ಬೆಂಗಳೂರು : ಸರ್ಕಾರಿ ಮತ್ತು ಅನುದಾನಿತ ಪದವಿ ಕಾಲೇಜುಗಳಲ್ಲಿ ಪ್ರವೇಶಗಳ ಸಂಖ್ಯೆ 15 ಕ್ಕಿಂತ ಕಡಿಮೆಯಿದ್ದರೆ ಕೋರ್ಸಗಳನ್ನು ನಡೆಸದಿರಲು ಕಾಲೇಜು ಶಿಕ್ಷಣ ಇಲಾಖೆ ನಿರ್ಧರಿಸಿದೆ.
ಕಾಲೇಜು ಶಿಕ್ಷಣ ಇಲಾಖೆಯು ಸುತ್ತೋಲೆ ಹೊರಡಿಸಿದ್ದು, ಪ್ರತಿ ಕೋರ್ಸ್ ಗೆ ಕನಿಷ್ಠ 15 ವಿದ್ಯಾರ್ಥಿಗಳನ್ನು ಖಚಿತಪಡಿಸಿಕೊಳ್ಳಲು ಇಲಾಖೆ ಸರ್ಕಾರಿ ಮತ್ತು ಅನುದಾನಿತ ಪದವಿ ಕಾಲೇಜುಗಳ ಪ್ರಾಂಶುಪಾಲರಿಗೆ ಸೂಚನೆ ನೀಡಿದೆ.
15 ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿದ್ದರೆ, ಪ್ರಾಂಶುಪಾಲರು ಮತ್ತು ಬೋಧಕರು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಇತರ ಕೋರ್ಸಗಳನ್ನು ತೆಗೆದುಕೊಳ್ಳಲು ಮನವೊಲಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಬಿಎಸ್ಸಿ, ಬಿಸಿಎ ಮತ್ತು ಐಚ್ಛಿಕ ಭಾಷಾ ವಿಷಯಗಳಿಗೆ, ಸತತ ಎರಡು ವರ್ಷಗಳವರೆಗೆ 15 ಕ್ಕಿಂತ ಕಡಿಮೆ ಪ್ರವೇಶವಿದ್ದರೆ, ಅಂತಹ ಕೋರ್ಸ್ಗಳನ್ನು ನಿಲ್ಲಿಸಬೇಕು. ಆದಾಗ್ಯೂ, ಐಚ್ಛಿಕ ಕನ್ನಡ ವಿಷಯಕ್ಕೆ ವಿನಾಯಿತಿ ನೀಡಿ, ಇಲಾಖೆ ಕನಿಷ್ಠ ಐದಕ್ಕೆ ಪ್ರವೇಶಗಳನ್ನು ನಿಗದಿಪಡಿಸಿದೆ.
ಎನ್ಇಪಿ ಅಡಿಯಲ್ಲಿ ನೀಡಲಾಗುವ ಐಚ್ಛಿಕ ಮತ್ತು ಮುಕ್ತ ಐಚ್ಛಿಕ ಕೋರ್ಸಗಳಿಗೆ ಸಹ, ವಿಷಯಗಳನ್ನು ನೀಡಲು 15 ವಿದ್ಯಾರ್ಥಿಗಳನ್ನು ಹೊಂದುವುದನ್ನು ಇಲಾಖೆ ಕಡ್ಡಾಯಗೊಳಿಸಿದೆ.
ಪ್ರವೇಶಾತಿ ಆಕಾಂಕ್ಷಿಗಳ ಸಂಖ್ಯೆ ನಿಗದಿತಕ್ಕಿಂತ ಕಡಿಮೆಯಿದ್ದರೆ, ಲಭ್ಯವಿರುವ ಇತರ ಕೋರ್ಸಗಳನ್ನು ತೆಗೆದುಕೊಳ್ಳಲು ಪ್ರಾಂಶುಪಾಲರು ವಿದ್ಯಾರ್ಥಿಗಳನ್ನು ಮನವೊಲಿಸಬೇಕು. ಅವರು ಒಪ್ಪದಿದ್ದರೆ, ಹತ್ತಿರದ ಕಾಲೇಜುಗಳಿಗೆ ಸ್ಥಳಾಂತರಿಸಬೇಕು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.