ ವ್ಯಕ್ತಪಡಿಸಿದೆ.