ರಾಯಪುರ : ಎಂಟು ವರ್ಷದ ಬಾಲಕನೊಬ್ಬ ನಾಗರ ಹಾವನ್ನು ಕಚ್ಚಿ ಸಾಯಿಸಿದ್ದ ವಿಚಿತ್ರ ಘಟನೆ ಛತ್ತೀಸಗಡದ ಜಶಪುರ ಜಿಲ್ಲೆಯ ಪಂದರಪಾಡ ಎಂಬ ಗ್ರಾಮದಲ್ಲಿ ನಡೆದಿದೆ.
ದೀಪಕ ಮನೆಯ ಹಿತ್ತಲಿನಲ್ಲಿ ಆಟವಾಡುತ್ತಿದ್ದಾಗ ವಿಷಪೂರಿತ ನಾಗರಹಾವು ಕೈಗೆ ಸುತ್ತಿಕೊಂಡಿತ್ತು. ದೀಪಕ ಕೈಗೆ ನಾಗರಹಾವು ಕಚ್ಚಿದೆಯಂತೆ. ಹಾವಿನ ಹಿಡಿತವನ್ನು ಬಿಡಿಸಿಕೊಳ್ಳಲು ಸಾಕಷ್ಟು ಪ್ರಯತ್ನಿಸಿದರೂ ಸಾಧ್ಯವಾಗಲೇ ಇಲ್ಲ. ಕೊನೆಗೆ ಬೇರೆ ದಾರಿ ಕಾಣದೇ ಬಾಲಕನೂ ಹಾವಿಗೆ ಎರಡು ಬಾರಿ ಕಚ್ಚಿದ್ದಾನೆ. ಕೂಡಲೇ ಹಾವು ಹಿಡಿತ ಸಡಿಲಿಸಿದೆ.
ಕುಟುಂಬದವರು ಹಾವಿನ ಕಡಿತಕ್ಕೊಳಗಾದ ಬಾಲಕನನ್ನು ಕೂಡಲೇ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು. ಆದರೆ ದೀಪಕನಲ್ಲಿ ಯಾವುದೇ ರೋಗ ಲಕ್ಷಣಗಳಿರಲಿಲ್ಲ. ಹಾವು ಕಚ್ಚಿದಾಗ ವಿಷ ಬಿಡುಗಡೆಯಾಗಿರಲಿಲ್ಲ, ಹಾಗಾಗಿ ಬಚಾವ್ ಆಗಿದ್ದಾನೆ.
ಮನುಷ್ಯರಿಂದ ಕಡಿತಕ್ಕೊಳಗಾಗಿ ಹಾವು ಸಾಯುವುದು ಅತ್ಯಂತ ಅಪರೂಪದ ಪ್ರಕರಣ. ಜಶ್ಪುರ್ ಜಿಲ್ಲೆಯಲ್ಲಿ ಈವರೆಗೂ ಇಂತಹ ಘಟನೆ ನಡೆದಿರಲಿಲ್ಲವಂತೆ. ಜಶಪುರ ಬುಡಕಟ್ಟು ಜಿಲ್ಲೆಯಾಗಿದ್ದು, ಇದನ್ನು ಸರ್ಪಗಳ ವಾಸಸ್ಥಾನ ಎಂದೂ ಕರೆಯುತ್ತಾರೆ.