ಚಿಕ್ಕಮಗಳೂರು, ಏ. 10 : ಚಂದ್ರದ್ರೋಣ ಪರ್ವತ ಶ್ರೇಣಿಯ ಮಾಣಿಕ್ಯಧಾರಾ ಜಲಪಾತದ ಬಳಿ ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದ ಕೇರಳ ಮೂಲದ 14 ವರ್ಷದ ಬಾಲಕಿ ಶ್ರೀನಂದಾ ಅವರ ಮೃತದೇಹ ಶುಕ್ರವಾರ ಪತ್ತೆಯಾಗಿದೆ.
ಮಾಧ್ಯಮಗಳಿಗೆ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರಕುಮಾರ ಡಯಮಾ, ಕೇರಳದಿಂದ ಚಾರಣಕ್ಕೆ ಬಂದಿದ್ದ ಬಾಲಕಿ ಏಪ್ರಿಲ್ 7ರಂದು ತಂಡದಿಂದ ಬೇರ್ಪಟ್ಟ ನಂತರ ಕಾಣೆಯಾಗಿದ್ದು, ಇದೀಗ ಮಾಣಿಕ್ಯಧಾರಾ ಪ್ರದೇಶದ ಆಳವಾದ ಪ್ರಪಾತದಲ್ಲಿ ಮೃತಾವಸ್ಥೆಯಲ್ಲಿ ಪತ್ತೆಯಾಗಿರುವುದಾಗಿ ತಿಳಿಸಿದ್ದಾರೆ.
ಸುಮಾರು 2 ಸಾವಿರ ಅಡಿ ಆಳದ ಕಂದಕದಲ್ಲಿ ಶವ ಪತ್ತೆಯಾಗಿದ್ದು, ಕೇರಳದಿಂದ ಆಗಮಿಸಿದ್ದ ಸುಮಾರು 40 ಜನರ ಪ್ರವಾಸಿ ತಂಡದಲ್ಲಿ ಬಾಲಕಿ ಕೂಡ ಸೇರಿದ್ದಳು. ಇನಾಮು ದತ್ತಾತ್ರೇಯ ಪೀಠ ಹಾಗೂ ಮಾಣಿಕ್ಯಧಾರಕ್ಕೆ ಭೇಟಿ ನೀಡಿದ ವೇಳೆ ಆಕೆ ಹಠಾತ್ತಾಗಿ ನಾಪತ್ತೆಯಾಗಿದ್ದಳು.
ಘಟನೆ ಬಳಿಕ ಪೊಲೀಸರು ವ್ಯಾಪಕ ಶೋಧ ಕಾರ್ಯಾಚರಣೆ ನಡೆಸಿದ್ದು, ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ, ಅಗ್ನಿಶಾಮಕ ದಳ ಹಾಗೂ ಅರಣ್ಯ ನಕ್ಸಲ್ ನಿಗ್ರಹ ದಳದ ತಂಡಗಳು ಸೇರಿ ಶೋಧ ಕಾರ್ಯದಲ್ಲಿ ತೊಡಗಿದ್ದವು. ದಟ್ಟ ಅರಣ್ಯ ಮತ್ತು ಕಡಿದಾದ ಪರ್ವತ ಪ್ರದೇಶ ಇರುವುದರಿಂದ ಡ್ರೋನ್ ಮತ್ತು ತಾಪಮಾನ ಸಂವೇದಕ ಉಪಕರಣಗಳನ್ನು ಬಳಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸತತ ಮೂರು ದಿನಗಳ ತೀವ್ರ ಶೋಧದ ನಂತರ ಪ್ರಪಾತದ ಅಡಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಕಾಲು ಜಾರಿ ಬಿದ್ದು ಸಾವನ್ನಪ್ಪಿರುವ ಸಾಧ್ಯತೆ ಕುರಿತು ಪರಿಶೀಲನೆ ನಡೆಯುತ್ತಿದೆ. ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.









