ವಿಜಯಪುರ, ಏಪ್ರಿಲ್ 09 : ಪ್ರವಾಸಕ್ಕೆ ಬಂದಿದ್ದ ಮೂವರು ನಗರದ ಹೊರವಲಯದಲ್ಲಿರುವ ಭೂತನಾಳ ಕೆರೆಯಲ್ಲಿ ಮುಳುಗಿ ಸಾವಿಗೀಡಾದ ದುರ್ಘಟನೆ ಬುಧವಾರ ಸಂಭವಿಸಿದೆ.
ಬೆಂಗಳೂರು ಆರ್.ಟಿ ನಗರದಿಂದ 14 ಮಂದಿ ಕುಟುಂಬಸ್ಥರು ಪ್ರವಾಸದ ನಿಮಿತ್ತ ವಿಜಯಪುರಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಭೂತನಾಳ ಕೆರೆಯನ್ನು ವೀಕ್ಷಿಸಲು ತೆರಳಿದ್ದರು. ನೀರಿನ ತೀರದಲ್ಲಿ ಆಟವಾಡುತ್ತಿದ್ದ ವೇಳೆ ಬಾಲಕನೊಬ್ಬ ಆಕಸ್ಮಿಕವಾಗಿ ನೀರಿಗೆ ಇಳಿದು ಮುಳುಗಿದ್ದಾನೆ.
ಬಾಲಕನನ್ನು ರಕ್ಷಿಸಲು ಮುಂದಾದ ಇನ್ನಿಬ್ಬರು ವ್ಯಕ್ತಿಗಳು ಕೂಡ ನೀರಿಗೆ ಇಳಿದಿದ್ದಾರೆ. ಆದರೆ ನೀರಿನ ಆಳ ಹಾಗೂ ಪ್ರವಾಹದ ಪರಿಣಾಮ ಮೂವರೂ ನಿಯಂತ್ರಣ ಕಳೆದುಕೊಂಡು ಮುಳುಗಿದ್ದಾರೆ ಎಂದು ತಿಳಿದುಬಂದಿದೆ.
ಸ್ಥಳೀಯರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ತಕ್ಷಣ ಶೋಧ ಕಾರ್ಯ ಕೈಗೊಂಡು ಮೂವರನ್ನೂ ಹೊರತೆಗೆದಿದ್ದಾರೆ. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಒಬ್ಬರು ಪ್ರಾಣ ಕಳೆದುಕೊಂಡರೆ, ಉಳಿದಿಬ್ಬರು ಸ್ಥಳದಲ್ಲೇ ಮೃತಪಟ್ಟಿರುವುದು ದೃಢಪಟ್ಟಿದೆ.
ಮೃತರನ್ನು ಮಹಮ್ಮದ್ ಹಯಾತ್ 12, ಅಬ್ದುಲ್ ಖುದ್ದುಸ 35 ಮತ್ತು ಹೈದರ್ ಪಾಶಾ 35 ಎಂದು ಗುರುತಿಸಲಾಗಿದೆ.
ಆದರ್ಶ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆಯ ಬಳಿಕ ಶವಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲು ಕ್ರಮ ಕೈಗೊಳ್ಳಲಾಗಿದೆ. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ದುರ್ಘಟನೆ ಕುಟುಂಬದಲ್ಲಿ ದುಃಖದ ವಾತಾವರಣ ಮೂಡಿಸಿದ್ದು, ಪ್ರವಾಸ ಕ್ಷಣಾರ್ಧದಲ್ಲಿ ಶೋಕಕ್ಕೆ ತಿರುಗಿದ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.









