ತಾಳಿ ಕಟ್ಟಿದ 15-20 ನಿಮಿಷದಲ್ಲಿ ಕುಸಿದು ಮೃತಪಟ್ಟ ವರ!

A B Dharwadkar
ತಾಳಿ ಕಟ್ಟಿದ 15-20 ನಿಮಿಷದಲ್ಲಿ ಕುಸಿದು ಮೃತಪಟ್ಟ ವರ!

ಜಮಖಂಡಿ : ತಾಳಿ ಕಟ್ಟಿದ 15- 20 ನಿಮಿಷದಲ್ಲಿ ವರ ಮೃತಪಟ್ಟ ಆಘಾತಕಾರಿ ಘಟನೆ ಬಾಗಲಕೋಟ ಜಿಲ್ಲೆಯ ಜಮಖಂಡಿ ನಗರದಲ್ಲಿ ನಡೆದಿದೆ.

ಜಮಖಂಡಿಯ ನಂದಿಕೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭದಲ್ಲಿ ವೇದಿಕೆಯ ಮೇಲೆ ತಾಳಿಕಟ್ಟಿ ಅಕ್ಷತೆ ಬಿದ್ದ ಕೆಲವೇ ಕ್ಷಣಗಳಲ್ಲಿ ಹೃದಯಾಘಾತದಿಂದ ಮದುಮಗ ಕುಸಿದು ಬಿದ್ದಿದ್ದಾನೆ.

ಇದೆಲ್ಲವೂ ಎರಡೂ ಕುಟುಂಬಗಳು ಹಾಗೂ ಆಪ್ತರ ಸಮ್ಮುಖದಲ್ಲೇ ನಡೆದಿದೆ. ಖುಷಿಯಿಂದ ಮದುಮಗಳನ್ನು ಕಲ್ಯಾಣ ಮಂಟಪದಿಂದ ಮನೆಗೆ ಕರೆದುಕೊಂಡು ಹೋಗಬೇಕು ಎಂಬ ಇಚ್ಛೆಯಲ್ಲಿದ್ದ ವರನ ಕುಟುಂಬಕ್ಕೆ ಬರ ಸಿಡಿಲು ಬಡಿದಂತಾಗಿದೆ.

ಜಮಖಂಡಿ ತಾಲೂಕಿನ ಕುಂಬಾರ ಹಳ್ಳ ಗ್ರಾಮದ ನಿವಾಸಿ ಪ್ರವೀಣ (25) ಮೃತ ದುರ್ದೈವಿ ಎಂದು ಹೇಳಲಾಗಿದೆ. ಇಂದು, ಶನಿವಾರ ಅವರ ವಿವಾಹ ನಿಗದಿಯಾಗಿತ್ತು. ಆದರೆ ತಾಳಿ ಕಟ್ಟಿದ ಕೆಲವೇ ಕ್ಷಣಗಳಲ್ಲಿ ಇದ್ದಕ್ಕಿದ್ದಂತೆ ಮದುಮಗನಿಗೆ ಎದೆನೋವು ಕಾಣಿಸಿಕೊಂಡಿತು. ಅಲ್ಲಿಯೇ ಕುಸಿದು ಬಿದ್ದಿದ್ದಾರೆ ಎಂದು ಹೇಳಲಾಗಿದೆ.

ತಾಳಿ ಕಟ್ಟಿದ ನಂತರ, ಅಕ್ಷತಾ ಕಾರ್ಯಕ್ರಮ ಮುಗಿದ ಬಳಿಕ ವೇದಿಕೆ ಕಾರ್ಯಕ್ರಮ ನಡೆದಿದೆ. ಮದ್ಯಾಹ್ನ ಸಮಯದಲ್ಲಿ ವೇದಿಕೆ ಮೇಲೆ ವಧು-ವರ ಪರಸ್ಪರ ಹಾರ ಬದಲಾಯಿಸಿದ್ದಾರೆ. ಬಂಧು-ಬಳಗದವರು ಆಗಮಿಸಿ,‌ ಶುಭ ಹಾರೈಸುವುದಕ್ಕೆ ಪ್ರಾರಂಭ ಆಗುತ್ತಿದ್ದಂತೆ ಹೃದಯಾಘಾತವಾಗಿ ವರ ಕುಸಿದು ಬಿದ್ದಿದ್ದಾರೆ.

ಕುಸಿದು ಬಿದ್ದ ಬಳಿಕ ಮಾತನಾಡದೇ ಇರುವುದನ್ನು ಗಮನಿಸಿ ತಕ್ಷಣವೇ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ವೇಳೆ ವೈದ್ಯರು ಪರೀಕ್ಷೆ ನಡೆಸಿ ಪ್ರವೀಣ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ. ವಧು ಹಾಗೂ ಪೋಷಕರ‌ ಆಕ್ರಂದನ ಮುಗಿಲು ಮುಗಿಲುಮುಟ್ಟಿದೆ.

ಮದುವೆಗೆ ಬಂದ ಸಂಬಂಧಿಕರು ಕಣ್ಣೀರಿಟ್ಟಿದ್ದಾರೆ. ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.