ದಾವಣಗೆರೆ : ತೀರಾ ಅಗತ್ಯ ಇರುವ ಬಡ ಪತ್ರಕರ್ತರಿಗೆ ರಿಯಾಯ್ತಿ ದರದಲ್ಲಿ ನಿವೇಶನ ಒದಗಿಸುವ ಬಗ್ಗೆ ಮುಖ್ಯಮಂತ್ರಿ ಹಾಗೂ ವಸತಿ ಸಚಿವರ ಜೊತೆ ಚರ್ಚಿಸುತ್ತೇನೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಹೇಳಿದರು.
ಜಿಲ್ಲಾ ವರದಿಗಾರರ ಕೂಟ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ನಾನೂ ಕೂಡ ಗ್ರಾಮೀಣ ಭಾಗದಿಂದಲೇ ಪತ್ರಕರ್ತ ವೃತ್ತಿ ಆರಂಭಿಸಿರುವುದರಿಂದ ಪತ್ರಕರ್ತ ಸಮುದಾಯದ ಸಮಸ್ಯೆ, ಸಂಕಷ್ಟಗಳನ್ನು ಅನುಭವಿಸಿದ್ದೇನೆ. ಹೀಗಾಗಿ ಪತ್ರಕರ್ತ ಸಮುದಾಯದ ಎಲ್ಲಾ ಬೇಡಿಕೆಗಳನ್ನೂ ಹಂತ ಹಂತವಾಗಿ ಈಡೇರಿಸಲಾಗಿದೆ. ಗ್ರಾಮೀಣ ಪತ್ರಕರ್ತರ ಪಾಸ್ ಗೆ ವಿಧಿಸಿರುವ ಷರತ್ತುಗಳನ್ನು ಸಡಿಲಗೊಳಿಸುವ ದಿಕ್ಕಿನಲ್ಲಿ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದರು.
ಪತ್ರಕರ್ತರ ಗಿಲ್ಡ್ ಗೆ ಸ್ವಂತ ನಿವೇಶನ ಮತ್ತು ಕಟ್ಟಡ ನಿರ್ಮಿಸಲು ಅಗತ್ಯ ಸಹಕಾರ ನೀಡುವಂತೆ ಗಿಲ್ಡ್ ಪದಾಧಿಕಾರಿಗಳು ಮುಂದಿಟ್ಟ ಬೇಡಿಕೆ ಬಗ್ಗೆಯೂ ಪರಿಶೀಲಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

