ಹಾಸನ, ಸೆ. 15 : ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಹಾಗೂ ಅವ್ಯವಹಾರಗಳಿಗೆ ಸಂಬಂಧಿಸಿದ ದಾಖಲೆಗಳನ್ನು ವಿಜಯದಶಮಿಯಿಂದ ಒಂದೊಂದಾಗಿ ಬಹಿರಂಗಪಡಿಸುವುದಾಗಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ‘ವಿಜಯದಶಮಿ ಯುದ್ಧ ಆರಂಭಿಸಲು ಪ್ರಶಸ್ತ ಕಾಲ. ಅಂದಿನಿಂದ ಪ್ರಾರಂಭ ಮಾಡುತ್ತೇನೆ. ಮಾಧ್ಯಮದವರಿಗೂ ಒಳ್ಳೆಯ ಆಹಾರ ನೀಡುತ್ತೇನೆ’ ಎಂದು ಅವರು ಹೇಳಿದ್ದಾರೆ.
ಅಮೆರಿಕ ಪ್ರವಾಸ ಮುಗಿಸಿ ವಾಪಸಾದ ಕುಮಾರಸ್ವಾಮಿ ಹಾಸನದಲ್ಲಿ ತಮ್ಮ ತಾಯಿ ಚೆನ್ನಮ್ಮ ಅವರ ಸಮಾಧಿಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಅಮೆರಿಕಕ್ಕೆ ತೆರಳುವ ಮುನ್ನ ‘ಇಡೀ ದೇಶವೇ ಅಲ್ಲೋಲ ಕಲ್ಲೋಲವಾಗುವಂತಹ ವಿಷಯ ಬಹಿರಂಗಪಡಿಸುತ್ತೇನೆ’ ಎಂದು ನೀಡಿದ್ದ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ ಎಂದರು.
ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ಜನರ ಮುಂದಿಡುವುದರಲ್ಲಿ ಯಾವುದೇ ರಾಜಿ ಇಲ್ಲ. ಕೆಪಿಎಸ್ಸಿ ಹಾಗೂ ಎಇಇ ನೇಮಕಾತಿ ಹಗರಣಗಳು ಸರ್ಕಾರದ ಸಚಿವರ ಅಡಿಯಲ್ಲಿಯೇ ನಡೆದಿವೆ. ಲಕ್ಷಾಂತರ ಯುವಕರ ಭಾವನೆಗಳೊಂದಿಗೆ ಆಟವಾಡಿ ಹಣ ವಸೂಲಿ ಮಾಡಲಾಗಿದೆ ಎಂಬುದಕ್ಕೆ ದಾಖಲೆಗಳಿವೆ. ಅವುಗಳನ್ನು ಜನರ ಮುಂದಿಡುವುದು ನನ್ನ ಜವಾಬ್ದಾರಿ, ಅಂತಿಮ ತೀರ್ಮಾನ ಜನರದ್ದು ಎಂದು ಹೇಳಿದರು.
ನನ್ನ ಬಳಿ ಇರುವ ಪೆನ್ಡ್ರೈವ್ ಬೇರೆ
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ತೋರಿಸಿರುವ ಪೆನ್ಡ್ರೈವ್ಗೂ ತಮ್ಮ ಬಳಿ ಇರುವ ದಾಖಲೆಗಳಿಗೂ ಸಂಬಂಧವಿಲ್ಲ. ‘ನಾನು ಖಾಲಿ ಪೆನ್ಡ್ರೈವ್ ತೋರಿಸಿಕೊಂಡು ಸುತ್ತಾಡುತ್ತಿಲ್ಲ. ಕಾಂಗ್ರೆಸ್ನ ಅಕ್ರಮಗಳನ್ನು ಸೂಕ್ತ ಸಮಯದಲ್ಲಿ ಬಹಿರಂಗಪಡಿಸುವಂತೆ ಕೆಲವು ಸ್ನೇಹಿತರು ದಾಖಲೆಗಳನ್ನು ನೀಡಿದ್ದಾರೆ’ ಎಂದು ಕುಮಾರಸ್ವಾಮಿ ಹೇಳಿದರು.
ತಮ್ಮ ಬಳಿ ಇರುವ ಪೆನ್ಡ್ರೈವ್ನಲ್ಲಿ ಡಿ.ಕೆ. ಶಿವಕುಮಾರ ಅವರಿಗೆ ಸಂಬಂಧಿಸಿದ ವಿಷಯಗಳಿವೆ ಎಂದು ಹೇಳಿದ ಅವರು, ಬಿಡದಿ, ನೈಸ್ ಹಾಗೂ ಕೆಪಿಎಸ್ಸಿ ವಿಚಾರಗಳನ್ನು ಪ್ರಸ್ತಾಪಿಸಿದ ಬಳಿಕ ಪ್ರಜ್ವಲ್ ರೇವಣ್ಣ ಮತ್ತು ಪೆನ್ಡ್ರೈವ್ ಪ್ರಕರಣಗಳು ಮತ್ತೆ ಮುನ್ನಲೆಗೆ ಬಂದಿರುವುದೇಕೆ ಎಂದು ಪ್ರಶ್ನಿಸಿದರು.
ಸತೀಶ ಜಾರಕಿಹೊಳಿ ನನ್ನನ್ನು ಭೇಟಿಯಾಗಿಲ್ಲ
ಸಚಿವ ಸತೀಶ ಜಾರಕಿಹೊಳಿ ತಮ್ಮನ್ನು ಭೇಟಿ ಮಾಡಿದ್ದಾರೆ ಎಂಬ ಮಾತನ್ನು ಕುಮಾರಸ್ವಾಮಿ ನಿರಾಕರಿಸಿದರು. ‘ಅವರು ನನ್ನನ್ನು ಭೇಟಿ ಮಾಡಿಲ್ಲ. ಆದರೆ ಅವರ ಪಕ್ಷದೊಳಗೆ ಏನೇನು ನಡೆಯುತ್ತಿದೆ ಎಂಬುದನ್ನು ಅವರೇ ಹೇಳಿದ್ದಾರೆ. ತಮ್ಮ ವಿರುದ್ಧ ಯಾರೋ ದೂರು ನೀಡಿದ್ದಾರೆ ಎಂಬುದನ್ನೂ ಅವರು ಹೇಳಿದ್ದಾರೆ’ ಎಂದರು.
ಸತೀಶ ಜಾರಕಿಹೊಳಿ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಎಂಬ ಚರ್ಚೆಯ ನಡುವೆಯೇ ಅವರನ್ನು ರಾಜಕೀಯವಾಗಿ ಮುಗಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದ ಕುಮಾರಸ್ವಾಮಿ, ರಾಜಣ್ಣ ಮತ್ತು ರಮೇಶ್ ಜಾರಕಿಹೊಳಿ ಬಳಿಕ ಈಗ ಸತೀಶ ಜಾರಕಿಹೊಳಿ ಸರದಿ ಬಂದಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಇನ್ನೂ ಕೆಲವು ಜನರ ಮನೆಗಳ ಮೇಲೆ ದಾಳಿ ನಡೆಯಲಿದೆ ಎಂದು ಹೇಳಿರುವುದನ್ನು ಪ್ರಸ್ತಾಪಿಸಿದ ಕುಮಾರಸ್ವಾಮಿ, ಆ ಮಾಹಿತಿ ಮುಖ್ಯಮಂತ್ರಿಗೆ ಹೇಗೆ ದೊರೆಯಿತು ಎಂಬುದನ್ನು ಅವರೇ ಬಹಿರಂಗಪಡಿಸಬೇಕು. ಕಾಂಗ್ರೆಸ್ನವರೇ ದೂರು ನೀಡಿದ್ದರೆ ಅದನ್ನೂ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ಡಿ.ಕೆ. ಶಿವಕುಮಾರ ವಿರುದ್ಧವೂ ತೀವ್ರ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ರಾಜ್ಯ ಸರ್ಕಾರದ ಅಕ್ರಮಗಳಿಗೆ ಸಂಬಂಧಿಸಿದ ತಮ್ಮ ಬಳಿಯ ದಾಖಲೆಗಳನ್ನು ಸೂಕ್ತ ಸಮಯದಲ್ಲಿ ಜನರ ಮುಂದೆ ಇಡುವುದಾಗಿ ಪುನರುಚ್ಚರಿಸಿದರು.