ಬೆಳಗಾವಿ, 21 : ಬೆಳಗಾವಿಯ ಭೂತರಾಮನಹಟ್ಟಿಯ ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ 31 ಕೃಷ್ಣ ಮೃಗಗಳ ಸಾವಿಗೆ ಕಾರಣವಾಗಿದ್ದ ಗಳಲೆ ರೋಗ ಬೆಳಗಾವಿ ಜಿಲ್ಲೆಯ ಸಾಕು ಪ್ರಾಣಿಗಳಿಗೂ ವಕ್ಕರಿಸುತ್ತಿದ್ದು ಹಿಮೋರೆಜಕ್ ಸೆಪ್ಟಿಸೀಮಿಯಾ ಬ್ಯಾಕ್ಟೀರಿಯಾ ಸೋಂಕಿಗೆ ಮೃಗಾಲಯಕ್ಕೆ ಹತ್ತಿಕೊಂಡಿರುವ ಕಾಕತಿ ಮತ್ತು ಯಮಕನಮರಡಿಯ ರೈತರ ಜಾನುವಾರುಗಳು ಮೃತಪಡುತ್ತಿವೆ ಎಂದು ಕೇಳಿ ಬಂದಿದೆ.
ಎಚ್.ಎಸ್ ಬ್ಯಾಕ್ಟೀರಿಯಾ ಸೋಂಕಿಗೆ ಆತಂಕಕ್ಕೆ ಒಳಗಾಗಿರುವ ಬೆಳಗಾವಿ ರೈತರ ಏಳು ಜಾನುವಾರುಗಳು ಗಂಟು ರೋಗದಿಂದ ಮೃತಪಟ್ಟಿವೆ. ಮೃತ ಜಾನುವಾರುಗಳಿಗೆ ಹಿಮೋರೆಜಿಕ್ ಸೆಪ್ಟಿಸೆಮೀಯಾ ಸೋಂಕು ತಾಗಿರುವ ಶಂಕೆ ಇದ್ದು ರೈತರಲ್ಲಿ ಆತಂಕ ಮೂಡಿದೆ.
ಬೆಳಗಾವಿಯಲ್ಲಿ ಹಿಮೋರೆಜಿಕ್ ಸೆಪ್ಟಿಸೆಮೀಯಾ ಉಲ್ಭಣ ಆಗುವ ಎಚ್ಚರಿಕೆ ಇದೆ ಎಂದು ರಾಷ್ಟ್ರೀಯ ಪಶು ವೈದ್ಯಕೀಯ ಸಾಂಕ್ರಾಮಿಕ ರೋಗಶಾಸ್ತ್ರ ಮತ್ತು ರೋಗ ಮಾಹಿತಿ ಸಂಸ್ಥೆಯ ಮುನ್ಸೂಚನೆ ನೀಡಿದೆ.
ಪಶುಸಂಗೋಪನೆ ಇಲಾಖೆಗೆ ಈಗಾಗಲೇ ಈ ಸಂದೇಶ ರವಾನಿಸಿರುವ ರಾಷ್ಟ್ರೀಯ ಸಂಸ್ಥೆ ಹಸುಗಳ ಆರೈಕೆ ಹಾಗೂ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ. ಅರಣ್ಯ ಇಲಾಖೆಯಿಂದಲೂ ಪಶು ಸಂಗೋಪನೆ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದರೂ ಇಲ್ಲಿಯವರೆಗೆ ಯಾವುದೇ ಮುಂಜಾಗ್ರತೆ ವಹಿಸದೇ ಪಶು ಸಂಗೋಪನೆ ಅಧಿಕಾರಿಗಳ ನಿರ್ಲಕ್ಷ್ಯ ವಹಿಸಿರುವುದಕ್ಕೆ ಏಳು ಜಾನುವಾರುಗಳು ಬಲಿಯಾಗಿದ್ದಾವೆ ಎನ್ನುವ ಆರೋಪ ರೈತರದ್ದಾಗಿದೆ.
ಸಾಂಕ್ರಾಮಿಕ ಸೋಂಕು ಮೃಗಾಲಯದ ಇತರ ಪ್ರಾಣಿಗಳಿಗೂ ಹರಡದಂತೆ ಮೃಗಾಲಯವನ್ನು ಸ್ಯಾನಿಟೈಸ್ ಮಾಡಲಾಗಿತ್ತು ಮತ್ತು ಸುತ್ತಲಿನ ಜನವಸತಿಗಳಿಗೆ ಎಚ್ಚರಿಕೆ ನೀಡಿ ಸಾಕು ಪ್ರಾಣಿಗಳ ಆರೋಗ್ಯದ ಕುರಿತು ಗಮನವಿಡಲು ಸೂಚಿಸಲಾಗಿತ್ತು.
ಮೃಗಾಲಯದಲ್ಲಿ ಉಳಿದಿರುವ ಏಳು ಕೃಷ್ಣಮೃಗಗಳು ಈಗ ಚೇತರಿಸಿಕೊಳ್ಳುತ್ತಿವೆ.

