ಚಿತ್ರದುರ್ಗ, ಮೇ 9 : ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ 5 ದಶಕಗಳ ಸಾರ್ವಜನಿಕ ಜೀವನ ಹಾಗೂ ಹೋರಾಟ ಯುವಜನತೆಗೆ ಮಾದರಿಯಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ ಶಾ ಹೇಳಿದರು.
ಚಿತ್ರದುರ್ಗದಲ್ಲಿ ನಡೆದ ಬಿಎಸ್ವೈ ಅಭಿಮಾನೋತ್ಸವ ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಅವರನ್ನು ಅಭಿನಂದಿಸಿ ಮಾತನಾಡಿದ ಅವರು, ಕೆಂದಾವರೆ-ಕಮಲ ಅರಳಿದ ಕಥೆ ಮತ್ತು ಸದನ ಶಿಕಾರಿ-ಯಡಿಯೂರಪ್ಪನವರ ಗುಡುಗಿನ ನುಡಿಗಳು ಪುಸ್ತಕಗಳನ್ನು ಬಿಡುಗಡೆ ಮಾಡಿದರು.
ಇರುವ ರಸ್ತೆಯಲ್ಲೇ ಸಾಗುವವರು ಕೆಲವರು ಇದ್ದರೆ, ಹೊಸ ದಾರಿ ತೋರಿಸುವ ನಾಯಕರು ಕೆಲವರು ಇರುತ್ತಾರೆ. ಯಡಿಯೂರಪ್ಪ ಅವರು ಹೊಸ ದಾರಿಯನ್ನು ನಿರ್ಮಿಸಿದ ನಾಯಕರಾಗಿ ಹೊರಹೊಮ್ಮಿದ್ದಾರೆ ಎಂದು ಅಮಿತ್ ಶಾ ಹೇಳಿದರು.
ಸಾಧಾರಣ ಕುಟುಂಬದಿಂದ ಬಂದ ಯಡಿಯೂರಪ್ಪ ಅವರ ಇಚ್ಛಾಶಕ್ತಿ, ಸಂಘದ ಸಂಸ್ಕಾರ ಹಾಗೂ ರಾಷ್ಟ್ರಭಕ್ತಿ ಜೀವನದುದ್ದಕ್ಕೂ ಅವರಿಗೆ ಮಾರ್ಗದರ್ಶನ ನೀಡಿದೆ. ಬಸ್ ಸಿಗದ ಸಂದರ್ಭಗಳಲ್ಲಿ ಸೈಕಲ್ನಲ್ಲಿ ಹಳ್ಳಿಗಳಿಗೆ ತೆರಳಿ ಬಿಜೆಪಿಯನ್ನು ಸಂಘಟಿಸಿದವರು ಅವರು ಎಂದು ಶಾ ಸ್ಮರಿಸಿದರು.
ಸಾವಿರಾರು ಕಿಲೋಮೀಟರ್ ಪಾದಯಾತ್ರೆ ನಡೆಸಿ ರೈತರ ಪರ ಹೋರಾಟ ಮಾಡಿದರು. ಈ ಮೂಲಕ ರೈತ ನಾಯಕರಾಗಿ ಗುರುತಿಸಿಕೊಂಡರು. ರೈತರ ಪರ ಹೋರಾಟದ ಕಾರಣ ಜೈಲು ಶಿಕ್ಷೆಯನ್ನೂ ಅನುಭವಿಸಿದರು ಎಂದು ಹೇಳಿದರು.
ಪಶ್ಚಿಮ ಬಂಗಾಳದಲ್ಲಿ ಇಂದು ಬಿಜೆಪಿ ಮುಖ್ಯಮಂತ್ರಿಯ ಪದಗ್ರಹಣ ನಡೆಯುತ್ತಿರುವ ದಿನವೇ ಯಡಿಯೂರಪ್ಪ ಅವರ 50 ವರ್ಷದ ರಾಜಕೀಯ ಸೇವೆಯನ್ನು ಗೌರವಿಸುವ ಕಾರ್ಯಕ್ರಮ ನಡೆಯುತ್ತಿರುವುದು ವಿಶೇಷ. ವಿವೇಕಾನಂದರು ಮತ್ತು ಶ್ಯಾಮಪ್ರಸಾದ್ ಮುಖರ್ಜಿ ಜನಿಸಿದ ನಾಡಿನಲ್ಲಿ ಹೊಸ ಶಕೆ ಆರಂಭವಾಗಿದೆ ಎಂದು ಅಮಿತ್ ಶಾ ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಸಿ.ಟಿ. ರವಿ ಅವರು ಯಡಿಯೂರಪ್ಪ ಅವರ 50 ವರ್ಷದ ರಾಜಕೀಯ ಹಾಗೂ ಜನಸೇವಾ ಸಾಧನೆಗಳನ್ನು ವಿವರಿಸಿದರು. ಬಳಿಕ ಯಡಿಯೂರಪ್ಪ ಅವರನ್ನು ಸನ್ಮಾನಿಸಲಾಯಿತು.
ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್, ವಿವಿಧ ಗಣ್ಯರು ಹಾಗೂ ಸ್ವಾಮೀಜಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.