ಲಕ್ನೋ, ಮೇ 14 : ಉತ್ತರ ಪ್ರದೇಶದ ಹಲವು ಜಿಲ್ಲೆಗಳಲ್ಲಿ ಬೀಸಿದ ಬಲವಾದ ಬಿರುಗಾಳಿ, ಭಾರೀ ಮಳೆ ಹಾಗೂ ಸಿಡಿಲಿನ ಅಬ್ಬರಕ್ಕೆ ಕನಿಷ್ಠ 56 ಮಂದಿ ಸಾವನ್ನಪ್ಪಿದ್ದು, ಹಲವಾರು ಮನೆಗಳು ಮತ್ತು ವಿದ್ಯುತ್ ಮೂಲಸೌಕರ್ಯಗಳಿಗೆ ಭಾರೀ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಕಾಲಿಕ ಮಳೆ, ಗುಡುಗು ಮತ್ತು ಮಿಂಚಿನಿಂದ ಉಂಟಾದ ಜೀವಹಾನಿ ಬಗ್ಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಳವಳ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ 24 ಗಂಟೆಗಳೊಳಗೆ ಪರಿಹಾರ ತಲುಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಲ್ಲಾವಾರು ವರದಿಗಳ ಪ್ರಕಾರ ಪ್ರಯಾಗ್ರಾಜ್ನಲ್ಲಿ ಅತಿ ಹೆಚ್ಚು 17 ಮಂದಿ ಸಾವನ್ನಪ್ಪಿದ್ದು, ಭದೋಹಿಯಲ್ಲಿ 16, ಫತೇಪುರದಲ್ಲಿ 9, ಬದೌನ್ನಲ್ಲಿ 5, ಪ್ರತಾಪ್ಗಢದಲ್ಲಿ 4, ಚಂದೌಲಿ ಮತ್ತು ಕುಶಿನಗರದಲ್ಲಿ ತಲಾ 2 ಹಾಗೂ ಸೋನ್ಭದ್ರದಲ್ಲಿ ಒಬ್ಬರು ಮೃತಪಟ್ಟಿದ್ದಾರೆ.
ಪ್ರಯಾಗ್ರಾಜ್ ಜಿಲ್ಲೆಯಲ್ಲಿ ಬಿರುಗಾಳಿ ಮತ್ತು ಮಳೆಯಿಂದ ಮನೆಗಳ ಗೋಡೆಗಳು ಕುಸಿದು, ಮರಗಳು ಉರುಳಿ ಅನೇಕ ಅವಘಡಗಳು ಸಂಭವಿಸಿವೆ. ಹಂಡಿಯಾ ಪ್ರದೇಶದಲ್ಲಿ 7, ಫುಲ್ಪುರದಲ್ಲಿ 4, ಸೊರಾನ್ನಲ್ಲಿ 3, ಮೇಜಾದಲ್ಲಿ 2 ಹಾಗೂ ಸದರ್ನಲ್ಲಿ ಒಬ್ಬರು ಮೃತಪಟ್ಟಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಭದೋಹಿಯಲ್ಲಿ ಬಿರುಗಾಳಿಯಿಂದ ಅನೇಕ ಪ್ರದೇಶಗಳಲ್ಲಿ ಮರಗಳು ಮತ್ತು ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ಹಲವು ಮನೆಗಳಿಗೆ ಹಾನಿಯಾಗಿದೆ. ಜಿಲ್ಲೆಯಲ್ಲಿ ಕನಿಷ್ಠ 16 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಫತೇಪುರ ಜಿಲ್ಲೆಯಲ್ಲಿ ಬಿರುಗಾಳಿ ಸಂಬಂಧಿತ ಘಟನೆಗಳಲ್ಲಿ 9 ಮಂದಿ ಸಾವನ್ನಪ್ಪಿದ್ದು, 16 ಮಂದಿ ಗಾಯಗೊಂಡಿದ್ದಾರೆ. ಖಾಗಾ ತಹಸಿಲ್ನಲ್ಲಿ 5 ಮಹಿಳೆಯರು ಸೇರಿದಂತೆ 8 ಮಂದಿ ಮೃತಪಟ್ಟಿದ್ದು, ಸದರ್ ತಹಸಿಲ್ನಲ್ಲಿ ಮನೆಯ ಗೋಡೆ ಕುಸಿದು ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವಿನಾಶ್ ತ್ರಿಪಾಠಿ ತಿಳಿಸಿದ್ದಾರೆ.
ಪ್ರತಾಪ್ಗಢ ಜಿಲ್ಲೆಯಲ್ಲಿ ಬಲವಾದ ಗಾಳಿ ಮತ್ತು ಮಳೆಯ ನಡುವೆ ಗೋಡೆ ಹಾಗೂ ಸಿಮೆಂಟ್ ಶೆಡ್ ಕುಸಿದು 4 ಮಂದಿ ಮೃತಪಟ್ಟಿದ್ದಾರೆ. ಓಜಾ ಕಾ ಪೂರ್ವಾ ಗ್ರಾಮದಲ್ಲಿ ಸಿಮೆಂಟ್ ಶೆಡ್ ಕುಸಿದು ಭೀಮ್ ಯಾದವ್ ಮೃತಪಟ್ಟಿದ್ದು, ಸಾರಿ ಸ್ವಾಮಿ ಗ್ರಾಮದಲ್ಲಿ ಗೋಡೆ ಕುಸಿದು ಭೂಷಣ್ ಪಾಂಡೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾನ್ಪುರ್ ದೇಹತ್ ಜಿಲ್ಲೆಯಲ್ಲಿ ಮಳೆ ಮತ್ತು ಸಿಡಿಲಿಗೆ ಇಬ್ಬರು ಮೃತಪಟ್ಟಿದ್ದಾರೆ. ರಸುಲಾಬಾದ್ ಪ್ರದೇಶದಲ್ಲಿ ಮೇಕೆಗಳೊಂದಿಗೆ ಮರದ ಕೆಳಗೆ ನಿಂತಿದ್ದ 19 ವರ್ಷದ ರುಚಿ ಎಂಬ ಯುವತಿ ಸಿಡಿಲು ಬಡಿದು ಸಾವನ್ನಪ್ಪಿದ್ದು, ಹಲವಾರು ಮೇಕೆಗಳು ಕೂಡ ಮೃತಪಟ್ಟಿವೆ. ಸಮೀಪದಲ್ಲಿದ್ದ ವೃದ್ಧರೊಬ್ಬರು ಗಾಯಗೊಂಡಿದ್ದಾರೆ.
ದಿಯೋರಿಯಾದಲ್ಲಿ ಕೋಮಲ್ ಯಾದವ್ ಮತ್ತು ರಾಮನಾಥ್ ಪ್ರಸಾದ್ ಎಂಬ ಇಬ್ಬರು ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಸೋನ್ಭದ್ರ ಜಿಲ್ಲೆಯಲ್ಲಿ ಬಿರುಗಾಳಿಯ ವೇಳೆ ಮರದ ಕೆಳಗೆ ಸಿಲುಕಿ ಮಾಧವ್ ಸಿಂಗ್ ಸಾವನ್ನಪ್ಪಿದ್ದಾರೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜಿಲ್ಲಾ ಆಡಳಿತಾಧಿಕಾರಿಗಳು ತಕ್ಷಣ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸಂತ್ರಸ್ತರಿಗೆ ಅಗತ್ಯ ನೆರವು ಒದಗಿಸುವಂತೆ ಸೂಚಿಸಿದ್ದಾರೆ. ಕಂದಾಯ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಬೆಳೆ ಮತ್ತು ಆಸ್ತಿ ಹಾನಿಯ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಆದೇಶಿಸಲಾಗಿದೆ.