ಮುಂದಿನ ಅಧಿವೇಶನ ವೇಳೆಗೆ ಪತ್ರಿಕಾ ಭವನ ಲೋಕಾರ್ಪಣೆ: ಸತೀಶ ಜಾರಕಿಹೊಳಿ

A B Dharwadkar
ಮುಂದಿನ ಅಧಿವೇಶನ ವೇಳೆಗೆ ಪತ್ರಿಕಾ ಭವನ ಲೋಕಾರ್ಪಣೆ: ಸತೀಶ ಜಾರಕಿಹೊಳಿ

ಬೆಳಗಾವಿ, 25 : ಬೆಳಗಾವಿ ನಗರದಲ್ಲಿ ಸುಸಜ್ಜಿತ ಪತ್ರಿಕಾ ಭವನ ನಿರ‍್ಮಾಣಕ್ಕೆ ಬಹುದಿನಗಳಿಂದ ಇದ್ದ ಬೇಡಿಕೆಗೆ ಪರಿಹಾರ ದೊರೆತಿದ್ದು, ಲೋಕೋಪಯೋಗಿ ಇಲಾಖೆಯ ಮೂಲಕ 9.9 ಕೋಟಿ ರೂಪಾಯಿ ಅನುದಾನ ಮಂಜೂರಾಗಿದೆ. ಮುಂದಿನ ಚಳಿಗಾಲ ಅಧಿವೇಶನ ವೇಳೆಗೆ ಭವನದ ಲೋಕಾರ್ಪಣೆಯನ್ನು ನಡೆಸುವುದಾಗಿ ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಭರವಸೆ ನೀಡಿದರು.

ನಗರದ ವಾರ್ತಾ ಭವನದಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ಪತ್ರಕರ್ತರಿಂದ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿ, ಪತ್ರಿಕಾಭವನ ನಿರ‍್ಮಾಣಕ್ಕೆ ದಶಕಗಳಿಂದ ಪ್ರಯತ್ನ ನಡೆದರೂ ಸಾಧ್ಯವಾಗಿರಲಿಲ್ಲ. ಈಗ ನಮ್ಮ ಅಧಿಕಾರದ ಅವಧಿಯಲ್ಲಿ ಪತ್ರಿಕಾ ಭವನ ಮಂಜೂರು ಆಗಿರುವುದು ಸಂತಸದ ವಿಷಯವಾಗಿದೆ ಎಂದರು.

ರಾಯಬಾಗ, ಗೋಕಾಕ ಸೇರಿದಂತೆ ಇತರೆ ತಾಲೂಕುಗಳಲ್ಲಿ ವಕೀಲರ ಸಂಘದ ಕಟ್ಟಡ ನಿರ‍್ಮಾಣಕ್ಕೆ ಹತ್ತು ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಲೋಳಸೂರು, ಖಾನಾಪೂರ ಸೇತುವೆ ಸೇರಿದಂತೆ ರಾಜ್ಯದಲ್ಲಿ ಅಗತ್ಯವಿರುವ ಕಡೆಗಳಲ್ಲಿ ಸೇತುವೆ ನಿರ‍್ಮಾಣಕ್ಕಾಗಿ ಕ್ರಮ ವಹಿಸಲಾಗಿದೆ. ರಾಜ್ಯದ ವಿವಿಧೆಡೆ ಸೇತುವೆಗಳ ನಿರ‍್ಮಾಣಕ್ಕೆ ಎರಡು ಸಾವಿರ ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಸರ್ಕಾರ ಇಲಾಖೆಗೆ ನೀಡಿದ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಇದಕ್ಕೂ ಮುಂಚೆ ಅಭಿನಂದನೆ ಸಲ್ಲಿಸಿ ಹಿರಿಯ ಪತ್ರಕರ್ತರಾದ ರಿಷಿಕೇಶ ಬಹಾದ್ದೂರ ದೇಸಾಯಿ ಮಾತನಾಡಿ, ಬೆಳಗಾವಿ ಜಿಲ್ಲೆ ಬಹಳ ದೊಡ್ಡ ಜಿಲ್ಲೆಯಾಗಿದ್ದು, ಎಲ್ಲ ಪತ್ರಕರ್ತರು ಪತ್ರಿಕಾ ಭವನ ಸದ್ಬಳಕೆ ಮಾಡಿಕೊಂಡು ಒಗ್ಗಟ್ಟಿನಿಂದ ಮುನ್ನಡೆಯಬೇಕು. ಭವಿಷ್ಯದಲ್ಲಿ ಬರುವ ತಂತ್ರಜ್ಞಾನ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಈಗಾಗಲೇ ಕೃತಕ ಬುದ್ಧಿಮತ್ತೆ ವಿಶ್ವದಾದ್ಯಂತ ಲಗ್ಗೆ ಇಟ್ಟಿದ್ದು, ಪತ್ರಿಕೋದ್ಯಮ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲಿ ಪ್ರಾಬಲ್ಯ ಸಾಧಿಸುತ್ತಿದೆ. ಇದರ ಬಳಕೆ ಮೂಲಕ ಎಲ್ಲರೂ ತಾಂತ್ರಿಕವಾಗಿ ಅರಿವು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಮೆಹಬೂಬ ಮಕಾನದಾರ ಮಾತನಾಡಿ, ಅನೇಕ ಸರ‍್ಕಾರಗಳು ಬಂದರೂ ಪತ್ರಿಕಾ ಭವನ ನಿರ‍್ಮಾಣ ಸಾಧ್ಯವಾಗಿರಲಿಲ್ಲ. ಸ್ವಲ್ಪ ತಡವಾದರೂ ಸಹ ಜಿಲ್ಲೆಯ ಪತ್ರಕರ್ತರ ನಿರೀಕ್ಷೆಗೂ ಮೀರಿ ಪತ್ರಿಕಾ ಭವನ ನಿರ‍್ಮಾಣಕ್ಕೆ ಅನುದಾನ ನೀಡಿರುವುದು ಎಲ್ಲರಿಗೂ ಸಂತಸದ ವಿಷಯವಾಗಿದೆ ಎಂದು ಜಿಲ್ಲಾ ಉಸ್ತವಾರಿ ಸಚಿವರಿಗೆ ಅಭಿನಂದನೆ ಸಲ್ಲಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕ ಗುರುನಾಥ ಕಡಬೂರ ಅವರು, ರಾಜ್ಯದ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿಯಲ್ಲಿ ಸುಸಜ್ಜಿತವಾದ ಪತ್ರಿಕಾಭವನ ನಿರ್ಮಿಸಬೇಕು ಎಂಬುದು ಮಾಧ್ಯಮ ಪ್ರತಿನಿಧಿಗಳ ಬಹುದಿನಗಳ ಕನಸಾಗಿತ್ತು. ಈ ನಿಟ್ಟಿನಲ್ಲಿ ಸತತ ಪ್ರಯತ್ನಗಳು ನಡದೇ ಇದ್ದವು. ನಿವೇಶನ ಸಮಸ್ಯೆ, ಅನುದಾನ ಕೊರತೆ ಹೀಗೆ ಒಂದಿಲ್ಲೊಂದು ಕಾರಣಕ್ಕೆ ಪತ್ರಿಕಾಭವನ ನಿರ‍್ಮಾಣ‌ಕ್ಕೆ ಕಾಲ ಕೂಡಿಬಂದಿರಲಿಲ್ಲ. ಇದೀಗ ಕನಸು ನನಸಾಗುತ್ತಿದೆ ಎಂದರು.

ಎಲ್ಲ ಮಾಧ್ಯಮ ಪ್ರತಿನಿಧಿಗಳ ಒಕ್ಕೊರಲಿನ ಮನವಿಗೆ ಸ್ಪಂದಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು, ತಮ್ಮ ಲೋಕೋಪಯೋಗಿ ಇಲಾಖೆಯ ವತಿಯಿಂದ ಬೆಳಗಾವಿ ನಗರದಲ್ಲಿ 9.90 ಕೋಟಿ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತವಾದ “ಪತ್ರಿಕಾಭವನ” ನಿರ‍್ಮಾಣಕ್ಕೆ ಅನುಮೋದನೆ ನೀಡಿರುತ್ತಾರೆ ಎಂದು ವಿವರಿಸಿ, ಈ ಹಿನ್ನೆಲೆಯಲ್ಲಿ ಸತೀಶ ಜಾರಕಿಹೊಳಿ ಅವರನ್ನು ಬೆಳಗಾವಿಯ ಸಮಸ್ತ ಮಾಧ್ಯಮ/ಪತ್ರಿಕಾ ಬಳಗದ ವತಿಯಿಂದ ಅಭಿನಂದನೆ ಸಲ್ಲಿಸುತ್ತೇನೆ ಎಂದು ಕಡಬೂರ ಹೇಳಿದರು.

ವಿವಿಧ ದಿನಪತ್ರಿಕೆಗಳ ಸಂಪಾದಕರು, ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳ ವರದಿಗಾರರು, ಛಾಯಾಗ್ರಾಹಕರು ಹಾಗೂ ವಾರ್ತಾ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.