ಪೋಸ್ಟರಗಳಲ್ಲಿ ಅಣ್ಣಾ ಹಝಾರೆ ನಿದ್ರಿಸುತ್ತಿರುವ ಫೋಟೋ ಇತ್ತು. ಅಣ್ಣಾ ಹಜಾರೆ ಅವರಿಗೆ “ಎದ್ದೇಳುವಂತೆ” ಮತ್ತು ಬಿಜೆಪಿ ಮತ್ತು ಭಾರತೀಯ ಚುನಾವಣಾ ಆಯೋಗದ ವಿರುದ್ಧ ವಿರೋಧ ಪಕ್ಷಗಳು ಮಾಡಿರುವ ‘ಮತ ಕಳ್ಳತನ’ ಆರೋಪಗಳ ಬಗ್ಗೆ ಧ್ವನಿ ಎತ್ತುವಂತೆ ಪೋಸ್ಟರಗಳಲ್ಲಿ ಆಗ್ರಹಿಸಲಾಗಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟರ್ಗಳ ವೀಡಿಯೊಗಳು ವೈರಲ್ ಆಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅಣ್ಣಾ ಹಜಾರೆ, ವ್ಯವಸ್ಥೆಯಲ್ಲಿ ಭ್ರಷ್ಟಾಚಾರವನ್ನು ನಿಗ್ರಹಿಸಲು ಆರ್ಟಿಐ ಮತ್ತು ಲೋಕಪಾಲ್ನಂತಹ 10 ಕಾನೂನುಗಳನ್ನು ಜಾರಿಗೆ ತರಲು ನಾನು ಹೋರಾಟ ನಡೆಸಿದೆ. ಯುವಕರು ಈ ಬಗ್ಗೆ ಮಾತನಾಡಬೇಕು. 90ನೇ ವಯಸ್ಸಿನಲ್ಲಿ ನಾನು ಮತ್ತೊಂದು ಆಂದೋಲನವನ್ನು ಮುನ್ನಡೆಸಬೇಕೆಂದು ನಿರೀಕ್ಷಿಸುತ್ತಿರುವುದರಿಂದ ನನಗೆ ಬೇಸರವಾಗಿದೆ ಎಂದು ಹೇಳಿದರು.
ಮತ ಕಳ್ಳತನದ ಆರೋಪಗಳ ಕುರಿತು ಅಣ್ಣಾ ಹಜಾರೆಯ ಮೌನವನ್ನು ಪ್ರತಿಪಕ್ಷಗಳು ಪ್ರಶ್ನಿಸಿದೆ. ಮಹಾರಾಷ್ಟ್ರ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಹರ್ಷವರ್ಧನ್ ಸಪ್ಕಲ್ ಈ ಕುರಿತು ಪ್ರತಿಕ್ರಿಯಿಸಿ, ನಾವು ಸರಕಾರದ ವಿರುದ್ಧದ ಪ್ರಸ್ತುತ ವಿಷಯಗಳ ಬಗ್ಗೆ ಹಝಾರೆಯವರ ಮೌನವನ್ನು ಸ್ಪಷ್ಟವಾಗಿ ಅನುಮಾನಿಸುತ್ತೇವೆ ಎಂದು ಹೇಳಿದರು.
“ಅವರು ಯುಪಿಎ ವಿರುದ್ಧ ಆಂದೋಲನಗಳನ್ನು ನಡೆಸಿದರು. ಅವರ ತಂಡದ ಕೆಲವು ಸದಸ್ಯರು ನಂತರ ಮುಖ್ಯಮಂತ್ರಿಗಳು ಮತ್ತು ಲೆಫ್ಟಿನೆಂಟ್ ಗವರ್ನರ್ಗಳಾದರು. ಈಗ ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವವನ್ನು ಉಳಿಸುವುದು ಸವಾಲಾದಾಗ ಅವರು ಗಾಢ ನಿದ್ರೆಗೆ ಜಾರಿದ್ದಾರೆ” ಎಂದು ಹರ್ಷವರ್ಧನ್ ಹೇಳಿದರು.
ಶರದ ಪವಾರ್ ನೇತೃತ್ವದ ಎನ್ಸಿಪಿ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದು ಅಣ್ಣಾ ಅಜಾರೆ ಈ ಬಗ್ಗೆ ಮಾತನಾಡಬೇಕೆಂದು ಒತ್ತಾಯಿಸಿದೆ.
ಯುಪಿಎ ಸರಕಾರದ ಅವಧಿಯಲ್ಲಿ, ಹಜಾರೆ ರಾಷ್ಟ್ರವ್ಯಾಪಿ ಆಂದೋಲನವನ್ನು ನಡೆಸಿದರು. ಆದರೆ ಬಿಜೆಪಿ ಸರಕಾರದ ಭಾಗವಾಗಿದ್ದಾಗ ಅವರು ಮೌನವಾಗಿದ್ದಾರೆ. ಕೇಂದ್ರವು ಬೆರಳೆಣಿಕೆಯಷ್ಟು ಜನರಿಗೆ ಅನುಕೂಲವಾಗುವಂತೆ ದೇಶದ ಆಸ್ತಿಗಳನ್ನು ಮಾರಾಟ ಮಾಡುತ್ತಿದೆ ಮತ್ತು ಮತ ಕಳ್ಳತನದಲ್ಲಿ ತೊಡಗಿದೆ. ಅಣ್ಣಾ ಹಝಾರೆಯ ಮೌನವು ಅನುಮಾನಗಳನ್ನು ಹುಟ್ಟುಹಾಕಿದೆ. ಅದಕ್ಕಾಗಿಯೇ ಜನರು ಅವರನ್ನು ಪ್ರಶ್ನಿಸುತ್ತಿದ್ದಾರೆ ಎಂದು ಎನ್ಸಿಪಿ ನಾಯಕ ಪ್ರಶಾಂತ ಜಗ್ತಾಪ ಈ ಕುರಿತು ಪ್ರತಿಕ್ರಿಯಿಸಿದರು.

