ನವದೆಹಲಿ : ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತಗಳ್ಳತನ ಆರೋಪಕ್ಕೆ ಸಂಬಂಧಿಸಿದಂತೆ ಇಲ್ಲಿ, ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಈ ವೇಳೆ ಸಾಕಷ್ಟು ಮತಗಳ್ಳತನದ ಆರೋಪ ಮಾಡಿದ್ದಾರೆ.
ಕರ್ನಾಟಕದ ಮತಗಳ್ಳತನದ ಬಗ್ಗೆ ಮಾತನಾಡಿದ್ದು, ಆಳಂದದಲ್ಲಿ ಒಟ್ಟು 6,018 ಮತಗಳನ್ನು ಕಳ್ಳತನ ಮಾಡಲಾಗಿದೆ ಎಂದು ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.
ರಾಹುಲ್ ಗಾಂಧಿ ಅವರು ತಮ್ಮ ಪತ್ರಿಕಾಗೋಷ್ಠಿಯಲ್ಲಿ ಮತದಾರರ ಪಟ್ಟಿಯಿಂದ ಕೈಬಿಡಲಾದ ಮತದಾರರನ್ನು ವೇದಿಕೆ ಮೇಲೆ ಪರಿಚಯಿಸಿದ್ದಾರೆ. ಮೊದಲು ಗೋದಾಭಾಯಿ ಎಂಬ ಮಹಿಳೆಯ ಹೇಳಿಕೆಯ ವಿಡಿಯೋ ಪ್ರದರ್ಶಿಸಿದ ರಾಹುಲ್ ಗಾಂಧಿ, ಆ ನಂತರ, ಮತದಾರರ ಪಟ್ಟಿಯಿಂದ ಕೈಬಿಡಲಾದ ವ್ಯಕ್ತಿ ಮತ್ತು ಓರ್ವ ಯುವತಿಯನ್ನು ನೇರವಾಗಿ ಪರಿಚಯಿಸಿದರು.
2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಆಳಂದ ಕ್ಷೇತ್ರದಲ್ಲಿ 6,018 ಮಂದಿಯ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕುವ ಪ್ರಯತ್ನ ನಡೆದಿದೆ. ಆದರೆ ತೆಗೆದು ಹಾಕಲಾದ ನೈಜ ಸಂಖ್ಯೆ ಗೊತ್ತಾಗಿಲ್ಲ. ಆದರೆ ಅದರ ಸಂಖ್ಯೆ ಇನ್ನೂ ಹೆಚ್ಚಿದೆ ಎಂದು ಅವರು ಹೇಳಿದ್ದಾರೆ.
ಈ ಮತಗಳ್ಳತವನ್ನು ಯಾರೋ ಪತ್ತೆ ಹಚ್ಚಿದ್ದಾರೆ. ಸಾಧಾರಣ ಎಲ್ಲಾ ಅಪರಾಧಗಳಲ್ಲಿ ಆಗುವಂತೆ, ಇಲ್ಲಿಯೂ ಕಾಕತಾಳೀಯ ಎನ್ನುವಂತೆ ಕಳ್ಳತನ ಬಯಲಾಗಿದೆ. ತಮ್ಮ ಚಿಕ್ಕಪ್ಪನ ಹೆಸರು ಮತದಾರರ ಪಟ್ಟಿಯಿಂದ ಕಾಣೆಯಾಗಿದ್ದು ಬೂತ್ ಮಟ್ಟದ ಅಧಿಕಾರಿಗೆ ಗೊತ್ತಾಗಿದೆ. ಹೆಸರನ್ನು ತೆಗೆದು ಹಾಕಿದ್ದು ಯಾರು ಎಂದು ಪರಿಶೀಲಿಸಿದಾಗ, ನೆರೆಮನೆಯವರೆಂದು ಗೊತ್ತಾಗಿದೆ. ಆದರೆ ಮತದಾರರ ಪಟ್ಟಿಯಿಂದ ಹೆಸರು ತೆಗೆದು ಹಾಕಲ್ಪಟ್ಟವರು, ತೆಗೆದು ಹಾಕಿದವರಿಗೂ ಈ ವಿಷಯ ತಿಳಿದೇ ಇಲ್ಲ. ಯಾವುದೋ ಒಂದು ಶಕ್ತಿ ಇಡೀ ಪ್ರಕ್ರಿಯೆಯನ್ನು ಹೈಜಾಕ್ ಮಾಡಿ ಮತದಾರರ ಪಟ್ಟಿಯಿಂದ ಹೆಸರು ಅಳಿಸಿ ಹಾಕಿದೆ. ಸುದೈವವಶಾತ್ ನಮಗೆ ಅದು ಸಿಕ್ಕಿತು ಎಂದು ರಾಹುಲ್ ಗಾಂಧಿ ಹೇಳಿದ್ದನ್ನು ಕಾಂಗ್ರೆಸ್ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.
ಮತದಾರ ಸೋಗಿನಲ್ಲಿ ಕರ್ನಾಟಕದ ಹೊರಗಿನ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು 6,018 ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಹೆಸರು ತೆಗೆದು ಹಾಕಲಾದ ಹಾಗೂ ತೆಗೆಯಲ್ಪಟ್ಟ ಇಬ್ಬರನ್ನೂ ರಾಹುಲ್ ಗಾಂಧಿ ವೇದಿಕೆಗೆ ಕರೆದರು. ಸಾಫ್ಟ್ವೇರ್ ಬಳಸಿಕೊಂಡು ಈ ಕೃತ್ಯ ಎಸಗಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

