ವರಂಗಲ್ (ತೆಲಂಗಾಣ), ಜೂ. 22: ಆಹಾರ ಪದಾರ್ಥಗಳ ಗುಣಮಟ್ಟ ಹಾಗೂ ಪ್ಯಾಕಿಂಗ್ ವ್ಯವಸ್ಥೆಯ ಮೇಲಿನ ಪ್ರಶ್ನೆಗಳನ್ನು ಮತ್ತೆ ಮುನ್ನೆಲೆಗೆ ತಂದಿರುವ ಘಟನೆ ತೆಲಂಗಾಣದ ವರಂಗಲ್ನಲ್ಲಿ ಬೆಳಕಿಗೆ ಬಂದಿದೆ. ಖರೀದಿಸಿದ್ದ ಮೊಸರು ಪ್ಯಾಕೆಟ್ನೊಳಗೆ ಸತ್ತ ಇಲಿಯ ಮರಿ ಪತ್ತೆಯಾಗಿದ್ದು, ಗ್ರಾಹಕರು ಹಾಗೂ ಸ್ಥಳೀಯರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ನಗರದ ಎಸ್ಆರ್ಆರ್ ತೋಟದ ಸಮೀಪದ ಕಿರಾಣಿ ಅಂಗಡಿಯೊಂದರಿಂದ ಗ್ರಾಹಕರೊಬ್ಬರು ‘ಸಂಗಂ’ ಬ್ರಾಂಡ್ನ ಮೊಸರು ಪ್ಯಾಕೆಟ್ ಖರೀದಿಸಿದ್ದರು. ಮನೆಗೆ ತೆರಳಿ ಅಡುಗೆಗಾಗಿ ಪ್ಯಾಕೆಟ್ನ್ನು ತೆರೆದಾಗ ಅದರೊಳಗೆ ಸತ್ತ ಇಲಿಯ ಮರಿ ಕಂಡುಬಂದಿದ್ದು, ಗ್ರಾಹಕ ಆಘಾತಕ್ಕೊಳಗಾಗಿದ್ದಾರೆ.
ಘಟನೆಯ ಬಳಿಕ ಅವರು ಮೊಸರು ಪ್ಯಾಕೆಟ್ನ್ನು ತೆಗೆದುಕೊಂಡು ಅಂಗಡಿಗೆ ತೆರಳಿ ಮಾಲೀಕರನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಅಂಗಡಿ ಮಾಲೀಕ ಮತ್ತು ಗ್ರಾಹಕರ ನಡುವೆ ವಾಗ್ವಾದ ನಡೆದಿದ್ದು, ವಿಷಯ ತಿಳಿದು ಸ್ಥಳೀಯರು ಕೂಡ ಸ್ಥಳಕ್ಕೆ ಆಗಮಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬ್ರಾಂಡೆಡ್ ಆಹಾರ ಉತ್ಪನ್ನಗಳಲ್ಲಿಯೂ ಇಂತಹ ಗಂಭೀರ ನಿರ್ಲಕ್ಷ್ಯ ಕಂಡುಬರುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಜನರ ಆರೋಗ್ಯದೊಂದಿಗೆ ಆಟವಾಡುವಂತಹ ಘಟನೆಗಳನ್ನು ಸಹಿಸಲು ಸಾಧ್ಯವಿಲ್ಲ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಆಹಾರ ಸುರಕ್ಷತಾ ಅಧಿಕಾರಿಗಳಿಗೆ ದೂರು ಸಲ್ಲಿಸಲಾಗಿದ್ದು, ಪ್ರಕರಣದ ಕುರಿತು ತನಿಖೆ ನಡೆಸುವಂತೆ ಒತ್ತಾಯಿಸಲಾಗಿದೆ. ಆಹಾರ ಉತ್ಪನ್ನಗಳ ಉತ್ಪಾದನೆ, ಪ್ಯಾಕಿಂಗ್ ಹಾಗೂ ಗುಣಮಟ್ಟ ನಿಯಂತ್ರಣದಲ್ಲಿ ಲೋಪ ಎಸಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಗ್ರಾಹಕರು ಆಗ್ರಹಿಸಿದ್ದಾರೆ.
ಪ್ಯಾಕೆಟ್ ಆಹಾರ ಪದಾರ್ಥಗಳ ಸುರಕ್ಷತೆ ಕುರಿತು ಸಾರ್ವಜನಿಕರಲ್ಲಿ ಮತ್ತೊಮ್ಮೆ ಆತಂಕ ಮೂಡಿಸಿರುವ ಈ ಘಟನೆ, ಆಹಾರ ಉತ್ಪಾದನಾ ಸಂಸ್ಥೆಗಳ ಜವಾಬ್ದಾರಿ ಮತ್ತು ಗುಣಮಟ್ಟ ನಿಯಂತ್ರಣ ವ್ಯವಸ್ಥೆಯ ಬಗ್ಗೆ ಪ್ರಶ್ನೆಗಳನ್ನು ಎಬ್ಬಿಸಿದೆ.